ಕೊರೊನಾ ಸಾವಿಗೆ ಸಮಯ ಮಿತಿ ಬೇಡ

ದಾವಣಗೆರೆ, ಅ. 7 – ಕೊರೊನಾ ಸೋಂಕಿನ ಹತ್ತು ದಿನಗಳ ನಂತರ ಅಂಗಾಂಗ ವೈಫಲ್ಯ ಉಂಟಾಗಿ ಸಾವು ಸಂಭವಿಸಿದರೂ ಅದನ್ನು ಕೊರೊನಾದಿಂದ ಸಂಭವಿಸಿದ ಸಾವು ಎಂದು ಪರಿಗಣಿಸಿ ಕ್ರಮ ತೆಗೆದುಕೊಳ್ಳುವಂತೆ ಸಚಿವ ಭೈರತಿ ಬಸವರಾಜ್ ಸೂಚಿಸಿದ್ದಾರೆ.

ಕೊರೊನಾ ಹಾಗೂ ಪ್ರವಾಹ ಪರಿಸ್ಥಿತಿ ಕುರಿತಂತೆ ಜಿಲ್ಲಾಡಳಿತ ಭವನದಲ್ಲಿ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಕೊರೊನಾದಿಂದ ಸಾವು ಸಂಭವಿಸಿದ ಪ್ರತಿ ಕುಟುಂಬಕ್ಕೂ ಪರಿಹಾರ ತಲುಪಬೇಕು. ಹೀಗಾಗಿ ಸಾವುಗಳನ್ನು ದಾಖಲಿಸಬೇಕು ಎಂದು ಹೇಳಿದರು.

ಈ ಬಗ್ಗೆ ಪ್ರಸ್ತಾಪಿಸಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಸೋಂಕು ಬಂದ ಹತ್ತು ದಿನಗಳಲ್ಲಿ ಸಾವು ಸಂಭವಿಸಿದರೆ ಕೊರೊನಾ ಸಾವು ಎಂದು ಪರಿಗಣಿಸಲಾಗುತ್ತಿದೆ. ನಂತರ ಅಂಗಾಂಗ ವೈಫಲ್ಯ ಉಂಟಾದರೆ ಕೊರೊನಾ ಸಾವು ಎಂದು ನಮೂದಿಸುತ್ತಿಲ್ಲ ಎಂದರು.

ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಜಗಳೂರಿನಲ್ಲಿ ಅಧಿಕೃತವಾಗಿ ಕೊರೊನಾದಿಂದ ಮೃತರ ಸಂಖ್ಯೆ 9 ಎಂದು ಹೇಳಲಾಗುತ್ತಿದೆ. ಆದರೆ, ಸಚಿವರೇ 20-22 ಜನರ ಸಾವಿಗೆ ಸಾಂತ್ವನ ಹೇಳಿದ್ದಾರೆ. ನಾವು ಕೈಯಿಂದ ಪರಿಹಾರ ಕೊಟ್ಟಿದ್ದೇವೆ ಎಂದರು.

ಈ ಬಗ್ಗೆ ಉತ್ತರಿಸಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ. ರಾಘವನ್, ಈ- ಜನ್ಮ ತಂತ್ರಾಂಶದಲ್ಲಿ ಸಾವುಗಳನ್ನು ನಮೂದಿಸಲಾಗುತ್ತಿದೆ. ಇದರಲ್ಲಿ 684 ಸಾವುಗಳನ್ನು ದಾಖಲಿಸಲಾಗಿದೆ ಎಂದರು.

ಬಿಪಿಎಲ್ ಹಾಗೂ ಎಪಿಎಲ್ ಭೇದವಿಲ್ಲದೇ ಕೊರೊನಾದಿಂದ ಮೃತರಾದ ಕುಟುಂಬಕ್ಕೆ ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರದ ಬಳಿ ಪ್ರಸ್ತಾಪಿಸಿರುವುದಾಗಿ ಹೇಳಿದ ಸಚಿವ ಭೈರತಿ ಬಸವರಾಜ್, ಸಾವುಗಳ ಬಗ್ಗೆ ಸರಿಯಾದ ವಿವರಗಳನ್ನು ದಾಖಲಿಸುವಂತೆ ಸೂಚಿಸಿದರು.

error: Content is protected !!