ವೀರ ಯೋಧರಿಗೆ ಗೀತ ನಮನ…

ವೀರ ಸೈನಿಕ ದೇಶ ರಕ್ಷಕ
ಗಡಿಯ ಕಾಯುವ ನಾಯಕ
ದೇಶಕ್ಕಾಗಿಯೇ ಜೀವತೆತ್ತು
ಅಮರನಾದನು ಮಾಂತ್ರಿಕ.

ತಂದೆ-ತಾಯಿಯ ಬಂಧು-ಬಳಗವ
ಬಿಟ್ಟು ದೂರಕೆ ಸಾಗಿದ
ದೇಶಸೇವೆಯೇ ಈಶಸೇವೆ
ಎಂದು ಸೇನೆಯ ಸೇರಿದ
ಬಿಸಿಲು ಎನ್ನದೆ ಮಳೆಗೆ ಅಂಜದೆ
ಚಳಿಯಲಿ ಮುನ್ನುಗ್ಗಿದ
ಸ್ವಾರ್ಥವಿಲ್ಲದೇ ಪರಹಿತಾರ್ಥಕೆ
ಪ್ರಾಣಾರ್ಪಣೆ ಮಾಡಿದ.

ಉಗ್ರರೊಂದಿಗೆ ಧೈರ್ಯದಿಂದಲಿ
ಯುದ್ಧವನ್ನೇ ಸಾರಿದ
ವೈರಿಪಡೆಯನು ನಾಶಮಾಡಲು
ಸೈನ್ಯವನ್ನೇ ಕಟ್ಟಿದ
ಮದ್ದುಗುಂಡುಗಳ ದಾಳಿಗೆ
ಹೆದರದೆ ಮೈಯೊಡ್ಡಿದ
ತನ್ನ ಪ್ರಾಣವ ಧಾರೆಯೆರೆಯುತ
ರಾಷ್ಟ್ರಧ್ವಜಕೆ ನಮಿಸಿದ.

ಯೋಧರಂತೆ ಸ್ಥೈರ್ಯದಿಂದಲಿ
ಕಷ್ಟಗಳನೆದುರಿಸುತಲಿ
ಶಿಸ್ತು ಸಂಯಮ ದೇಶಭಕ್ತಿಯ
ಅವರ ನೋಡಿ ಕಲಿಯುವಾ
ಎಲ್ಲರೂ ಒಗ್ಗಟ್ಟಿನಿಂದಲಿ
ಬಾಳಿ ಬದುಕಿ ನಡೆಯುವಾ
ರಾಷ್ಟ್ರ ಪ್ರೇಮವ ಮೆರೆಸಿದಂಥ
ಯೋಧರಿಗೆ ನಾವ್ ನಮಿಸುವಾ…


ಜಿ.ಎಸ್.ಗಾಯತ್ರಿ
ಶಿಕ್ಷಕಿ, ಬಾಪೂಜಿ ಶಾಲೆ
ಹರಿಹರ.

error: Content is protected !!