ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಜಾಗೃತದ ದಳದ ದಿಢೀರ್ ಭೇಟಿ

ದಾವಣಗೆರೆ, ಮೇ 29- ಸಂತೇಬೆನ್ನೂರು ಹೊಬಳಿಯ ವೆಂಕಟೇಶ್ವರ ಕ್ಯಾಂಪ್, ಬೆಳ್ಳಿಗನೂಡು ಮತ್ತು ಸಂತೆಬೆನ್ನೂರು ಗ್ರಾಮಗಳ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಹಾಗು ರೈತ ಸಂಪರ್ಕ ಕೇಂದ್ರಕ್ಕೆ ಜಾಗೃತ ದಳದ ಜಂಟಿ ಕೃಷಿ ನಿರ್ದೇಶಕರ ತಂಡ ಅನಿರೀಕ್ಷಿತ ಭೇಟಿ ನೀಡಿ ಬೀಜ, ರಸಗೊಬ್ಬರ ಹಾಗು ಕೀಟನಾಶಕಗಳ ದಾಸ್ತಾನು ಮತ್ತು ವಿತರಣೆ ಬಗ್ಗೆ ಪರೀಶೀಲನೆ ನಡೆಸಿತು.

ಜಾಗೃತ ಕೋಶದ ಜಂಟಿ ಕೃಷಿ ನಿರ್ದೇಶಕ ಪಿ.ರಮೇಶ್‌ಕುಮಾರ್ ನೇತೃತ್ವದ ತಂಡವು, ವಿವಿಧ ತಯಾರಿಕಾ ಕಂಪನಿಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲು  ಸಂತೆಬೆನ್ನೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಿಗೆ ಸೂಚಿಸಿತು. ನಕಲಿ ಅಥವಾ ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಹಾಗು ಕೀಟನಾಶಕ ಮಾರಾಟ ಮಾಡುವುದು ಕಂಡುಬಂದರೆ ಅಂತಹ ಮಾರಾಟಗಾರರ ಪರವಾನಿಗೆಯನ್ನು ರದ್ದುಪಡಿಸಲಾಗು ವುದೆಂದು ಎಚ್ಚರಿಕೆ ನೀಡಲಾಯಿತು.

ಮಾರಾಟ ಮಳಿಗೆಗಳ ಮುಂದೆ ರಸಗೊಬ್ಬರ ಮಾರಾಟದ ದರ ಮತ್ತು ದಾಸ್ತಾನು ಬಗ್ಗೆ ರೈತರಿಗೆ ಕಾಣುವಂತೆ ಸೂಚನಾ ಫಲಕವನ್ನು ಕಡ್ಡಾಯವಾಗಿ ಹಾಕಬೇಕು.  ರಸಗೊಬ್ಬರ ಮಾರಾಟವನ್ನು ಪಿಓಎಸ್ ಯಂತ್ರದ ಮೂಲಕ ರೈತರಿಂದ ಆಧಾರ್ ಸಂಖ್ಯೆಯನ್ನು ಪಡೆದು ಬಿಲ್ಲನ್ನು ರೈತರಿಗೆ ಕಡ್ಡಾಯವಾಗಿ ನೀಡುವಂತೆ ಅಧಿಕಾರಿಗಳು ಸೂಚಿಸಿದರು.

 ಬಿತ್ತನೆ ಬೀಜ ವಿತರಿಸುವಾಗ ಬಿಲ್ಲಿನಲ್ಲಿ ಕಡ್ಡಾಯವಾಗಿ ಲಾಟ್ ಸಂಖ್ಯೆಯನ್ನು ನಮೂದಿಸಿ, ರೈತರ ಸಹಿ ಪಡೆದು ವಿತರಿಸುವಂತೆ, ಅವಧಿ ಮೀರಿದ ಕೀಟನಾಶಕಗಳನ್ನು ಮಾರಾಟ ಮಾಡದಂತೆ ಸೂಚಿಸಲಾಯಿತು.  ಕೆಲವು ಜೈವಿಕ ಉತ್ಪನ್ನಗಳಲ್ಲಿ ಪೀಡೆನಾಶಕ ಅಂಶ ಇರುವುದು ತಿಳಿದುಬಂದಿದ್ದು  ಅಂತಹ ಜೈವಿಕ ಉತ್ಪನ್ನಗಳನ್ನು ನಿಷೇಧಿಸಲಾಗಿದೆ. ಅವುಗಳನ್ನು ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡುವುದು ಕಂಡು ಬಂದರೆ ಅಂತಹ ಮಾರಾಟಗಾರರ ವಿರುದ್ದ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಪಾಸಣೆ ಸಮಯದಲ್ಲಿ ಜಿಲ್ಲಾ ಜಾರಿದಳದ ಸಹಾಯಕ ಕೃಷಿ ನಿರ್ದೇಶಕರುಗಳಾದ ಕೆ.ಸಿರಿಯಣ್ಣ, ಎಂ.ಟಿ. ಸುನೀಲ್ ಕುಮಾರ್, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ಮಹಮ್ಮದ್ ರಫಿ ಹಾಗು ಸಂತೇಬೆನ್ನೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಿ.ಬಿ. ಕುಮಾರ್  ಹಾಜರಿದ್ದರು.

error: Content is protected !!