ಜಿಲ್ಲೆಯಲ್ಲಿ ಪಾಸಿಟಿವಿಟಿ ಹೆಚ್ಚಳ

ಹೋಂ ಐಸೋಲೇಷನ್ ಇದ್ದವರ ಮನೆಗೆ ಸ್ಟಿಕ್ಕರ್ ಅಂಟಿಸಲು ಡಿಸಿ ಸೂಚನೆ

ಮಾರ್ಚ್ 3ನೇ ವಾರ 40 ಪ್ರಕರಣಪಾಸಿಟಿವಿಟಿ ಪ್ರಮಾಣ 0.29ಕ್ಕೆ ಹೆಚ್ಚಳ

ದಾವಣಗೆರೆ, ಮಾ.23 – ಕೋವಿಡ್ ವ್ಯಾಪಕ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಸೋಂಕು ದೃಢಪಟ್ಟು ಹೋಂ ಐಸೋಲೇಷನ್‍ನಲ್ಲಿ ಇರುವವರ ಮನೆಗೆ ‘ಕೋವಿಡ್ ಹೋಂ ಐಸೋಲೇ ಷನ್’ ಎಂಬ ಬರಹವುಳ್ಳ ಸ್ಟಿಕ್ಕರ್ ಅಂಟಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.   

ಜಿಲ್ಲಾಡಳಿತ ಭವನದ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲೆಯ ವೈದ್ಯಕೀಯ ತಜ್ಞರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ದಾವಣಗೆರೆ ನಗರದಲ್ಲಿ ಕೋವಿಡ್ ಸೋಂಕು ದೃಢಪಟ್ಟ 28 ಜನ ಹೋಂ ಐಸೋಲೇಷನ್‍ನಲ್ಲಿ ಇದ್ದು, ಇವರು ಹೊರಗಡೆ ಎಲ್ಲಿಯೂ ಓಡಾಡದೆ, ಸಮರ್ಪಕವಾಗಿ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು.  ಇವರಿಂದ ಬೇರೆಯವರಿಗೆ ಸೋಂಕು ಹರಡದಂತೆ ಮುಂಜಾ ಗ್ರತಾ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.  ಹೀಗಾಗಿ ಎಚ್ಚರಿಕೆ ವಹಿಸುವ ಸಲುವಾಗಿ, ಹಾಗೂ ಆರೋಗ್ಯ ಕಾರ್ಯಕರ್ತರು ಸಮರ್ಪಕ ವೈದ್ಯಕೀಯ ನೆರವು ನೀಡುವ ಸಲುವಾಗಿ, ಹೋಂ ಐಸೋಲೇಷನ್ ಇರುವವರ ಮನೆಗೆ  ಸ್ಟಿಕ್ಕರ್ ಅಂಟಿಸುವಂತೆ ಸೂಚಿಸಿದರು.

ಪಾಸಿಟಿವಿಟಿ ಹೆಚ್ಚಳ ಆತಂಕ : ಕಳೆದ ತಿಂಗಳು ಕಡಿಮೆ ಸಂಖ್ಯೆಯಲ್ಲಿ ಕಂಡುಬರುತ್ತಿದ್ದ ಕೋವಿಡ್ ಸೋಂಕು ಪ್ರಕರಣಗಳು ಮಾರ್ಚ್ ಮೂರನೇ ವಾರದಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿದೆ.  ಮಾರ್ಚ್ ಎರಡನೇ ವಾರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು 23 ವರದಿಯಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ. 0.19 ರಷ್ಟು ಇತ್ತು.  ಇದೀಗ ಮಾರ್ಚ್ ಮೂರನೇ ವಾರದಲ್ಲಿ 40 ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವಿಟಿ ಪ್ರಮಾಣ 0.29 ಕ್ಕೆ ಹೆಚ್ಚಳವಾಗಿರುವುದು ಆತಂಕಕಾರಿಯಾಗಿದೆ ಎಂದರು.

ಜಿಲ್ಲೆಯಲ್ಲಿ ನಿಗದಿಗಿಂತಲೂ ಹೆಚ್ಚು ಆರ್‍ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.  ರೋಗ ಲಕ್ಷಣ ಇರುವವರು ಪರೀಕ್ಷೆಗೆ ಒಳಪಡು ತ್ತಿದ್ದಾರೆ ಹೀಗಾಗಿ ಪರೀಕ್ಷೆಯಲ್ಲಿ ಯಾವುದೇ ತೊಂದರೆ ಇಲ್ಲ.  ಶಾಲಾ ಮಕ್ಕಳು ಮತ್ತು ಹಾಸ್ಟೆಲ್ ಮಕ್ಕಳಿಗೆ ನಿಯಮಿತವಾಗಿ ಕೋವಿಡ್ ಪರೀಕ್ಷೆ ನಡೆಸುವಂತೆ ಸರ್ಕಾರ ಸೂಚನೆ ನೀಡಿದ್ದು, ಅದರಂತೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಹೇಳಿದರು.  

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಪರೀಕ್ಷೆಗೆ ಮಾದರಿಯನ್ನು ಸಮರ್ಪಕವಾಗಿ, ಕ್ರಮಬದ್ಧವಾಗಿ ಸಂಗ್ರಹಿಸುತ್ತಿಲ್ಲ ಎಂಬ ದೂರು ಇದೆ.  ಹೀಗಾಗಿ ಮಾದರಿ ಸಂಗ್ರಹಿಸುವವರು, ಕ್ರಮಬದ್ಧವಾಗಿ ಪರೀಕ್ಷೆಗೆ ಮಾದರಿ ಸಂಗ್ರಹಿಸುವಂತೆ ಕ್ರಮ ಕೈಗೊಳ್ಳಬೇಕು.  ಸೋಂಕಿತರ ಕನಿಷ್ಟ 15 ಜನ ಪ್ರಾಥಮಿಕ ಹಾಗೂ ಕನಿಷ್ಟ 40 ದ್ವಿತೀಯ ಸಂಪರ್ಕಿತರ ಪರೀಕ್ಷೆ ಮಾಡಬೇಕು.  ಸೋಂಕಿತರ ಪ್ರಯಾಣ ವಿವರವನ್ನು ಸಂಗ್ರಹಿಸಬೇಕು.  ಒಂದು ವೇಳೆ ವಿವರ ನೀಡಲು ನಿರಾಕರಿಸಿದರೆ ಅಥವಾ ಅಸಹಕಾರ ತೋರಿದರೆ ಪೊಲೀಸ್ ನೆರವು ಪಡೆಯುವಂತೆ ಸೂಚಿಸಿದರು.

ಕೂಡಲೆ ಪರೀಕ್ಷೆಗೆ ಒಳಪಡಿ : ಜ್ವರ, ಕೆಮ್ಮು, ನೆಗಡಿ, ಎದೆ ಉರಿ, ಎದೆನೋವು ಮುಂತಾದ ರೋಗ ಲಕ್ಷಣ ಕಂಡುಬಂದಲ್ಲಿ, ಸಾರ್ವಜನಿಕರು ನಿರ್ಲಕ್ಷ್ಯ ಮಾಡದೆ ಅಥವಾ ಸಾಮಾನ್ಯ ಚಿಕಿತ್ಸೆಗೆ ಒಳಗಾಗದೆ, ಕೂಡೆೇ ಸಮೀಪದ ಆಸ್ಪತ್ರೆಗೆ ತೆರಳಿ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸಬೇಕು ಎಂದು ಮನವಿ ಮಾಡಿದರು. 

ಪರಿಸ್ಥಿತಿ ಎದುರಿಸಲು ಸಿದ್ಧರಾಗಿ :  ಜಿಲ್ಲೆಯಲ್ಲಿ ಎಂತಹದೇ ಪರಿಸ್ಥಿತಿ ಬಂದರೂ, ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಬೇಕಿದೆ.  ಕಳೆದ ವರ್ಷ ಹೆಚ್ಚು ಪ್ರಕರಣಗಳು ವರದಿಯಾಗುವ ಸಂದರ್ಭದಲ್ಲಿ ಜಿಲ್ಲಾಡಳಿತ ಕೈಗೊಂಡ ಕ್ರಮಗಳನ್ನೇ ಮತ್ತೆ ಕೈಗೊಳ್ಳಬೇಕಾಗಿ ಬರಬಹುದಾಗಿದ್ದು, ಎಲ್ಲ ಆಸ್ಪತ್ರೆಗಳು ತಮ್ಮ ಗರಿಷ್ಠ ಚಿಕಿತ್ಸಾ ಸಾಮರ್ಥ್ಯವನ್ನು ಸಿದ್ಧವಾಗಿರಿಸಿಕೊಳ್ಳಬೇಕು.  ಜಿಲ್ಲಾ ಆಸ್ಪತ್ರೆಗೆ ಕಳೆದ ಬಾರಿ ಕೋಟಿ ಗಟ್ಟಲೆ ಹಣ ಖರ್ಚು ಮಾಡಿ ವಿವಿಧ ಉಪಕರಣಗಳನ್ನು ಪೂರೈಸಿದ್ದು, ಅವು ಎಲ್ಲವೂ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು.  ಇಲ್ಲಿನ ಬಾಪೂಜಿ, ಎಸ್‍ಎಸ್., ಸಿಟಿ, ಆರೈಕೆ, ಆಶ್ರಯ, ಸಂಜೀವಿನಿ, ಸುಕ್ಷೇಮ ಸೇರಿದಂತೆ ವಿವಿಧ ಆಸ್ಪತ್ರೆಗಳು ಕೂಡ ಪರಿಸ್ಥಿತಿ ಎದುರಿಸಲು ಸಿದ್ಧವಾಗಿರಬೇಕು ಎಂದರು. ಸಭೆಯಲ್ಲಿ ಜಿ.ಪಂ. ಸಿಇಒ ಡಾ. ವಿಜಯಮಹಾಂತೇಶ್ ದಾನಮ್ಮನವರ್, ಕೋವಿಡ್ ಜಿಲ್ಲಾ ನೋಡಲ್ ಅಧಿಕಾರಿ ಪ್ರಮೋದ್, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ, ಚಿಗಟೇರಿ ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ. ಜಯಪ್ರಕಾಶ್, ತಜ್ಞ ವೈದ್ಯರುಗಳಾದ ಡಾ. ಬಾಲು, ಡಾ. ಸುರೇಂದ್ರ ಇತರರಿದ್ದರು.

error: Content is protected !!