ಜ್ವರದ ಮಾಹಿತಿ ದಾಖಲಿಸದ ಹನ್ನೊಂದು ಆಸ್ಪತ್ರೆಗಳು ಸೀಜ್

ದಾವಣಗೆರೆ, ಜು. 2-ಸರ್ಕಾ ರದ ಆದೇಶದಂತೆ ಆಸ್ಪತ್ರೆಗಳಿಗೆ ಬರುವವರಲ್ಲಿ ಶೀತ, ಜ್ವರದಂತಹ (ಐಎಲ್‍ಐ) ಮತ್ತು ತೀವ್ರ ಉಸಿರಾಟದ ತೊಂದರೆ ಇರುವ (ಎಸ್‍ಎಆರ್‌ಐ) ಪ್ರಕರಣಗಳನ್ನು ಪ್ರತಿದಿನ ಆರೋಗ್ಯ ಇಲಾಖೆಯ ವೆಬ್‍ಪೋರ್ಟಲ್‍ಗೆ ಅಪ್‍ಡೇಟ್ ಮಾಡದ ನಗರದ 11 ಖಾಸಗಿ ಆಸ್ಪ ತ್ರೆಗಳನ್ನು ಸೀಜ್ ಮಾಡಲಾಗಿದೆ. 

ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಘವೇಂದ್ರ ಸ್ವಾಮಿ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂಗಳನ್ನು ತಾತ್ಕಾ ಲಿಕವಾಗಿ ಸೀಜ್ ಮಾಡಲಾಗಿದೆ.

ಮೊದಲಿಗೆ ಪಿ.ಜೆ. ಬಡಾವಣೆಯಿಂದ ಆರಂಭಿಸಿ ಕೆ.ಬಿ. ಬಡಾವಣೆ, ಬೇತೂರು ರಸ್ತೆ ಗಳಲ್ಲಿನ ಒಟ್ಟು 11 ಆಸ್ಪತ್ರೆಗಳಿಗೆ ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ ಮತ್ತು ತಂಡ ಭೇಟಿ ನೀಡಿ ಐಎಲ್‍ಐ ಮತ್ತು ಎಸ್‍ಎಆರ್‌ಐ ಪ್ರಕರಣ ಗಳಲ್ಲಿ ಪ್ರತಿದಿನ ಏಕೆ ವೆಬ್‍ಪೋ ರ್ಟಲ್‍ನಲ್ಲಿ ಹಾಕುತ್ತಿಲ್ಲವೆಂದು ವಿಚಾರಿಸಿ, ಹೀಗೆ ಅಪ್‍ಡೇಟ್ ಮಾಡದೇ ಇರುವ ಈ ಆಸ್ಪತ್ರೆ ಗಳನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾತ್ಕಾಲಿಕವಾಗಿ ಸೀಜ್ ಮಾಡಿದ್ದಾರೆ.

ಜಿಲ್ಲೆಯಲ್ಲಿ ಐಎಲ್‍ಐ ಮತ್ತು ಎಸ್‍ಎಆರ್‌ಐ ಪ್ರಕರಣ ಅಪ್‍ಡೇಟ್ ಮಾಡದ 170 ಆಸ್ಪತ್ರೆ

ಈ ವೇಳೆ ಡಿಹೆಚ್‍ಓ ಡಾ.ರಾಘವೇಂದ್ರ ಸ್ವಾಮಿ ಮಾತನಾಡಿ, ಸರ್ಕಾರದ ಆದೇಶದ ಮೇರೆಗೆ ಕೊರೊನಾ ನಿಯಂತ್ರಣ ಹಿನ್ನೆಲೆ ಯಲ್ಲಿ ಕಳೆದ 2 ತಿಂಗಳಿಂದ ಆರೋಗ್ಯ ನಿರ್ದೇಶನಾಲಯದ ಆಯುಕ್ತರು, ಕಾರ್ಯದರ್ಶಿಗಳು ಆದೇಶ 

ಹೊರಡಿಸಿ, ಕೆಪಿಎಂಇ ಕಾಯ್ದೆ ಅಡಿ ನೋಂದಣಿಯಾದ ಪ್ರತಿ ಖಾಸಗಿ ಆಸ್ಪತ್ರೆಗಳಿಗೆ ಯೂಸರ್ ಐಡಿ, ಪಾಸ್‍ವರ್ಡ್ ನೀಡಿ ಆನ್‍ಲೈ ನ್ ಮೂಲಕ ತಮ್ಮ ಆಸ್ಪತ್ರೆಗಳಿಗೆ ಬರುವ ಐಎಲ್‍ಐ ಮತ್ತು ಎಸ್‍ಎಆರ್‌ಐ ಪ್ರಕರಣ ಗಳನ್ನು ಅಪ್‍ಡೇಟ್ ಮಾಡಬೇ ಕೆಂದು ತಿಳಿಸಲಾಗಿತ್ತು ಎಂದು ಹೇಳಿದ್ದಾರೆ.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಈ ಬಗ್ಗೆ ಐಎಂಎ, ಖಾಸಗಿ ಆಸ್ಪತ್ರೆಯವರೊಂದಿಗೆ ಸಭೆ ನಡೆಸಿ ಪ್ರತಿದಿನ ಮಾಹಿತಿ ಅಪ್‍ಡೇಟ್ ಮಾಡುವಂತೆ ತಿಳಿಸಿದ್ದರು. ಜೊತೆಗೆ ಅಪ್‍ಡೇಟ್ ಮಾಡಿದವರಿಗೆ ನೋಟಿಸ್ ಸಹ ನೀಡಿದ್ದರೂ ಕೆಲವರು ಅಪ್‍ಡೇಟ್ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿ ಕಾರಿಗಳು ಆದೇಶಿಸಿದ ನಂತರ ಕ್ರಮ ತೆಗೆದುಕೊಳ್ಳಲಾಗಿದೆ ಎಂದವರು ಹೇಳಿದ್ದಾರೆ.

ಜಿಲ್ಲೆಯಲ್ಲಿ ಐಎಲ್‍ಐ ಮತ್ತು ಎಸ್‍ಎಆರ್‌ಐ ಪ್ರಕರಣ ಅಪ್‍ಡೇಟ್ ಮಾಡದ 170 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಕೆಪಿಎಂಇ ಅಡಿಯಲ್ಲಿ ನವೀಕರಿಸದ ಮತ್ತು ಐಎಲ್‍ಐ ಎಸ್‍ಎಆರ್‌ಐ ಪ್ರಕರಣ ವೆಬ್‍ಪೋರ್ಟಲ್‍ನಲ್ಲಿ ದಾಖಲಿಸದೇ ಇರುವ ಒಟ್ಟು 280 ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ. ಕೆಲವು ಆಸ್ಪತ್ರೆಗಳ ನವೀಕರಿಸುವಲ್ಲಿ ಕೆಲವು ಸಮಸ್ಯೆಗಳಿವೆ. ಇವುಗಳಿಗೆ ಪರಿಹಾರೋಪಾಯಗಳ ಬಗ್ಗೆ ನಾಳೆ ಶುಕ್ರವಾರದಂದು ಡಿಹೆಚ್‍ಓ ಕಚೇರಿಯಲ್ಲಿ ಖಾಸಗಿ ಆಸ್ಪತ್ರೆಯವರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೆ ಆಸ್ಪತ್ರೆಗಳವರು ಹಾಜರಾಗಬೇಕು ಹಾಗೂ ಇನ್ನು 15 ದಿನಗಳ ಒಳಗೆ ನೋಂದಣಿ ನವೀಕರಿಸಿಕೊಂಡು ಸರ್ಕಾರದ ಆದೇಶದಂತೆ ನಡೆಯಬೇಕು ಎಂದೂ ಅವರು ತಿಳಿಸಿದ್ದಾರೆ.

ದಾಳಿ ನಡೆಸಿದ ತಂಡದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ, ಬಿಇಹೆಚ್‍ಓ ಡಾ.ಸುರೇಶ್, ಇತರೆ ಸಿಬ್ಬಂದಿಗಳು ಹಾಜರಿದ್ದರು.

error: Content is protected !!