ಕುಂದುವಾಡ ಕೆರೆ ಕಾಮಗಾರಿಗೆ ತಡೆಯಾಜ್ಞೆ

ದಾವಣಗೆರೆ, ಏ. 29 – ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಸಲಾಗುತ್ತಿರುವ ಕುಂದುವಾಡ ಕೆರೆ ಅಭಿವೃದ್ಧಿ ಕಾಮಗಾರಿಗೆ ಹೈಕೋರ್ಟ್ ತಡೆಯಾಜ್ಞೆ ಹೊರಡಿಸಿದೆ.

ಕುಂದುವಾಡ ಕೆರೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕವಾಗಿದೆ. ಜೀವ ವೈವಿಧ್ಯತೆ ಕಾಯ್ದೆ, ಅರಣ್ಯ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ, ನಗರದ ಯುವ ಭಾರತ್ ಗ್ರೀನ್ ಬ್ರಿಗೇಡ್‌ ಪರವಾಗಿ ಹೈಕೋರ್ಟ್‌ನಲ್ಲಿ ಕಳೆದ ಏಪ್ರಿಲ್ 5ರಂದು ಅರ್ಜಿ ದಾಖಲಿಸಿತ್ತು.

ವಕೀಲ ರಾಜೇಶ್ ಜಿ. ಭಟ್ ಅವರ ಮೂಲಕ ಯುವ ಭಾರತ್‌ ಗ್ರೀನ್ ಬ್ರಿಗೇಡ್‌ ಪರವಾಗಿ ಅದರ ಅಧ್ಯಕ್ಷ ನಾಗರಾಜ ಸುರ್ವೆ ದಾಖಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಕೆರೆಯ ಆವರಣ ಇಲ್ಲವೇ 30 ಮೀಟರ್‌ಗಳ ಬಫರ್ ವಲಯದಲ್ಲಿ ಸೈಕಲ್‌ ಟ್ರ್ಯಾಕ್‌ ನಿರ್ಮಿಸದಂತೆ ತಡೆಯಾಜ್ಞೆ ಹೊರಡಿಸಿದೆ.

ಕೆರೆಯ ಗಾತ್ರವನ್ನೂ ಸಹ ಕಡಿಮೆ ಮಾಡಬಾರದು ಎಂದು ನಿರ್ಬಂಧಿಸಿರುವ ನ್ಯಾಯಾಲಯ, ವಿಚಾರಣೆಯನ್ನು ಜೂನ್ 24ಕ್ಕೆ ಮುಂದೂಡಿದೆ.

ಸ್ಮಾರ್ಟ್ ಸಿಟಿ ಹಾಗೂ ಕಾಮಗಾರಿ ಕೈಗೊಳ್ಳುತ್ತಿರುವ ಸಂಸ್ಥೆಗಳೂ ಸೇರಿದಂತೆ, ಒಟ್ಟು 12 ಪ್ರತಿವಾದಿಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಬಗ್ಗೆ ಹೇಳಿಕೆ ನೀಡಿರುವ ಅರ್ಜಿದಾರ ನಾಗರಾಜ ಸುರ್ವೆ, ನ್ಯಾಯಾಲಯದ ಆದೇಶದ ಪ್ರತಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಸ್ಮಾರ್ಟ್ ಸಿಟಿಗೆ ತಲುಪಿಸಲಾಗಿದೆ ಎಂದಿದ್ದಾರೆ.

ಕುಂದುವಾಡ ಕೆರೆಯು ಒಂದು ಕೆರೆಯಲ್ಲ, ಇದು ಕೇವಲ ನೀರು ಸಂಗ್ರಹಿಸುವ ಟ್ಯಾಂಕ್ ಎಂದು ಹೇಳಿ, ಪರಿಸರ ಪರಿಣಾಮದ ಸಮೀಕ್ಷೆ ನಡೆಸದೇ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಸುರ್ವೆ ತಿಳಿಸಿದ್ದಾರೆ.

ನ್ಯಾಯಾಲಯದ ತಡೆಯಾಜ್ಞೆಯ ಹಿನ್ನೆಲೆಯಲ್ಲಿ ಕೆರೆ ಸುತ್ತಲಿನ 30 ಮೀಟರ್ ವ್ಯಾಪ್ತಿಯ ಬಫರ್‌ ಜೋನ್‌, ಮಳೆ ನೀರು ಹಾಗೂ ಚರಂಡಿ ಸೇರಿ ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ ಎಂದವರು ಹೇಳಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಪರಿಸರ ಪ್ರೇಮಿ ಡಾ. ಎಸ್. ಶಿಶುಪಾಲ, ಕುಂದುವಾಡ ಕೆರೆಯ ಅಭಿವೃದ್ಧಿ ಕಾರ್ಯಗಳು ಅವೈಜ್ಞಾನಿಕ ಹಾಗೂ ಪರಿಸರ ವಿರೋಧಿ ಎಂದು ಮನಗಂಡು ಕಾಮಗಾರಿಗಳಿಗೆ ಹೈಕೋರ್ಟ್ ತಡೆಯಾಜ್ಞೆ ಹೊರಡಿಸಿದೆ. ಜೀವವೈವಿಧ್ಯ ನಾಶ ಮಾಡಿದ್ದರೂ ದಾವಣಗೆರೆ ಪರಿಸರ ಉಳಿಸುವ ಹೋರಾಟದಲ್ಲಿ ನ್ಯಾಯದ ಬೆಳಕು ಕಾಣಿಸುತ್ತಿದೆ ಎಂದಿದ್ದಾರೆ.

error: Content is protected !!