ಮುರುಘಾ ಮಠಕ್ಕೆ ವಿವಿ ಮಂಜೂರು : ಶರಣರ ಹರ್ಷ

ಚಿತ್ರದುರ್ಗ, ಮೇ 5- ಬರದ ಭೂಮಿಯಾದ ಚಿತ್ರದುರ್ಗಕ್ಕೆ ವೈದ್ಯಕೀಯ ಕಾಲೇಜಿನೊಂದಿಗೆ ವಿಶ್ವವಿದ್ಯಾಲಯ ಸ್ಥಾಪನೆಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣರು, ಜಗದ್ಗುರು ಮುರುಘ ರಾಜೇಂದ್ರ ವಿದ್ಯಾಪೀಠದ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಗೆ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕೆಂಬುದು ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮಹಾಸ್ವಾಮೀಜಿ ಮಹತ್ವಾಕಾಂಕ್ಷೆಯಾಗಿತ್ತು. ಅವರ ಇಚ್ಛೆಯನ್ನು ನೆರವೇರಿಸಲೆಂಬಂತೆ 20 ವರ್ಷಗಳ ಹಿಂದೆ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಆರಂಭಿಸಲಾಯಿತು ಎಂದರು.

ಶ್ರೀಮಠದ ಮಹತ್ವಾಕಾಂಕ್ಷೆ ಎಂದರೆ ನೂರಾರು ಸಂಸ್ಥೆಗಳನ್ನು ನಡೆಸುತ್ತಿರುವ ವಿದ್ಯಾಪೀಠವು ಒಂದು ವಿಶ್ವವಿದ್ಯಾಲಯವಾಗಿ ಕಾರ್ಯ ನಿರ್ವಹಿಸಬೇಕೆಂಬುದು. ಅದನ್ನು ಅಧಿಕಾರದಲ್ಲಿರುವ ಸರ್ಕಾರದಿಂದ ಮೇಲ್ಮನೆ ಮತ್ತು ಕೆಳಮನೆ ಎರಡೂ ಸದನಗಳಲ್ಲಿ ಮಂಡನೆಯಾಗಿ ಮುಂದೆ ಅದು ರಾಜ್ಯಪಾಲರ ಅನುಮೋದನೆಯೊಂದಿಗೆ ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟಣೆಯಾಗಿ ರುತ್ತದೆ. ಈ ಸಂದರ್ಭದಲ್ಲಿ ಸರ್ಕಾರ ಮತ್ತು ರಾಜ್ಯಪಾಲರನ್ನು ಅಭಿನಂದಿಸಲಾಯಿತು. 

ಸಭೆಯ ನಡಾವಳಿಯಲ್ಲಿ ಕುಲಾಧಿಪತಿಯ ಆಯ್ಕೆ ಪ್ರಕ್ರಿಯೆಯು ಸೇರಿದ್ದು, ಸರ್ವ ಸದಸ್ಯರು ಸೇರಿಕೊಂಡು ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರ ಹೆಸರನ್ನು ಜಮುರಾ ವಿಶ್ವವಿದ್ಯಾಲಯದ ಕುಲಾಧಿಪತಿಯ ಸ್ಥಾನಕ್ಕೆ ಆಡಳಿತ ಮಂಡಳಿ ಸದಸ್ಯ ಬಿ.ಎಸ್. ಷಣ್ಮುಖಪ್ಪ ಅವರು ಸೂಚಿಸಿದರು. ಇಡೀ ಸಭೆ ಅದನ್ನು ಅನುಮೋದಿಸಿತು. ಕುಲಪತಿ, ಕುಲಸಚಿವ ಇತ್ಯಾದಿ ಅಧಿಕಾರಿಗಳನ್ನು ನೇಮಿಸುವ ಅಧಿಕಾರವನ್ನು ಕುಲಾಧಿಪತಿಗಳಿಗೆ ನೀಡಲಾಯಿತು.

ಆಡಳಿತ ಮಂಡಳಿ ಸದಸ್ಯರಾದ ಕೆ.ವಿ.ಪ್ರಭಾಕರ್ ಹಿಂದಿನ ಸಭೆಯ ನಡಾವಳಿಗಳನ್ನು ಓದಿದರು. ಸಭೆಯಲ್ಲಿ ಎನ್.ಲಿಂಗಮೂರ್ತಿ, ಪಟೇಲ್ ಶಿವಕುಮಾರ್, ಹರ್ತಿಕೋಟೆ ವೀರೇಂದ್ರಸಿಂಹ, ಬಸವರಾಜ ಪಾಟೀಲ್ ಮೊದಲಾದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಎಂ.ಟಿ.ಮಲ್ಲಿಕಾರ್ಜುನ ಸ್ವಾಮಿ ವಂದಿಸಿದರು. ಉಮೇಶ್ ಪತ್ತಾರ ಪ್ರಾರ್ಥಿಸಿದರು.

error: Content is protected !!