ಜೂಜಿನ ಪಾರಿವಾಳ : ಯುವಕನ ಮೇಲೆ ಹಲ್ಲೆ

ದಾವಣಗೆರೆ, ಜೂ.14- ಜೂಜಿನ ಪಾರಿವಾಳ ವಿಚಾರದ ಹಿನ್ನೆಲೆಯಲ್ಲಿ ಯುವಕರ ಗುಂಪೊಂದು ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ  ಘಟನೆ ನಗರದ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ.

ಶ್ರೀನಿವಾಸ ನಗರದ ನಟರಾಜ್ (30) ಹಲ್ಲೆಗೊಳಗಾದ ಯುವಕ. ಭಾರತ್ ಕಾಲೋನಿಯ ಸಂತೋಷ್ ಹಾಗೂ ಅವನ ಗೆಳೆಯರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನಟರಾಜ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಟರಾಜ್ ಪಾರಿವಾಳಗಳನ್ನು ಸಾಕಿ ಅವುಗಳಿಗೆ ತರಬೇತಿ ನೀಡಿ ಜೂಜಿಗೆ ಬಿಡುತ್ತಿದ್ದ. ಹೀಗಾಗಿ ಸಂತೋಷ್ ಹಾಗೂ ಆತನ ಗೆಳೆಯರು   ಪಾರಿವಾಳ ವನ್ನು ಖರೀದಿಸಲು ನಟರಾಜ್ ಮನೆಗೆ ಬಂದಿದ್ದರು. ಆದರೆ ನಟರಾಜ್ ಪಾರಿವಾಳ ಮಾರಾಟ ಮಾಡಲು ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಸಂತೋಷ್ ಗಲಾಟೆ ನಡೆಸಿದ. ಬಳಿಕ ನಟರಾಜ್‍ನನ್ನು ಚರಂಡಿಯಲ್ಲಿ ಕೂರಿಸಿ ಮನಬಂದಂತೆ ಥಳಿಸಿದ್ದಾರೆನ್ನಲಾಗಿದೆ.

ಸ್ಥಳೀಯರು ಹಾಗೂ ನಟರಾಜ್ ಕುಟುಂಬಸ್ಥರು ಬಿಡಿಸಲು ಬಂದರೂ ಸಂತೋಷ್ ಹಾಗೂ ಆತನ ಸ್ನೇಹಿತರು ನಟರಾಜ್‍ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವೇಳೆ ಸ್ಥಳದಲ್ಲಿದ್ದ ಕೆಲ ಯುವಕರು ತಮ್ಮ ಮೊಬೈಲ್‍ನಲ್ಲಿ ಗಲಾಟೆಯ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ.

error: Content is protected !!