ಭೂ ಪರಿವರ್ತನೆ ಕಡತಗಳನ್ನು ಸೂಕ್ಷ್ಮವಾಗಿ ಗಮನಿಸಿ

ಜಿಲ್ಲೆಯ ತಹಶೀಲ್ದಾರರಿಗೆ ಪ್ರಾದೇಶಿಕ ಆಯುಕ್ತ ನವೀನ್‍ರಾಜ್ ಸಿಂಗ್ ಸೂಚನೆ

ದಾವಣಗೆರೆ, ಆ. 4- ತಹಶೀಲ್ದಾರರು ಭೂ ಪರಿವರ್ತನೆಗೆ ಸಂಬಂಧಿಸಿದ ವರದಿಗಳನ್ನು ಸಲ್ಲಿಸುವಾಗ ಕಡತಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಬಳಿಕವೇ ವರದಿ ಸಲ್ಲಿಸಬೇಕು ಎಂದು ಪ್ರಾದೇಶಿಕ ಆಯುಕ್ತ ನವೀನ್‍ರಾಜ್ ಸಿಂಗ್ ಅವರು ತಹಶೀಲ್ದಾರ್‍ಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭೂ ಪರಿವರ್ತನೆ ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಹೈಕೋರ್ಟ್‌ನಿಂದ ಕೆಲವು ತೀರ್ಪುಗಳು ಬಂದಿದ್ದು, ಭೂ ಪರಿವರ್ತನೆ ಅರ್ಜಿಗಳಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ಮಾಡಿ ತಹಶೀಲ್ದಾರರು ವರದಿ ನೀಡಬೇಕಿರುತ್ತದೆ.  ಇಂತಹ ಸಂದರ್ಭದಲ್ಲಿ ಪ್ರತಿ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು.  ಬಳಿಕವೇ ಆಯಾ ಪ್ರಕರಣಗಳಿಗೆ ಅನುಗುಣವಾಗಿ ವರದಿ ಸಲ್ಲಿಸಬೇಕು ಎಂದು ಪ್ರಾದೇಶಿಕ ಆಯುಕ್ತರು ಸೂಚಿಸಿದರು. 

ಜಿಲ್ಲೆಯಲ್ಲಿ ಈ ವರ್ಷ ಒಟ್ಟು 14 ಕಂದಾಯ ಅದಾಲತ್‍ಗಳನ್ನು ನಡೆಸಲಾಗಿದ್ದು, ಅದಾಲತ್‍ನಲ್ಲಿ ಪಹಣಿ ತಿದ್ದುಪಡಿಗೆ ಸಂಬಂಧಿ ಸಿದಂತೆ ಒಟ್ಟು 969 ಅರ್ಜಿಗಳು ಸ್ವೀಕೃತ ಗೊಂಡಿವೆ. 882 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ, 34 ತಿರಸ್ಕೃತಗೊಂಡಿವೆ. ಇನ್ನೂ 53 ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ.  ಖಾತೆ ಬದಲಾವಣೆಗೆ ಒಟ್ಟು 598 ಅರ್ಜಿಗಳು ಸ್ವೀಕೃತಗೊಂಡಿದ್ದು, 551 ಅರ್ಜಿಗಳನ್ನು ಇತ್ಯರ್ಥಪಡಿಸಿದೆ,  14 ತಿರಸ್ಕೃತಗೊಂಡಿದ್ದು, 33 ಇತ್ಯರ್ಥಕ್ಕೆ ಬಾಕಿ ಇವೆ.  ಇತ್ಯರ್ಥಕ್ಕೆ ಬಾಕಿ ಇರುವ ಅರ್ಜಿಗಳಿಗೆ ಸಂಬಂಧಿ ಸಿದಂತೆ ಕೂಡಲೇ ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 73 ಕಂದಾಯ ಗ್ರಾಮಗಳ ರಚನೆ ಕಾರ್ಯ ಆಗಬೇಕಿದ್ದು, ಈಗಾಗಲೇ 24 ಗ್ರಾಮಗಳಿಗೆ ಸಂಬಂಧಿಸಿದಂತೆ ಆಕಾರ್‍ಬಂದ್ ಸಿದ್ಧಪಡಿಸಿ, ಹೊಸ ಸರ್ವೆ ನಂಬರ್ ರಚಿಸಲಾಗಿದೆ, ಅಲ್ಲದೆ ಅಂತಿಮ ಅಧಿಸೂಚನೆ ಹೊರಡಿಸಲು ಸಿದ್ಧವಾಗಿದೆ ಎಂದು ಭೂ ದಾಖಲೆಗಳ ಉಪನಿರ್ದೇಶಕರು ಹೇಳಿದರು.  ಇದಕ್ಕೆ ಪ್ರತಿಕ್ರಿಯಿಸಿದ ಪ್ರಾದೇಶಿಕ ಆಯುಕ್ತರು ಹೊಸ ಕಂದಾಯ ಗ್ರಾಮಗಳ ಆಕಾರ್‍ಬಂದ್ ಸಿದ್ಧಪಡಿಸಿದ ಬಳಿಕ ಅವುಗಳನ್ನು ಡಿಜಿಟಲೈ ಸೇಷನ್ ಮಾಡುವಂತೆ ಸೂಚನೆ ನೀಡಿದರು.   

ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಗೊಳಿಸುವುದಕ್ಕೆ ಸಂಬಂಧಿಸಿದಂತೆ ದಾವಣ ಗೆರೆ ತಾಲ್ಲೂಕಿನಲ್ಲಿ ಒಟ್ಟು 3095 ಎಕರೆ 21 ಗುಂಟೆಗಳ ಪೈಕಿ ಈಗಾಗಲೇ 2447 ಎಕರೆ ಒತ್ತುವರಿ ತೆರವುಗೊಳಿಸಲಾಗಿ ದೆ, 342 ಎಕರೆ ಸಾರ್ವಜನಿಕ ಬಳಕೆ, ಶಾಲೆ, ಸರ್ಕಾರಿ ಕಟ್ಟಡ, ದೇವಸ್ಥಾನ ಮುಂತಾದ ಕಾರಣ ಗಳಿಗಾಗಿ ತೆರವುಗೊಳಿಸಲು ಸಾಧ್ಯವಾಗಿಲ್ಲ, ಇನ್ನೂ 306 ಎಕರೆ ತೆರವುಗೊಳಿಸುವುದು ಬಾಕಿ ಇದೆ.  ಹರಿಹರ ತಾಲ್ಲೂಕಿನಲ್ಲಿ 336.18 ಎಕರೆ, ಚನ್ನಗಿರಿ ತಾಲ್ಲೂಕಿನಲ್ಲಿ 482.12 ಎಕರೆ, ಜಗಳೂರು ತಾಲ್ಲೂಕಿನಲ್ಲಿ 469.24 ಎಕರೆ ಒತ್ತುವರಿ ತೆರವು ಬಾಕಿ ಇದೆ ಎಂದು ಆಯಾ ತಹಶೀಲ್ದಾರರು ವರದಿ ಸಲ್ಲಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಪ್ರಾದೇಶಿಕ ಆಯುಕ್ತರು, ಸರ್ಕಾರಿ ಜಮೀನು ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ವಿಶೇಷ ಸಭೆ ಕರೆದು, ಕೂಡಲೇ ಒತ್ತುವರಿ ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ಕ್ರಮ ವಹಿಸಬೇಕು ಎಂದು ನವೀನ್‍ರಾಜ್ ಸಿಂಗ್ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಕಂದಾಯ ಇಲಾಖೆಯ ಇಸ್ಲಾಮುದ್ದೀನ್ ಸೇರಿದಂತೆ, ಜಿಲ್ಲೆಯ ಎಲ್ಲ ತಹಶೀಲ್ದಾರರು ಭಾಗವಹಿಸಿದ್ದರು.

error: Content is protected !!