ವೈದ್ಯೋ ನಾರಾಯಣೋ ಹರಿಃ

ಸುಲಭವಲ್ಲ  ವೈದ್ಯ  ವೃತ್ತಿ
ದುಡಿವರು  ದಿನ ರಾತ್ರಿ
ಜಾತಿ, ಮತ  ನೋಡದೇ
ಭೇದ – ಭಾವ  ಮಾಡದೇ
ಹಸಿವು , ನಿದ್ದೆ  ಮರೆತು
ರೋಗಿಗಳ  ಸೇವೆ  ಮಾಡುವರು.

ತಮ್ಮ  ನೋವನು ಮುಚ್ಚಿಟ್ಟು
ಮನೆಯ  ಕೆಲಸ  ಪಕ್ಕಕ್ಕಿಟ್ಟು
ನೋವಲ್ಲಿರುವವರಿಗೆ  ಮಿಡಿವ  ಹೃದಯ
ನರಳುವ ಮನಗಳಿಗೆ  ತೋರಿ ದಯ
ಆರೈಕೆ, ಚಿಕಿತ್ಸೆ  ಮಾಡಿ ಸಹಾಯ
ನೊಂದ  ಜೀವಕ್ಕೆ  ನೀಡುವರು  ಅಭಯ.

ಹಾಯಾಗಿ  ವಿಶ್ರಮಿಸುವಾಗ
ಸಂಭ್ರಮ, ಸಂತೋಷ ಕೂಟದಲ್ಲಿದ್ದಾಗ
ತುರ್ತುಪರಿಸ್ಥಿತಿಯ  ಕರೆ ಬಂದರೆ
ಮಾಡುವರು ಸ್ವಂತ ಸುಖದ ತ್ಯಾಗ
ಪ್ರಾಣ  ಉಳಿಸುವುದಕ್ಕೆ  ಸದಾ ಸಿದ್ದ
ಕರ್ತವ್ಯ ನಿಷ್ಠೆಗೆ ಎಂದಿಗೂ ಬದ್ಧ.

ದೇವರ  ರೂಪದ ವೈದ್ಯರು
ಹಗಲಿರುಳು  ಆರೈಕೆ ಮಾಡುವರು
ಸಾವು – ಬದುಕಿನ  ಹೋರಾಟದಲ್ಲಿ
ಜೀವ ರಕ್ಷಣೆಗೆ  ಪಣ ತೊಡುವರು
ಅವರ ಸಂಕಟ ಬಚ್ಚಿಟ್ಟು
ಜನರ  ಯೋಗಕ್ಷೇಮ  ಕಾಪಾಡುವರು.
ಕೊಡಬೇಕು ಗೌರವ, ಇಡಬೇಕು  ವಿಶ್ವಾಸ, ನಂಬಿಕೆ
ಅದೇ ವೈದ್ಯರಿಗೆ ದೊಡ್ಡ ಕಾಣಿಕೆ.


ಅನುಪಮ ವಿರುಪಾಕ್ಷಪ್ಪ
ದಾವಣಗೆರೆ.
[email protected]

 

error: Content is protected !!