ಪ್ರಾಗಿತಿಹಾಸಿಕ ಕಾಲದ ಗೀರು ಬಂಡೆಚಿತ್ರಗಳು ಪತ್ತೆ

ಜಗಳೂರು, ಜೂ.12- ತಾಲ್ಲೂಕಿನ ಆಕ ನೂರು ಗ್ರಾಮಕ್ಕೆ ಸೇರುವ ಆಕನೂರು ಕ್ರಾಸ್‍ನ ಹೊಲದ ಮಧ್ಯಭಾಗದಲ್ಲಿ ಕಂಡುಬರುವ ದಿಬ್ಬದ ಬಂಡೆಯ ಮೇಲೆ ಪ್ರಾಗಿತಿಹಾಸದ ಕಾಲಕ್ಕೆ ಸಂಬಂಧಿಸಿದ ಗೀರು ಚಿತ್ರಗಳು ಕಂಡು ಬಂದಿವೆ. ಪ್ರಸ್ತುತ ಈ ಗೀರು ಬಂಡೆ ಚಿತ್ರಗಳು ದಾವಣಗೆರೆ ಜಿಲ್ಲೆಯಲ್ಲಿಯೇ ದೊರೆತ ಪ್ರಥಮ ಪ್ರಾಗಿತಿಹಾಸ ಕಾಲದ ನೆಲೆಯಾಗಿದೆ ಎಂದು ಇತಿಹಾಸ ಮತ್ತು ಪುರಾತತ್ವ ಸಂಶೋಧಕ ಸೀಮಾ ರೆಹಮಾನ್ ತಿಳಿಸಿದ್ದಾರೆ.

ಈ ನೆಲೆಯಲ್ಲಿ ಡುಬ್ಬದ ಗೂಳಿ, ಕಲ್ಗುಳಿ ಗಳು, ಮಾನವನ ಪಾದದ ರೇಖಾ ಚಿತ್ರಗಳು, ಚೆನ್ನಮಣೆ ಆಟದ ಕುಳಿಗಳು ಪತ್ತೆಯಾಗಿವೆ. ಪ್ರಮುಖವಾಗಿ ಮಾನವನ ರೇಖಾ ಚಿತ್ರ, ಮಂಡಲ, ಶ್ವಾನ, ಸೂರ್ಯ ಮತ್ತು ಹಾವಿನ ಮಾದರಿಯ ಗೀರು ಚಿತ್ರಗಳು ದೊರೆತಿವೆ. 

ಪ್ರಾಗಿತಿಹಾಸ ಕಾಲಕ್ಕೆ ಸಂಬಂಧಪಟ್ಟ ಈ ನೆಲೆಯಲ್ಲಿ ಪ್ರತಿಯೊಂದು ಬಂಡೆಗಳ ಸಾಲಿನಲ್ಲಿ ಗೀರು ಚಿತ್ರಗಳನ್ನು ಕಾಣಬಹುದು. ನೆಲೆಯ ಸಮೀಪದ ಹೊಲದಲ್ಲಿ ಸೂಕ್ಷ್ಮ ಶಿಲಾಯುಗಕ್ಕೆ ಸಂಬಂಧಪಟ್ಟಂತಹ ಉಪಕರಣಗಳು, ಹೊಳಪುಳ್ಳ ಕಪ್ಪು ಬಣ್ಣದ ಮಡಕೆ ಚೂರುಗಳು ಮತ್ತು ನೂತನ ಶಿಲಾಯುಗದ ಕಲ್ಲಿನ ಕೊಡಲಿಯು ಪತ್ತೆಯಾಗಿದೆ. ಈ ನೆಲೆಯಲ್ಲಿ ಸೂಕ್ಷ್ಮ ಶಿಲಾಯುಗ, ನೂತನ ಶಿಲಾಯುಗ, ಬೃಹತ್ ಶಿಲಾಯುಗದಿಂದ ಹಿಡಿದು ಇತಿಹಾಸ ಕಾಲಘಟ್ಟದವರೆಗಿನ ಪ್ರಾಚ್ಯವಶೇಷಗಳು ಪತ್ತೆಯಾಗಿದ್ದು, ಕ್ಷೇತ್ರ ಕಾರ್ಯ ಶೋಧನೆಯನ್ನು ಮುಂದುವರೆಸಲಾಗಿದೆ.

ಈ ನೆಲೆಗೆ ಇತಿಹಾಸ ಮತ್ತು ಪುರಾತತ್ವ ಸಂಶೊಧಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಮತ್ತು ಸುಪ್ರೀತ ಕೆ.ಎನ್. ಕಳಸ ಭೇಟಿ ನೀಡಿದ್ದು, ಕ್ಷೇತ್ರ ಕಾರ್ಯ ಶೋಧದಲ್ಲಿ ಸಹಕಾರ ನೀಡಿದ್ದಾರೆ.

ಈ ನೆಲೆಯು ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದಂತೆ ಪ್ರಾಗಿತಿಹಾಸ ಕಾಲದ ಮಾನವನ ಚಟುವಟಿಕೆಗಳನ್ನು ತಿಳಿಸುವ ಪ್ರಮುಖ ನೆಲೆಯಾಗಿದೆ. 

ಪ್ರಸ್ತುತ ಈ ನೆಲೆಯು ಕಲ್ಲಿನ ಗಣಿಗಾರಿಕೆಯಿಂದ ನಾಶವಾಗುತ್ತಿದ್ದು, ಪುರಾತತ್ವ ಇಲಾಖೆ ಮತ್ತು ಜಿಲ್ಲೆಯ ಪ್ರಮುಖ ಇಲಾಖೆಯು ಇದನ್ನು ಸಂರಕ್ಷಿಸಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ಈ ನೆಲೆಯು ಸಂಪೂರ್ಣವಾಗಿ ನಾಶವಾಗಲಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

error: Content is protected !!