ಸಂಚಾರಿ ಕುರುಬರಿಗೆ ತೊಂದರೆ ನೀಡಬೇಡಿ

ಅರಣ್ಯ ಇಲಾಖೆಗೆ ಕುರುಬ ಸಮಾಜದ ಹಿರಿಯ ಮುಖಂಡ ಮುಕುಡಪ್ಪ ಮನವಿ

ದಾವಣಗೆರೆ,ಆ.5- ಅರಣ್ಯ ಪ್ರದೇಶದಲ್ಲಿ ಬೀಡು ಬಿಡುವ ಸಂಚಾರಿ ಕುರುಬರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ಎಸಗುತ್ತಾ ಬದುಕಲು ಬಿಡುತ್ತಿಲ್ಲ ಎಂದು ರಾಜ್ಯ ಕುರುಬ ಸಮಾಜದ ಹಿರಿಯ ಮುಖಂಡ ಕೆ. ಮುಕುಡಪ್ಪ ಆರೋಪಿಸಿದ್ದಾರೆ.

ನಗರದ ಹೊರ ಹೊಲದಲ್ಲಿ ಸಂಚಾರಿ ಕುರಿಗಾಹಿಗಳು ಬೀಡು ಬಿಟ್ಟಿರುವ ಸ್ಥಳದಲ್ಲಿ ಇಂದು ಸಭೆ ನಡೆಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 18 ಲಕ್ಷ ಸಂಚಾರಿ ಕುರಿಗಾಹಿಗಳಿದ್ದು, ಅವರು ಕಾಡುಮೇಡುಗಳಲ್ಲಿಯೇ ಟೆಂಟ್ ಹಾಕಿ ವಾಸ್ತವ್ಯ ಹೂಡುತ್ತಾರೆ. 

ಆದರೆ, ಈಗ್ಗೆ ಕಳೆದ ಕೆಲವು ದಿನಗಳಿಂದ ಹೊಸಪೇಟೆ, ಉಜ್ಜಯಿನಿಯಲ್ಲಿ ಬೀಡುಬಿಟ್ಟಿದ್ದ ಅವರುಗಳಿಂದ ಗಿಡ, ಮರಗಳಿಗೆ ಹಾನಿಯಾಗಬಹುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಸಂಚಾರಿ ಕುರಿಗಾಹಿಗಳ ಟೆಂಟ್ ವಶಪಡಿಸಿಕೊಳ್ಳುವುದು ಸೇರಿದಂತೆ ಅವರುಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಣಿಗಾರಿಕೆ ಮಾಡುತ್ತಿರುವುದರಿಂದ ಅರಣ್ಯ ನಾಶ ಆಗುತ್ತಿದೆಯೇ ಹೊರತು ಸಂಚಾರಿ ಕುರಿಗಾಹಿಗಳಿಂದಲ್ಲ. ಸಂಚಾರಿ ಕುರಿಗಾಹಿಗಳಿಂದ ಅರಣ್ಯ ಇಲಾಖೆಗೆ ಅನುಕೂಲವಿದ್ದು, ಬೀಡು ಬಿಟ್ಟಾಗ ಕುರಿಗಳು ಪಿಕ್ಕೆಯು ಅರಣ್ಯದಲ್ಲಿನ ಸಸಿ, ಮರಗಳಿಗೆ ಗೊಬ್ಬರ ವಾಗಲಿದೆ. ಹಾಗಾಗಿ ಕುರಿಗಾಹಿಗಳಿಗೆ ತೊಂದರೆ ಕೊಡದಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದರು.

ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆ ಹೊಂದಿರುವ ಕುರುಬ ಸಮಾಜದಲ್ಲಿ ಶೇ.30 ರಷ್ಟು ಸಂಚಾರಿ ಕುರುಬರಿದ್ದಾರೆ. ಆದರೆ, ಅವರಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ದಕ್ಕುತ್ತಿಲ್ಲ. ಸೌಲಭ್ಯಕ್ಕಾಗಿ ಅಲೆದಾಡಿಸಲಾಗುತ್ತಿದೆ. ಕುರಿಗಳು ಸಾವು  ಕಂಡರೂ ಪರಿಹಾರ ಸಿಗುತ್ತಿಲ್ಲ. ಯಾವ ಬ್ಯಾಂಕ್  ಸಾಲ ಕೋಡುವುದಿಲ್ಲ. ಆದ್ದರಿಂದ ಅವರೆಲ್ಲರೂ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ 1.50 ಕೋಟಿ ಕುರಿಗಳಿದ್ದು, ಅದರಲ್ಲಿ 1.20 ಕೋಟಿ ಕುರಿಗಳು ಸಂಚಾರಿ ಕುರುಬರ ಹತ್ತಿರ ಇವೆ. ಅವರೇನಿದ್ದರೂ ಕಾಡಲ್ಲಿಯೇ ವಾಸ ಇರುತ್ತಾರೆ. ಬೆಳಗಾವಿ, ಆಂಧ್ರ, ಮಹಾರಾಷ್ಟದಿಂದ ಬಂದಿದ್ದಾರೆ ಅಲ್ಲಿನ ಜನರು ಅವರ ಟೆಂಟ್ ಕಿತ್ತುಹಾಕಿ ತೊಂದರೆ ಕೊಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿರುವ ಸಂಚಾರಿ ಕುರಿಗಾರರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ 2009 ರಿಂದ ಮೂರು-ನಾಲ್ಕು ಬಾರಿ ಕುರಿಗಾಹಿ ಸಮಾವೇಶ ಮಾಡಿದ್ದೆವು. ವರ್ಗ 1ರಲ್ಲಿ ಅವರನ್ನು ಸೇರಿಸುವಂತೆ ಒತ್ತಾಯಿಸಲಾಗಿತ್ತು. ಆದರೆ, ಇದುವರೆಗೂ ಸರ್ಕಾರ ಅವರತ್ತ ಗಮನಹರಿಸಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ  ಗಿರೀಶ್, ಲಕ್ಕಪ್ಪ, ಮಾರ್ತಾಂಡಪ್ಪ, ದೀಪಕ್, ಸಿದ್ದರಾಮಪ್ಪ, ಜಯಮ್ಮ, ಮುರರಿ, ಸಿದ್ಧಪ್ಪ ಇದ್ದರು.

error: Content is protected !!