ಸಸ್ಯ ಸಂಕುಲ ಇದ್ದರೆ ಮನು ಕುಲಕ್ಕೆ ಒಳಿತು

33ನೇ ವಾರ್ಡಿನಲ್ಲಿನ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ರವೀಂದ್ರನಾಥ್

ದಾವಣಗೆರೆ, ಜೂ.10 – ಕೊರೊನಾ ವೈರಸ್ ಮನುಷ್ಯನಿಗೆ ಪರಿಸರ ಸಂರಕ್ಷಣೆಯ ಅವಶ್ಯಕತೆಯ ಪಾಠ ಕಲಿಸಿದೆ. ಪರಿಸರ ನಾಶವೇ ಮನುಷ್ಯನ ಇಂದಿನ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಸಸ್ಯ ಸಂಕುಲವಿದ್ದರೆ ಮಾತ್ರ ಮನುಕುಲಕ್ಕೆ ಒಳಿತು ಎಂದು ಹಿರಿಯ ಶಾಸಕ ಎಸ್.ಎ.ರವೀಂದ್ರನಾಥ್ ಅಭಿಪ್ರಾಯಪಟ್ಟರು.

ನಗರ ಪಾಲಿಕೆಯ 33ನೇ ವಾರ್ಡ್‌ನಲ್ಲಿ ಪಾಲಿಕೆ ಸದಸ್ಯ ಕೆ.ಎಂ.ವೀರೇಶ್ ಅವರು ಇಂದು ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಉದ್ಯಾನವನದಲ್ಲಿ ಒಂದು ನೂರು ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ನಮಗಿಂದು ಆಮ್ಲಜನಕದ ಮಹತ್ವದ ಅರಿವಾಗಿದೆ. ನೈಸರ್ಗಿಕವಾಗಿ ಸಿಗುವ ಆಮ್ಲಜನಕದ ಮೂಲವನ್ನು ನಾಶ ಮಾಡಿ ಕೃತಕ ಆಮ್ಲಜನಕದ ಮೊರೆ ಹೋಗುವ ಪರಿಸ್ಥಿತಿ ಬಂದೊದಗಿದೆ‌. ಮುಂದಿನ ದಿನಗಳಲ್ಲಿ ಪರಿಸರ ಸ್ನೇಹಿ ವಾತಾವರಣದ ಸೃಷ್ಟಿಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಶಾಸಕರು ಕರೆ ನೀಡಿದರು.

ಪರಿಸರ ದಿನಾಚರಣೆಯನ್ನು ಆಯೋಜಿಸಿದ್ದ ಪಾಲಿಕೆ ಸದಸ್ಯ ಕೆ.ಎಂ.ವೀರೇಶ್ ಮಾತನಾಡಿ, ಈಗಾಗಲೇ ಪರಿಸರ ನಾಶದಿಂದ ಜಾಗತಿಕ ತಾಪಮಾನವು ಸತತವಾಗಿ ಹೆಚ್ಚಾಗುತ್ತಿದೆ. ಅಂತರ್ಜಲ ಹಂತ ಹಂತವಾಗಿ ಕುಸಿಯುತ್ತಿದೆ. ಜೊತೆಗೆ ಆಮ್ಲಜನಕದ ಕೊರತೆಯಾಗುತ್ತಿರುವುದು ನಮ್ಮ ಅನುಭವಕ್ಕೆ ಬರುತ್ತಿದೆ. ಹಾಗಾಗಿ ನಾವೆಲ್ಲರೂ ಪರಿಸರದ ಸಂರಕ್ಷಣೆಗೆ ಮುಂದಾಗೋಣ. ಗಿಡಗಳನ್ನು ನೆಡುವುದು ಮಾತ್ರವಲ್ಲದೇ ಅವುಗಳನ್ನು ಪೋಷಿಸೋಣ. ಜೊತೆಗೆ ಸ್ವಚ್ಛತೆಯನ್ನು ಕಾಪಾಡಿ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳೋಣ. 

33ನೇ ವಾರ್ಡನ್ನು ಹಸಿರು ಮತ್ತು ಸ್ವಚ್ಛಮಯ ಮಾಡೋದು ತಮ್ಮ ಗುರಿ ಮತ್ತು ಕನಸಾಗಿದೆ. ಹಾಗಾಗಿ ಮಹಾನಗರ ಪಾಲಿಕೆಯ ಜೊತೆಗೆ ಸಾರ್ವಜನಿಕರು ಕೈಜೋಡಿಸಿ ಸಹಕರಿಸಬೇಕು ಎಂದು ವೀರೇಶ್ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶ್ರೀ ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ಸುರೇಶ್, ಲಿಂಗಪ್ಪ, ಎಲ್‌ಐಸಿ ರುದ್ರೇಶ್, ಕೂಲಂಬಿ ಬಸಣ್ಣ, ಹೆಚ್.ಎಮ್‌.ಮಲ್ಲಿಕಾರ್ಜುನಪ್ಪ, ವಿ.ಸಿದ್ದೇಶ್ ಮತ್ತಿತರರು ಹಾಜರಿದ್ದರು.

error: Content is protected !!