ಸಣ್ಣ ಹಿಡುವಳಿದಾರರ ಪತ್ರ ನೀಡಲು ತೇಜಸ್ವಿ ಪಟೇಲ್ ಮನವಿ

ಸಣ್ಣ ಹಿಡುವಳಿದಾರರ ಪತ್ರ ನೀಡಲು ತೇಜಸ್ವಿ ಪಟೇಲ್ ಮನವಿ - Janathavaniದಾವಣಗೆರೆ, ಆ.1- ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ಸೇರಿದಂತೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳಿಗೆ ಸಣ್ಣ ಹಿಡುವಳಿದಾರರ ಪತ್ರವನ್ನು ಕೇಳಲಾಗುತ್ತದೆ.

ಅನೇಕ ಕುಟುಂಬಗಳು ವಿಭಾಗ ಮಾಡಿಕೊಂಡು ವಾಸ್ತವದಲ್ಲಿ ಸಣ್ಣ ಹಿಡುವಳಿದಾರರಾಗಿದ್ದರೂ ಅನೇಕ ಕಾರಣಗಳಿಂದ ಜಮೀನುಗಳನ್ನು ವರ್ಗಾವಣೆ ಮಾಡಿಸಿಕೊಂಡಿರುವುದಿಲ್ಲ ಅಥವಾ ಪ್ರಕ್ರಿಯೆಯಲ್ಲಿರುತ್ತಾರೆ. ಈ ತಾಂತ್ರಿಕ ತೊಡಕಿನಿಂದ ಅಂತಹ ಅರ್ಹ ಫಲಾನುಭವಿಗಳು ಯೋಜನೆಯಿಂದ ಹೊರಗುಳಿಯುವುದು ಉಚಿತವಲ್ಲ ಎನ್ನುವುದು ತಮ್ಮ ಭಾವನೆ ಎಂದು ತೇಜಸ್ವಿ ವಿ. ಪಟೇಲ್  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಹಾಗಾಗಿ ಸಣ್ಣ ಹಿಡುವಳಿದಾರರಲ್ಲವೆಂದು ಅಫಿಡೆವಿಟ್‌, ಗ್ರಾಮಲೆಕ್ಕಿಗರ ದೃಢೀಕರಣ ಪಡೆದಿದ್ದರೂ ಒಂದು ವೇಳೆ ಸಣ್ಣ ಹಿಡುವಳಿದಾರರಲ್ಲವೆಂದು ಸಾಬೀತಾದಲ್ಲಿ ಸರ್ಕಾರದಿಂದ ಪಡೆದ ಸೌಲಭ್ಯವನ್ನು ದಂಡದೊಂದಿಗೆ ವಾಪಸ್‌ ಪಾವತಿಸುವ ಕರಾರು ಪತ್ರ ಪಡೆದು ಯೋಜನೆಗಳಿಗೆ ಸೀಮಿತವಾಗಿ ಸಣ್ಣ ಹಿಡುವಳಿದಾರರ ಪತ್ರ ನೀಡಿದಲ್ಲಿ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ.

ಅರ್ಹ ಫಲಾನುಭವಿಗಳು ಯೋಜನೆಗಳಿಂದ ಹೊರ ಉಳಿಯದಂತೆ ಅಗತ್ಯ ಸಡಿಲಿಕೆಯನ್ನು ಅಥವಾ ಹೊಸ ನಿಯಮಗಳನ್ನು ಜಾರಿಗೊಳಿಸಲು ಸೂಕ್ತ ಶಿಫಾರಸ್ಸಿನೊಂದಿಗೆ ಅಗತ್ಯವಿರುವ ವಿವಿಧ ಇಲಾಖೆಗಳ ಸಂಬಂಧಿಸಿದವರ ಗಮನಕ್ಕೆ ತರಬೇಕೆಂದು ಅವರು ಕೋರಿದ್ದಾರೆ.

error: Content is protected !!