ಕೈಗಾರಿಕೆ ವಿಕೇಂದ್ರೀಕರಣ… ಇಂದಿನ ಅವಶ್ಯಕತೆ

ನಮ್ಮ ದೇಶದಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಬೃಹತ್ ಕೈಗಾರಿಕೆಗಳು ಹಾಗೂ ಉದ್ದಿಮೆಗಳು ಸ್ಥಾಪನೆಗೊಂಡಿದ್ದು, ಇಡೀ ದೇಶದ ಬಹುಪಾಲು ದುಡಿಯುವ ವರ್ಗವನ್ನೂ ತಮ್ಮೆಡೆಗೆ ಆಕರ್ಷಿಸಿ ನಗರಗಳು ಜನದಟ್ಟಣೆಯಿಂದ ತುಂಬಿ ತುಳುಕಿ ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹರ ಸಾಹಸ ಪಡುವಂತಾಗಿದೆ. ಈ ನಗರಗಳು ತಮ್ಮ ಸುತ್ತಲಿನ ನೂರಾರು ಹಳ್ಳಿಗಳನ್ನು ತಮ್ಮ ಒಡಲಲ್ಲಿ ಹಾಕಿಕೊಂಡು ಅಜಾನುಬಾಹುವಾಗಿ ಬೆಳೆದು ನಿಂತಿವೆ. ಇಲ್ಲಿಗೆ ವಲಸೆ ಬಂದಿರುವ ಶ್ರಮಿಕ ವರ್ಗ ದಿನದಲ್ಲಿ 8 ಘಂಟೆ ದುಡಿಯಲು 5-6 ಘಂಟೆ ಪ್ರಯಾಣ ಮಾಡುವಂತಹ ಸ್ಥಿತಿ ಬಂದಿದೆ. ಇದರ ಜತೆಗೆ ಪ್ರಯಾಣ ಸಮಯದಲ್ಲಿ ವಾಹನಗಳು ಹೊರಸೂಸುವ ಕಾರ್ಬನ್ ಸೇವಿಸುತ್ತಾ ಅರ್ಧ ಲೀ. ಪೆಟ್ರೋಲ್ ಸುಟ್ಟು ಒಂದು ಘಂಟೆ ಸಮಯದಲ್ಲಿ ಕ್ರಮಿಸುವ ದಾರಿಯನ್ನು ಎರಡು ಲೀಟರ್‌ ಪೆಟ್ರೋಲ್ ಸುಟ್ಟು 2-3 ಘಂಟೆ ಸಮಯದಲ್ಲಿ ಕ್ರಮಿಸುವಂತಹ ಸ್ಥಿತಿ ಇದ್ದು ಆರೋಗ್ಯ, ಸಮಯ ಹಾಗೂ ಹಣ ಮೂರನ್ನೂ ಅನಾವಶ್ಯವಾಗಿ ವ್ಯಯಿಸುವಂತಾಗಿದೆ.

ಈ ಬೃಹತ್ ನಗರಗಳಲ್ಲಿನ ಕೈಗಾರಿಕೆ ಗಳನ್ನು ನಂಬಿ ಕೆಲಸಗಾರರು ವಲಸೆ ಬಂದರೆ, ಅತಿಯಾಗಿ ವಲಸೆ ಬರುವ ಕೆಲಸಗಾರರನ್ನು ನಂಬಿ ಕೋಟ್ಯಾಂತರ ಬಂಡವಾಳ ಹೂಡಿ ಬೃಹತ್ ಕೈಗಾರಿಕೆಗಳು ಹಾಗೂ ಉದ್ದಿಮೆಗಳು ಸ್ಥಾಪನೆಗೊಂಡಿವೆ. ಈಗ ಮಾರ್ಚ್ ತಿಂಗಳಿನಿಂದ ಕೊರೊನಾ ಹಾವಳಿಯಿಂದ ಲಾಕ್‌ಡೌನ್ ಘೋಷಣೆಯಾಗಿದ್ದು, ಕೈಗಾರಿಕೆ, ವ್ಯಾಪಾರೋದ್ಯಮಗಳು ಸ್ಥಗಿತಗೊಂಡಿದ್ದು, ಕೆಲಸಗಾರರಿಗೆ ಕೆಲಸವಿಲ್ಲದಂತಾಗಿ ತಮ್ಮ ತವರೂರುಗಳತ್ತ ದೌಡಾಯಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ, ತವರು ಸೇರಿದ ಬಹಳಷ್ಟು ಜನ ಮತ್ತೆ ಕೆಲಸ ಅರಸಿ ನಗರಗಳತ್ತ  ಬರುವುದು ಅನುಮಾನವೆನಿಸುತ್ತದೆ, ತವರಿನಲ್ಲುಳಿದ ಈ ಜನ ತಮಗೆ ಅನುಭವ ಇರುವ ಕೆಲಸ ದೊರಕದೆ, ತಮ್ಮ ಪೂರ್ವಜರ ಕಸುಬು, ವ್ಯಾಪಾರ, ಹೊಲ-ಗದ್ದೆಗಳ ಕೆಲಸಗಳನ್ನೂ ಮಾಡಲಾಗದೆ ನಿರುದ್ಯೋಗಿಗಳಾಗಿ ಖಿನ್ನತೆಗೆ ಒಳಗಾಗುವ ಕರಾಳ ಛಾಯೆ ಮೂಡುವಂತಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡು ಸಣ್ಣ-ಸಣ್ಣ ಕೈಗಾರಿಕೆಗಳು ದೇಶಾದ್ಯಂತ ತಾಲ್ಲೂಕು ಮಟ್ಟದಲ್ಲಿ ಸ್ಥಾಪನೆಯಾಗುವಂತೆ ಕ್ರಮ ಕೈಗೊಳ್ಳುವುದು ಅತೀ ಅವಶ್ಯ. ಈ ಹಿಂದೆಯೇ ಕೈಗಾರಿಕೆ ವಿಕೇಂದ್ರೀಕರಣಗೊಳಿಸಿದ್ದರೆ ಇಂದು ಈ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ.

ಇತ್ತೀಚೆಗೆ ಕೊರೊನಾ ಹಾವಳಿಯಿಂದ ಚೀನಾದಲ್ಲಿನ ಹಲವಾರು ಕೈಗಾರಿಕೆಗಳು ನಮ್ಮ ಭಾರತದ ಕಡೆ ಮುಖ ಮಾಡಿರುವುದರಿಂದ ಈ ಕೈಗಾರಿಕೆಗಳು ಮತ್ತೆ ಬೃಹತ್ ನಗರಗಳಲ್ಲಿ ಕೆಂದ್ರೀಕರಿಸದಂತೆ ಎಚ್ಚರಿಕೆ ವಹಿಸಿ, ದೇಶಾದ್ಯಂತ ಗ್ರಾಮದಲ್ಲಿ ಹಾಗೂ ಪಟ್ಟಣಗಳಲ್ಲಿ ಸ್ಥಾಪನೆಯಾಗುವಂತೆ ಸರ್ಕಾರಗಳು ತೀರ್ಮಾನಿಸಿ ತಮ್ಮ ಜವಾಬ್ದಾರಿ ಮೆರೆಯಬೇಕಾಗಿದೆ. ಆ ಮೂಲಕ ಗ್ರಾಮಾಂತರದ ಯುವಕರಿಗೆ ಅಲ್ಲೇ ಕೆಲಸ ದೊರಕುವಂತೆ ಮಾಡುವುದರಿಂದ ಇಡೀ ದೇಶದ ಪ್ರಗತಿಗೆ ಪೂರಕ ವಾತಾವರಣವನ್ನು ಸೃಷ್ಟಿಸಿದಂತಾಗುತ್ತದೆ. ಜೊತೆಗೆ ದೊಡ್ಡ ನಗರಗಳ ಜನದಟ್ಟಣೆಯ ಒತ್ತಡವನ್ನು ನಿಯಂತ್ರಿಸಿ ಪರಿಸರವನ್ನೂ ರಕ್ಷಿಸಿದಂತಾಗುತ್ತದೆ. ನಮ್ಮ ದೇಶದ ಪ್ರತಿಯೊಬ್ಬ ಶಾಸಕರರೂ ಪಣ ತೊಟ್ಟು ತಮ್ಮ ಕ್ಷೇತ್ರದಲ್ಲಿ ಕನಿಷ್ಟ ಒಂದಾದರೂ ಕೈಗಾರಿಕೆ ಸ್ಥಾಪಿಸಲು ನಿರ್ಧರಿಸಿ ಸಫಲರಾದಲ್ಲಿ ಜನತೆಯ ಅಭಿವೃದ್ಧಿ ಹಾಗೂ ಕ್ಷೇತ್ರದ ಬೆಳವಣಿಗೆಯೊಂದಿಗೆ ದೇಶದ ಬೆಳವಣಿಗೆಗೆ ಭಾರೀ ಕೊಡುಗೆ ನೀಡಿದಂತಾಗುತ್ತದೆ.

ಆ ನಿಟ್ಟಿನಲ್ಲಿ ನಮ್ಮ ಜನಪ್ರತಿನಿಧಿಗಳು ಕ್ರಿಯಾಶೀಲರಾಗಲಿ ಎಂದು ಆಶಿಸೋಣ.

ಇತ್ತೀಚೆಗಷ್ಟೇ ನಮ್ಮ ದೇಶದ ವಿತ್ತ ಸಚಿವರು, ಆರ್ ಬಿ ಐ ಗವರ್ನರ್ ರವರು ಹಲವಾರು ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಣೆ ಮಾಡಿದ್ದು, ಸದರಿ ಪ್ಯಾಕೇಜ್‌ಗಳು ತಾಲ್ಲೂಕು ಮಟ್ಟದಲ್ಲಿ ಸ್ಥಾಪನೆಯಾಗಿರುವ ಹಾಗೂ ಸ್ಥಾಪನೆಯಾಗುವ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಗಳಿಗೆ ಮಾತ್ರ ಸೀಮಿತ ವಾದರೆ ಇಡೀ ದೇಶದ ಜನತೆಗೆ ತಲುಪಿದಂತಾ ಗುತ್ತದೆ. ಘೋಷಿತ ಪ್ಯಾಕೇಜ್‌ಗಳು ಬರೀ ಘೋಷಣೆಗಳಾಗಿ ಉಳಿಯದೇ ಜನತೆಯನ್ನು ತಲುಪುವಂತಾಗಲಿ. ಇನ್ನು ರಾಜ್ಯದ ಮುಖ್ಯಮಂತ್ರಿಗಳು ಹಲವಾರು ಕೊಡುಗೆಗಳನ್ನು ಕಸುಬಿನ ಆಧಾರದ ಮೇಲೆ ಘೋಷಣೆ ಮಾಡಿದ್ದು, ಬಡತನದ ಆಧಾರದ ಮೇಲೆ ನೀಡಿದರೆ ರಾಜ್ಯದ ಎಲ್ಲಾ ಬಡ ಜನತೆಗೆ ಕೊಡುಗೆ ತಲುಪುವಂತೆ ಆಗುತ್ತದೆ. ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಎಲ್ಲ ರಾಜಕೀಯ ಪಕ್ಷಗಳೂ ಜಾತಿ ಆಧಾರಿತ ಕೊಡುಗೆಗಳನ್ನು ನೀಡಿದ್ದು ಸಾಕು. ಇನ್ನಾದರೂ ನಮ್ಮ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಹೊಲಸು ಜಾತಿ ರಾಜಕೀಯ ಬಿಟ್ಟು ಬಡತ ನವನ್ನೇ ಮಾನದಂಡವಾಗಿ ಇಟ್ಟುಕೊಂಡು ಕೊಡುಗೆ ನೀಡುವತ್ತ ಕ್ರಮವಿಡಲಿ ಎಂದು ಆಶಿಸೋಣ.


ಕೈಗಾರಿಕೆ ವಿಕೇಂದ್ರೀಕರಣ... ಇಂದಿನ ಅವಶ್ಯಕತೆ - Janathavaniಐಗೂರು ಸಿ. ಚಂದ್ರಶೇಖರ್‌
ದಾವಣಗೆರೆ.
ಮೊ: 98445 37171

error: Content is protected !!