ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸಂಸದರ ಸೂಚನೆ

ದಾವಣಗೆರೆ,ಆ.19- ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ಸಂಬಂಧಿಸಿದ ರಸ್ತೆ ಕಾಮಗಾರಿಗಳಲ್ಲಿ ಕಳಪೆ ಕಂಡುಬಂದಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಡಾ. ಜಿ.ಎಂ. ಸಿದ್ದೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಗುರುವಾರ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಕಾರ್ಯಾಗಾರ ಉದ್ಘಾ ಟಿಸಿ ಅವರು ಮಾತನಾಡಿದರು.

ಗುತ್ತಿಗೆದಾರರು ಟೆಂಡರ್ ಮೊತ್ತದಲ್ಲಿ ಶೇ.10-15 ರಷ್ಟು ಕಡಿಮೆ ಟೆಂಡರ್ ಹಾಕಿಸುವುದರಿಂದ ಗುಣಮಟ್ಟದ ಕಾಮಗಾರಿ ಮಾಡಲು ಸಾಧ್ಯವಾಗದೆ, ಕಾಮಗಾರಿಗಳು ಕಳಪೆಯಾಗಿರುತ್ತವೆ. ಆದ್ದರಿಂದ ಇಂಜಿನಿಯರ್‍ಗಳು, ಕಂಟ್ರ್ಯಾಕ್ಟ ರ್‍ಗಳು ನಿಯಮಗಳನ್ನು ಸರಿಯಾಗಿ ಪರಿಪಾಲನೆ ಮಾಡಬೇಕು. ಅಧಿಕಾರಿಗಳು ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸರಿಯಾಗಿ ಪರಿಶೀಲಿಸಬೇಕು. ಒಂದು ವೇಳೆ ಕಳಪೆಯಾದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಾಧ್ಯವಾದಲ್ಲಿ ಇಂತಹ ಕಾಮಗಾರಿಗಳ ಟೆಂಡರ್ ಮೊತ್ತಕ್ಕೆ ಶೇ. 15 ಕ್ಕಿಂತ ಕಡಿಮೆ ದರ ನಮೂದಿಸಿದ ಟೆಂಡರ್‌ಗಳನ್ನು ಪುನರ್ ಪರಿಶೀಲಿಸಿ, ಗುಣಮಟ್ಟದ ಕಾಮಗಾರಿ ಕೈಗೊಳ್ಳುವವರಿಗೆ ಟೆಂಡರ್ ನೀಡಬೇಕು.  ಇದರಿಂದ ಗುಣಮಟ್ಟದ ಕಾಮಗಾರಿಗಳನ್ನು ಮಾಡಲು ಸಾಧ್ಯ. ಉತ್ತಮ ಕಾಮಗಾರಿಗಳನ್ನು ಕೈಗೊಂಡು ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ಸರ್ಕಾರದ ಅನೇಕ ಯೋಜನೆಗಳನ್ನು ತರಲಾಗುತ್ತಿದೆ, ಸಾಕಷ್ಟು ಹಣ ವ್ಯಯ ಮಾಡಲಾಗುತ್ತಿದೆ.  ಅದನ್ನು  ಸದುಪಯೋಗ ಪಡಿಸಿಕೊಂಡು ಉತ್ತಮ ಕಾಮಗಾರಿ ನಿರ್ಮಾಣಕ್ಕೆ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಜಿ.ಪಂ. ಉಪಕಾರ್ಯದರ್ಶಿ ಆನಂದ್ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

error: Content is protected !!