ಸಂಪುಟದಲ್ಲಿ ಬಿಎಸ್‌ವೈ ಛಾಯೆ

ಸಂಪುಟಕ್ಕೆ 29 ಸಚಿವರು, ಬಹುತೇಕರು ಹಿಂದಿನ ಸಂಪುಟದಲ್ಲಿದ್ದವರು

ಬೆಂಗಳೂರು, ಆ. 4- ಮಂತ್ರಿಮಂಡಲ ರಚನೆಗೆ ಕಳೆದ ಮೂರು ದಿನಗಳ ಸತತ ಪ್ರಯತ್ನದ ನಂತರ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಂಪುಟಕ್ಕೆ ಕೆಲವು ಹೊಸಬರು ಸೇರಿದಂತೆ 29 ಮಂದಿಯನ್ನು ಸೇರ್ಪಡೆ ಮಾಡಿಕೊಂಡರು. 

ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟದ ಛಾಯೆಯೇ ಬೊಮ್ಮಾಯಿ ಮಂತ್ರಿಮಂಡಲದಲ್ಲೂ ಮೂಡಿದೆ. 

ಯಡಿಯೂರಪ್ಪ ಸಂಪುಟದಲ್ಲಿ ಹಿರಿಯ ಸಚಿವರಾಗಿದ್ದ ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್, ಲಕ್ಷ್ಮಣ ಸವದಿ, ಅರವಿಂದ ಲಿಂಬಾವಳಿ, ಸಿ.ಪಿ. ಯೋಗೇಶ್ವರ್, ಆರ್. ಶಂಕರ್ ಹಾಗೂ ಶ್ರೀಮಂತ ಪಾಟೀಲ್ ಸೇರಿದಂತೆ ಏಳು ಮಂದಿಯನ್ನು ಹೊರತುಪಡಿಸಿ ಉಳಿದ ಎಲ್ಲರೂ ಹಿಂದಿನ ಮಂತ್ರಿಮಂಡಲದಲ್ಲಿದ್ದವರೇ ಈ ಸಂಪುಟದಲ್ಲೂ ಮುಂದುವರೆದಿದ್ದಾರೆ. 

ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್, 29 ಮಂದಿಗೆ ಸಚಿವರಾಗಿ ಪ್ರಮಾಣ ವಚನ ಬೋಧಿಸಿದರು.  ಯಡಿಯೂರಪ್ಪ ಸಂಪುಟ ದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಗೋವಿಂದ ಕಾರಜೋಳ, ಸಿ.ಎಸ್. ಅಶ್ವತ್ಥನಾರಾಯಣ, ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಬಿ.ಶ್ರೀರಾಮುಲು, ವಿ.ಸೋಮಣ್ಣ, ಉಮೇಶ್ ಕತ್ತಿ, ಎಸ್. ಅಂಗಾರ, ಜೆ.ಸಿ. ಮಾಧುಸ್ವಾಮಿ, ಸಿ.ಸಿ. ಪಾಟೀಲ್, ಆನಂದ್ ಸಿಂಗ್ ಮತ್ತೆ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. 

ಇವರಲ್ಲದೆ, ಕೋಟಾ ಶ್ರೀನಿವಾಸ ಪೂಜಾರಿ, ಪ್ರಭು ಚವ್ಹಾಣ್, ಮುರುಗೇಶ್ ನಿರಾಣಿ, ಶಿವರಾಂ ಹೆಬ್ಬಾರ್, ಎಸ್.ಟಿ. ಸೋಮಶೇಖರ್, ಬಿ.ಸಿ. ಪಾಟೀಲ್, ಭೈರತಿ ಬಸವರಾಜ್, ಡಾ.ಕೆ. ಸುಧಾಕರ್, ಕೆ.ಗೋಪಾಲಯ್ಯ, ಎಂ.ಟಿ.ಬಿ. ನಾಗರಾಜ್, ಕೆ.ಸಿ. ನಾರಾಯಣಗೌಡ ಹಾಗೂ ಶಶಿಕಲಾ ಜೊಲ್ಲೆ ಅವರುಗಳು ಬೊಮ್ಮಾಯಿ ಸಂಪುಟದಲ್ಲೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 

ಹಳೆ ಮುಖಗಳ ಜೊತೆ ಆರಗ ಜ್ಞಾನೇಂದ್ರ, ಬಿ.ಸಿ. ನಾಗೇಶ್, ವಿ. ಸುನೀಲ್ ಕುಮಾರ್, ಹಾಲಪ್ಪ ಆಚಾರ್, ಶಂಕರ್ ಬಿ. ಪಾಟೀಲ್ ಹಾಗೂ ಮುನಿರತ್ನ ಇದೇ ಮೊದಲ ಬಾರಿಗೆ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದರು. 

ಮುಖ್ಯಮಂತ್ರಿ ಸೇರಿದಂತೆ ಸಂಪುಟ ಗಾತ್ರ 30ಕ್ಕೆ ತಲುಪಿದ್ದು, ಇನ್ನೂ ನಾಲ್ಕು ಸ್ಥಾನಗಳನ್ನು ಬೊಮ್ಮಾಯಿ ಅವರು ಉಳಿಸಿಕೊಂಡಿದ್ದಾರೆ. 

ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಮೂರು ಮಂದಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು, ಬೊಮ್ಮಾಯಿ ಸಂಪುಟದಲ್ಲೂ ನಾಲ್ವರಿಗೆ ಉಪಮುಖ್ಯಮಂತ್ರಿ ಸ್ಥಾನ ಕಲ್ಪಿಸಲು ಬಿಜೆಪಿ ವರಿಷ್ಠರು ತೀರ್ಮಾನ ಕೈಗೊಂಡಿದ್ದರು. 

ಮುಖ್ಯಮಂತ್ರಿ ಆಪ್ತ ಆರ್. ಅಶೋಕ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಿಸಲು ಬೊಮ್ಮಾಯಿ ಕೊನೆವರೆಗೆ ನಡೆಸಿದ ಯತ್ನ ವಿಫಲವಾದ ನಂತರ ಸದ್ಯಕ್ಕೆ ಯಾರನ್ನೂ ಉಪಮುಖ್ಯಮಂತ್ರಿ ಮಾಡುವುದು ಬೇಡ ಎಂದು ವರಿಷ್ಠರಿಗೆ ಮಾಡಿಕೊಂಡ ಮನವಿ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಈ ನಿರ್ಧಾರವನ್ನು ಕೈಬಿಡಲಾಗಿದೆ. 

ಮೂರು ದಿನಗಳಿಂದ ಮಂತ್ರಿಮಂಡಲ ರಚನೆಗೆ ಮುಖ್ಯಮಂತ್ರಿ ಅವರು, ಪಕ್ಷದ ವರಿಷ್ಠರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದರಾದರೂ ಇಂದು ಬೆಳಗ್ಗೆ 10 ಗಂಟೆಗೆ ಸದಸ್ಯರ ಪಟ್ಟಿ ಅಂತಿಮಗೊಂಡು ಬೊಮ್ಮಾಯಿ ಕೈಸೇರಿತು. 

ಪಟ್ಟಿ ಕೈಸೇರುವ ವೇಳೆಗೆ ರಾತ್ರಿ ಇದ್ದ ಆರು ಹೆಸರುಗಳು ಮಾಯವಾಗಿ ಯಡಿಯೂರಪ್ಪನವರ ಶಿಫಾರಸ್ಸಿನಂತೆ ಕೆಲವರು ಹಳಬರನ್ನೇ ಮುಂದುವರೆಸಲು ವರಿಷ್ಠರು ತೀರ್ಮಾನಿಸಿದರು. 

ಇದರಿಂದ ಮಂತ್ರಿಯಾಗುವಂತೆ ನಿನ್ನೆ ರಾತ್ರಿ ಪರೋಕ್ಷ ಸೂಚನೆ ಪಡೆದಿದ್ದವರ ಹೆಸರು ಇಂದು ಬೆಳಗಾಗುವ ವೇಳೆಗೆ ಪಟ್ಟಿಯಿಂದ ಮಾಯವಾಗಿತ್ತು. 

ಮಾಯವಾದವರ ಪಟ್ಟಿಯಲ್ಲಿದ್ದ ಎಸ್.ಎ. ರಾಮದಾಸ್, ದತ್ತಾತ್ರೇಯ ಪಾಟೀಲ್ ರೇವೂರ, ರಾಜೂಗೌಡ, ಆರ್.ಪೂರ್ಣಿಮಾ ಶ್ರೀನಿವಾಸ್, ಎಂ.ಪಿ. ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಅವರಿಗೆ ನಿರಾಸೆ ಕಾದಿತ್ತು. 

ಸಂಘ ಪರಿವಾರದಿಂದ ರೇಣುಕಾಚಾರ್ಯ ಹೊರತುಪಡಿಸಿ, ಉಳಿದವರ ಹೆಸರನ್ನು ವರಿಷ್ಠರಿಗೆ ಶಿಫಾರಸ್ಸು ಮಾಡಲಾಗಿತ್ತು. 

ಯಡಿಯೂರಪ್ಪ ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಮಂತ್ರಿಯಾಗುವ ಅವಕಾಶ ತಪ್ಪಿದ್ದರಿಂದ ಕೊನೆ ಗಳಿಗೆಯಲ್ಲಿ ಅವರ ಬೆಂಬಲಿಗರಾಗಿ ಹಿಂದಿನ ಸಂಪುಟದಲ್ಲಿ ಸಚಿವರಾಗಿದ್ದ ಗೋವಿಂದ ಕಾರಜೋಳ, ಜೆ.ಸಿ. ಮಾಧುಸ್ವಾಮಿ, ಸಿ.ಸಿ. ಪಾಟೀಲ್, ಶಶಿಕಲಾ ಜೊಲ್ಲೆ, ಎಂ.ಟಿ.ಬಿ. ನಾಗರಾಜ್, ಶಿವರಾಂ ಹೆಬ್ಬಾರ್, ಮುನಿರತ್ನ ಅವರಿಗೆ ಅವಕಾಶ ನೀಡುವಂತೆ ಮಾಡಿದ ಶಿಫಾರಸ್ಸಿಗೆ ವರಿಷ್ಠರು ಹಸಿರು ನಿಶಾನೆ ತೋರಿದ್ದರಿಂದ ಅಧಿಕಾರ ದಕ್ಕಿತು. 

ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಸೇರಿದಂತೆ ಶಾಸಕರು, ನೂತನ ಸಚಿವರ ಕುಟುಂಬದವರು ಹಾಜರಿದ್ದರು. 

error: Content is protected !!