ಲಸಿಕೆ ನೀಡುವಲ್ಲಿ ತಾರತಮ್ಯ : ಎಸ್ಸೆಸ್ ಆಕ್ರೋಶ

ದಾವಣಗೆರೆ, ಜೂ.28- ಜನರು ಲಸಿಕೆ ಸಿಗದೇ ಸಾಯ್ತಾ ಇದ್ದಾರೆ. ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರು ಕಷ್ಟಕ್ಕೆ ಸ್ಪಂದಿಸುವುದು ಬಿಟ್ಟು ಇದರಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕಿದೆ. ಜನರೇ ಪಾಠ ಕಲಿಸಬೇಕು ಅಷ್ಟೇ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಾ. ಶಾಮನೂರು ಶಿವಶಂಕರಪ್ಪ ಮತ್ತು ಶಾಮನೂರು ಮಲ್ಲಿಕಾರ್ಜುನ್ ಅವರು ನೀಡುತ್ತಿರುವ ಕೊರೊನಾ ಉಚಿತ ಲಸಿಕಾ ಶಿಬಿರವು ಕೆ.ಬಿ. ಬಡಾವಣೆಯಲ್ಲಿ ಇಂದು ಏರ್ಪಡಾಗಿದ್ದ ಸಂದರ್ಭದಲ್ಲಿ ಶಿಬಿರಕ್ಕೆ ಭೇಟಿ ನೀಡಿದ್ದ ಅವರು, ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ  ಮಾತನಾಡಿದರು.

ನಾವು ಈ ಭಾಗದಲ್ಲಿ ನಾಲ್ಕು ನೂರು ಲಸಿಕೆ ನೀಡಿದ್ದೇವೆ. ಸರ್ಕಾರದವರು ವ್ಯಾಕ್ಸಿನ್ ನೀಡುತ್ತೇವೆ ಎಂಬ ಭರವಸೆ ನೀಡಿದ್ದರು. ಆದರೆ, ಈ ಭಾಗದ ಕಾರ್ಪೊರೇಟರ್ ಹೇಳಿದರೆಂದು ಸಂಸದರು ಸರ್ಕಾರ ನೀಡಬೇಕಾದ ವ್ಯಾಕ್ಸಿನ್ ನೀಡಲು ತಡೆದಿದ್ದಾರೆಂದು ದೂರಿದರು.

ಲಸಿಕೆ ನೀಡದ ಕಾರಣ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಈ ವಾರ್ಡ್‌ನ ಕಾರ್ಪೊರೇಟರ್ ಆಗಿರುವ ಮೇಯರ್, ಸಂಸದ ಸಿದ್ದೇಶ್ವರ ಬಳಿ ಹೋಗಿ ಅತ್ತು, ಕರೆದು ಅಧಿಕಾರಿಗಳನ್ನು ಹೆದರಿಸಿ ಸರ್ಕಾರದಿಂದ ನೀಡುತ್ತೇವೆ ಎಂದಿದ್ದ ಲಸಿಕೆ ಬಾರದಂತೆ ತಡೆ ಯಲಾಗಿದೆ. ಇದಕ್ಕೆ ಸಿದ್ದೇಶ್ವರ ಒಪ್ಪಿದ ಕಾರಣ ಬಂದಿಲ್ಲ. ಜನರು ಬೆಳಿಗ್ಗೆಯಿಂದಲೂ ಕಾಯುತ್ತಿ ದ್ದಾರೆ. ಜನರ ಪ್ರಾಣ ಉಳಿಸುವ ಲಸಿಕೆ ನೀಡುವಂತಹ ಕಾರ್ಯದಲ್ಲಿ ರಾಜಕೀಯ ಮಾಡಿದವರಿಗೆ ಜನರು ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಕೆ.ಜಿ. ಶಿವಕುಮಾರ್,  ಎಸ್ಸೆಸ್ ಅವರು 200 ಲಸಿಕೆ ನೀಡುವುದಾಗಿ ಹೇಳಿದ್ದರು. ಅದರಂತೆ ಬಂದಿವೆ. ಆದರೆ, ಕಾರ್ಪೊರೇಟರ್ ಹಾಗೂ ಸಂಸದರು ಅಧಿಕಾರಿಗಳನ್ನು ಹೆದರಿಸಿ ಸರ್ಕಾರದಿಂದ ನೀಡುತ್ತೇವೆ ಎಂದಿದ್ದ 300 ಲಸಿಕೆ ನೀಡದಂತೆ ತಡೆದಿದ್ದಾರೆ. ಶಾಸಕರು ಜನರ ಜೀವ ಉಳಿಸಲು ಮುಂದಾದರೆ, ಬಿಜೆಪಿಯವರು ಜನರ ಜೀವ ತೆಗೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಜನರು ಹೆಚ್ಚಾಗಿರುವ ಕಾರಣ ಶಾಮನೂರು ಶಿವಶಂಕರಪ್ಪನವರು 200 ಲಸಿಕೆ ವ್ಯವಸ್ಥೆ ಮಾಡುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಇಂತಹ ವಿಚಾರಗಳಲ್ಲಿ ರಾಜಕೀಯ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ದೊಗ್ಗಳ್ಳಿ ಬಸವರಾಜ್, ಮಾಜಿ ಸದಸ್ಯ ಕಿರುವಾಡಿ ಸೋಮಶೇಖರ್, ಉದ್ಯಮಿ ಕೋಗುಂಡಿ ಬಕ್ಕೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಸೇವಾದಳದ ಜಿಲ್ಲಾಧ್ಯಕ್ಷ ಡೋಲಿ ಚಂದ್ರು, ರುದ್ರೇಶ್, ಸಿರಿಗೆರೆ ರುದ್ರೇಶ್, ವಿಲಾಸ್, ಭುವ ಪ್ರಕಾಶ್, ಐನಳ್ಳಿ ವೀರಣ್ಣ, ಶರತ್, ವೀರೇಶ್ ಮೊಬೈಲ್, ಪುನೀತ್, ರಾಕಿ,  ಜೆಡಿಎಸ್ ಮುಖಂಡರುಗಳಾದ ವೀರಭದ್ರಸ್ವಾಮಿ, ರಾಜೇಶ್, ಪ್ರವೀಣ್ ಫಾರ್ಮ, ಜೆ.ಜೆ.ಎಂ.ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ|| ಮುರುಗೇಶ್, ಗೋಪಾಲಕೃಷ್ಣ ಮತ್ತು ಸಿಬ್ಬಂದಿ ವರ್ಗದವರು  ಮತ್ತಿತರರಿದ್ದರು.

error: Content is protected !!