ಮೊಬೈಲ್ ಕೋವಿಡ್-19 ಮೊಬೈಲ್ ಫೀವರ್ ಕ್ಲಿನಿಕ್ಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಬುಧವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ್, ಪಾಲಿಕೆ ಮೇಯರ್ ಬಿ.ಜಿ. ಅಜಯ ಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಹಾಗೂ ಇತರರು ಉಪಸ್ಥಿತರಿದ್ದರು.
ಇದೇ ವೇಳೆ ಕೋವಿಡ್ ಕರ್ತವ್ಯ ನಿರ್ವಹಿಸಿದ್ದ ವಾಹನ ಚಾಲಕರು ಮತ್ತು ನಿರ್ವಾಹಕರಿಗೆ ಹೂ ಹಾಕಿ, ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಲಾಯಿತು.
ಸಂಸದರಿಗಾಗಿ ಕಾದ ಸಾರಿಗೆ ಸಚಿವ : ಬಿಸಿಲಿಗೆ ಬಳಲಿದ ವಾರಿಯರ್ಸ್
ದಾವಣಗೆರೆ, ಮೇ 27-ಸಚಿವರು ಬಂದರೂ ನಡೆಯದ ಉದ್ಘಾಟನೆ, ಕಾದು ಸುಸ್ತಾದ ಆರೋಗ್ಯ ಇಲಾಖೆ ಹಾಗೂ ಕೆಎಸ್ಸಾರ್ಟಿಸಿ ಸಿಬ್ಬಂದಿಗಳು, ಬಿಸಿಲಿನ ತಾಪಕ್ಕೆ ಬಳಲಿದ ಕೋವಿಡ್ ವಾರಿಯರ್ಸ್.
ಹೌದು, ಸಾರಿಗೆ ಸಚಿವ ಲಕ್ಷ್ಮಣ ಸವದಿ ಬುಧವಾರ ಬೆಳಿಗ್ಗೆ 11 ಗಂಟೆಗೆ ಕೆಎಸ್ಸಾರ್ಟಿಸಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ಹಾಗೂ ಮೊಬೈಲ್ ಕೋವಿಡ್ ಫೀವರ್ ಕ್ಲಿನಿಕ್ಗೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದೇ ವೇಳೆ ಕೋವಿಡ್ ಕೆಲಸ ಮಾಡಿದ ವಾರಿಯರ್ಸ್ಗೆ ಹೂಮಳೆ ಸುರಿಸಿ ಅಭಿನಂದಿಸುವ ಕಾರ್ಯಕ್ರಮವೂ ಇತ್ತು.
ಸಚಿವ ಲಕ್ಷ್ಮಣ ಸವದಿ ಅವರು ಮಧ್ಯಾಹ್ನ 12 ಗಂಟೆಗೆ ಬರುತ್ತಲೇ ಕಾಯುತ್ತಾ ಕುಳಿತಿದ್ದವರು ಒಂದಿಷ್ಟು ನಿಟ್ಟುಸಿರು ಬಿಟ್ಟರು. ಆದರೆ ಸಂಸದರು ಬರಲಿ ಎಂದು ಹೇಳಿ ಸಚಿವರು ಒಳ ನಡೆದು ಸಭೆ ಆರಂಭಿಸಿದರು. ಸಂಸದರು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕಂದಾಯ ಸಚಿವರೊಂದಿಗೆ ನಡೆದ ಸಭೆ ಮುಗಿಸಿ ಕೊಂಡು ಬಂದಾಗ ಮಧ್ಯಾಹ್ನ 1.30. ಉದ್ಘಾಟನಾ ಕಾರ್ಯಕ್ರಮ ನಡೆದಿದ್ದು 1.45. ಅಷ್ಟರಲ್ಲಾಗಲೇ ಫಿವರ್ ಕ್ಲಿನಿಕ್ ಸಿಬ್ಬಂದಿಗಳು, ನಿಗಮದ ಸಿಬ್ಬಂದಿಗಳು, ಕೋವಿಡ್ ವಾರಿಯರ್ಸ್ ಬಿಸಿಲಿನ ತಾಪಕ್ಕೆ ಬಳಲಿದ್ದರು. ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದರು.