ಬರುವ ಜೂನ್ – ಜುಲೈನಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ವಿಕೇಂದ್ರೀಕರಣ ಗೊಳಿಸಿ ನಡೆಸುವ ಬಗ್ಗೆ ಕರ್ನಾಟಕ ಸರ್ಕಾರ, ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವರು ಹಾಗೂ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳುವ ಅವಕಾಶಕ್ಕೆ ಮುಂದಾಗಬಹುದಾಗಿದೆ. ಇಂದಿನ ಕೊರೊನಾ ಸೋಂಕಿನಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಭಯ ಮತ್ತು ಆತಂಕದ ವಾತಾವರಣದಿಂದ ಚಿಂತಾಕ್ರಾಂತರಾಗಿ ಕಾಲ ಕಳೆಯುತ್ತಿದ್ದಾರೆ.
ಈಗಾಗಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಇಂತಹ ವಾತಾವರಣದಲ್ಲಿ ಪರೀಕ್ಷೆಯನ್ನು ನಡೆಸದಂತೆ ಕರ್ನಾಟಕ ರಾಜ್ಯದ ಉಚ್ಛ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಿರುವುದನ್ನು ನಾವು ಕಾಣಬಹುದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರೀಯ ಪರೀಕ್ಷಾ (ಸಿಬಿಎಸ್ಇ) ಮಂಡ ಳಿಯು ಆಯಾ ಶಾಲಾ ಮಟ್ಟದಲ್ಲಿಯೇ ಪರೀಕ್ಷೆ ನಡೆಸಲು ಮುಂದಾಗಿರುವುದು ತಿಳಿ ದುಬಂದಿದೆ. ಹೀಗಿರುವಾಗ ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಇದೇ ಮಾದರಿಯಲ್ಲಿಯೇ ಪರೀಕ್ಷೆ ನಡೆಸಲು ಮುಂದಾಗಬಹುದು.
ಈ ವರ್ಷ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು 8.40 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ರಾಜ್ಯದ 2879 ಪರೀಕ್ಷಾ ಕೇಂದ್ರಗಳಲ್ಲಿ 43,720 ಕೊಠಡಿಗಳಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಒಂದೊಂದು ಪರೀಕ್ಷಾ ಕೇಂದ್ರದಲ್ಲಿ ಸುಮಾರು ಮೂರಾಲ್ಕು ಶಾಲೆಗಳಿಂದ 200 ರಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದೆಡೆ ಸೇರಿ ಪರೀಕ್ಷೆ ಬರೆಯಬೇಕಾಗುತ್ತದೆ. ಅಷ್ಟೇ ವಿದ್ಯಾರ್ಥಿಗಳನ್ನು ಅವರವರ ಪೋಷಕರು ಪರೀಕ್ಷಾ ಕೇಂದ್ರಕ್ಕೆ ಕರೆತರುವುದು, ಪರೀಕ್ಷೆ ಮುಗಿಯುವವರೆಗೂ ಕಾದಿದ್ದು, ವಿದ್ಯಾರ್ಥಿಗಳನ್ನು ತಮ್ಮ ತಮ್ಮ ವಾಹನಗಳಲ್ಲಿ ಮನೆಗೆ ಕರೆದುಕೊಂಡು ಹೋಗಬೇಕಾಗುತ್ತದೆ.
ಈ ವ್ಯವಸ್ಥೆಯು ಒಂದು ಪರೀಕ್ಷಾ ಜಾತ್ರೆಯಾಗಿ ಮಾರ್ಪಟ್ಟು ಇಂದಿನ ಕೊರೊನಾ ರೋಗಾಣುಗಳು ಪಸರಿಸಲು ಕಾರಣವಾಗಬಹುದೆಂಬ ಆತಂಕವನ್ನು ಅನೇಕ ಶಿಕ್ಷಣ ತಜ್ಞರು, ಪೋಷಕರು ಹಾಗೂ ಶಿಕ್ಷಕ ಸಂಘಟನೆಗಳು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಶಿಕ್ಷಕರು ಹಾಗೂ ದಾವಣಗೆರೆ ಜಿಲ್ಲಾ ಪ್ರೌಢಶಾಲಾ ಮುಖ್ಯೋ ಪಾಧ್ಯಾಯರ ಸಂಘದ ಗೌರವಾಧ್ಯಕ್ಷ ಬಿ. ದಿಳ್ಳೆಪ್ಪ ಅಂಥ ವರನ್ನು ಸಂಪರ್ಕಿಸಿದಾಗ ಇಂತಹ ಭಯದ ವಾತಾವರಣದಲ್ಲಿ ಪರೀಕ್ಷೆಯನ್ನು ವಿಕೇಂ ದ್ರೀಕರಣಗೊಳಿಸಿ ನಡೆಸುವುದೇ ಸೂಕ್ತವಾ ಗಿದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ನಾನು ಪ್ರೌಢಶಾಲಾ ನಿವೃತ್ತ ಮುಖ್ಯೋ ಪಾಧ್ಯಾಯನಾಗಿ, ಎಸ್ಸೆಸ್ಸೆಲ್ಸಿ ಪರೀಕ್ಷಾ ಮೌಲ್ಯ ಮಾಪನಗಳ ಜಿಲ್ಲಾ ಕೇಂದ್ರದ ಮುಖ್ಯಸ್ಥನಾಗಿ ಹಾಗೂ ಕರ್ನಾಟಕ ರಾಜ್ಯ ಪ್ರೌಢಶಾಲಾ ಪಠ್ಯಪುಸ್ತಕಗಳ ಪರಿಷ್ಕೃತ ರಚನಾ ಸಮಿತಿಯಲ್ಲಿ ಸದಸ್ಯನಾಗಿ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಹಾಗೂ ಜಿಲ್ಲಾ ಶಿಕ್ಷಕರ ಸಂಘಟನೆಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿರುವ ಹಿನ್ನೆಲೆಯಲ್ಲಿ ಈ ಕೊರೊನಾ ಭಯದ ವಾತಾವರಣದಲ್ಲಿ ಎಸ್ಸೆಸೆಲ್ಸಿ ಪರೀಕ್ಷೆಯನ್ನು ವಿಕೇಂದ್ರೀಕರಣಗೊಳಿಸಿ ಆಯಾ ಶಾಲಾ ಮಟ್ಟಗಳಲ್ಲಿಯೇ ನಡೆಸುವುದು ಅತ್ಯಂತ ಉಪಯುಕ್ತ ಮಾರ್ಗವಾಗಬಹುದೆಂದು ಭಾವಿಸುತ್ತೇನೆ. ಈಗಾಗಲೇ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಸಿದ್ಧಪಡಿಸಿ ಕೊಂಡಿರುವ ಕಾರ್ಯಸೂಚಿಗಳ ಆಧಾರದ ಮೇಲೆಯೇ ಪ್ರಶ್ನೆ ಪತ್ರಿಕೆಗಳ ವಿತರಣೆ ಹಾಗೂ ಉತ್ತರ ಪತ್ರಿಕೆಗಳ ಸಂಗ್ರ ಹಣೆಯನ್ನು ಈಗಿನ ನಿಯಮ ಗಳಂತೆಯೇ ಮುಂದುವರೆಸಿಕೊಂಡು ಹೋಗಬಹು ದೆಂದು ಆಯಾ ಶಾಲೆಗಳಲ್ಲಿಯೇ ಆಯಾ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡುವುದು.
ಆದರೆ, ಆ ಪರೀಕ್ಷೆ ನಡೆಸುವ ಮುಖ್ಯ ಸ್ಥರು ಮತ್ತು ಕೊಠಡಿಯ ಮೇಲ್ವಿಚಾರಕರನ್ನು ಬೇರೆ ಶಾಲೆಗಳಿಂದ ನಿಯೋಜಿಸಿ ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡಿ ಕೊಂಡು, ಕೊರೊನಾ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದರಿಂದ ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆಯನ್ನು ಬರೆಯು ವಂತಾಗುತ್ತದೆ. ಮೌಲ್ಯಮಾಪನವನ್ನು ಈ ಹಿಂದಿನ ಬದ್ಧತೆ ಗಳಂತೆಯೇ ಡಿ ಕೋಡಿಂಗ್ ಮಾಡಿ ಪರೀಕ್ಷಾ ಮಂಡಳಿಯು ಆಯಾ ಜಿಲ್ಲಾ ಉಪನಿರ್ದೇಶಕರ ಮತ್ತು ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಮೌಲ್ಯಮಾಪನ ಕೇಂದ್ರಗಳನ್ನು ತಾಲ್ಲೂಕು ಮಟ್ಟಗಳಲ್ಲಿಯೇ ಸ್ಥಾಪಿಸಿ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವುದು ಅತ್ಯಂತ ಸೂಕ್ತವಾಗುತ್ತದೆ. ಇಂತಹ ಹೊಸ ಚಿಂತನೆಯನ್ನು ಕರ್ನಾಟಕ ಘನ ಸರ್ಕಾರವು ಹಾಗೂ ಇಂದಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಅತ್ಯಂತ ಕ್ರಿಯಾಶೀಲರೂ ಹಾಗೂ ಜಾಣೆಯ ನಡೆಯುಳ್ಳವರೂ ಆಗಿರುವ ಎಸ್.ಸುರೇಶ್ ಕುಮಾರ್ ಅವರು ಈ ಎಲ್ಲಾ ಪರ್ಯಾಯ ಚಿಂತನೆಗಳ ಬಗ್ಗೆ ಕೂಲಂಕುಶವಾಗಿ ಮತ್ತೊಮ್ಮೆ ಚರ್ಚಿಸಿ, ವಿದ್ಯಾರ್ಥಿಗಳನ್ನು ಕೊರೊನಾ ರೋಗಾಣುವಿನಿಂದ ಭಯಮುಕ್ತ ರಾಗು ವಂತೆ ಮಾಡುವುದು ಅತ್ಯಂತ ಅವಶ್ಯಕ ಹಾಗೂ ಅನಿ ವಾರ್ಯವಾಗಿದೆ. ಈಗಾಗಲೇ ಅಮೆರಿಕಾದಂತಹ ದೇಶವೂ ಸಹ ತಮ್ಮ ದೇಶದ ಎಲ್ಲಾ ಶಾಲಾ-ಕಾಲೇಜುಗಳಿಗೆ ಭಯದ ವಾತಾವರಣದ ಅಡಿಯಲ್ಲಿಈ ವರ್ಷವಿಡೀ ಶೈಕ್ಷಣಿಕ ರಜೆ ಎಂದು ಘೋಷಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಎಲ್ಲಾ ಅಭಿಪ್ರಾಯಗಳನ್ನು ಸಾರ್ವಜನಿಕರ ಚಿಂತನೆಗೆ ಹರಿಬಿಟ್ಟಿದ್ದೇನೆ. ಸ್ವೀಕರಿಸುವುದು, ಬಿಡುವುದು ಸರ್ಕಾರಕ್ಕೆ ಮತ್ತು ಶಿಕ್ಷಣ ಸಚಿವರಿಗೆ ಬಿಟ್ಟಿದ್ದು.
– ಬಿ.ವಾಮದೇವಪ್ಪ,
ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಕ್ಷರು,
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ದಾವಣಗೆರೆ.
ಮೊ. : 94488 12704