ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಅಂತರ ರಾಜ್ಯ ಕಳ್ಳರು ಪೊಲೀಸರ ಬಲೆಗೆ

ದಾವಣಗೆರೆ, ಜು. 19 – ಬ್ಯಾಂಕಿನಲ್ಲಿ ಹಣ ಬಿಡಿಸಿಕೊಳ್ಳುತ್ತಿದ್ದವರ ಗಮನ ಬೇರೆಡೆಗೆ ಸೆಳೆದು ಕಳ್ಳತನ ಮಾಡುತ್ತಿದ್ದ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಓ.ಜಿ. ಕುಪ್ಪಂನ 11 ಜನರ ಇಡೀ ಗ್ಯಾಂಗ್ ಅನ್ನು ಮೊಟ್ಟ ಮೊದಲ ಬಾರಿಗೆ ಬಂಧಿಸಲಾಗಿದೆ ಎಂದು ಎಸ್ಪಿ ಸಿ.ಬಿ. ರಿಶ್ಯಂತ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಅವರು, ಓ.ಜಿ. ಕುಪ್ಪಂ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುವ ತಂಡಗಳಿಗೆ ಕುಖ್ಯಾತಿ ಪಡೆದಿದೆ. ಇಲ್ಲಿನ ಕಳ್ಳರು ಆಂಧ್ರದವರೇ ಆದರೂ, ಕಳ್ಳತನ ಮಾಡುತ್ತಿದ್ದುದು ಕರ್ನಾಟಕ ಹಾಗೂ ತಮಿಳುನಾಡುಗಳಂತಹ ನೆರೆ ರಾಜ್ಯಗಳಲ್ಲಿ  ಎಂದು ಹೇಳಿದರು.

ಈ ತಂಡಕ್ಕೆ ಸೇರಿದ ನಾಗರಾಜ್, ಚಿನ್ನು, ಗೋಗುಲ ತುಳಸೀಧರ, ಕೆ. ವೆಂಕಟೇಶ್, ಜಿ. ಸ್ಯಾಮ್‌ಸನ್, ವಿನೋದ್‌, ಸತೀಶ್, ಪಿ. ಮೋಹನ್ ರಾವ್, ಕೆ. ಸುಬ್ರಮಣಿ, ಪಿ. ಬುರ್ಮಣಿ ಹಾಗೂ ಪಿ. ವೆಂಕಟೇಶಲು ಎಂಬುವವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ದಾವಣಗೆರೆ ಜಿಲ್ಲೆಯ 13 ಕಡೆಗಳಲ್ಲಿ ಇವರು ಒಟ್ಟು 41.54 ಲಕ್ಷ ರೂ.ಗಳ ಕಳ್ಳತನ ಎಸಗಿದ್ದರು. ಇವರಿಂದ 22 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದವರು ಹೇಳಿದರು.

ಅಲ್ಲದೇ ಬಂಧಿತರಿಂದ 4 ಬೈಕ್, 4 ಮೊಬೈಲ್ ಮತ್ತು ಕಳ್ಳತನಕ್ಕೆ ಬಳಸಲಾಗುತ್ತಿದ್ದ ಬೇರಿಂಗ್ ಬಾಲ್ಸ್, ಬೇರಿಂಗ್ ಬಾಲ್ಸ್ ಪಂಪ್ ಮಾಡುವ ಯಂತ್ರ, ತುರಿಕೆ ಪುಡಿ, ಕ್ಯಾಟರ್‌ಪಿಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರೆಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರು. ಆರೋಪಿಗಳು ಇದುವರೆಗೂ 26 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಮೂಲತಃ ಇವರು ಆಂಧ್ರ ಪ್ರದೇಶದವರಾದರೂ ಕನ್ನಡವನ್ನು ಚೆನ್ನಾಗಿ ತಿಳಿದವರಾಗಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.

ಡಿಎಸ್‌ಪಿ ಬಸವರಾಜ ನೇತೃತ್ವದ 13 ಸದಸ್ಯರ ತಂಡ ಕಳೆದ 25 ದಿನಗಳಿಂದ ನಿರಂತರ ನಿಗಾ ವಹಿಸಿ ತಂಡವನ್ನು ತಾಲ್ಲೂಕಿನ ಬಾತಿ ಷುಗರ್ ಫ್ಯಾಕ್ಟರಿ ಹತ್ತಿರ ಇರುವ ಪಾಳು ಬಿದ್ದ ವಸತಿ ಗೃಹದ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದವರು ಹೇಳಿದ್ದಾರೆ.

ಆರೋಪಿತರ ಪತ್ತೆ ಕಾರ್ಯದಲ್ಲಿ ಪೊಲೀಸ್‌ ಸಿಬ್ಬಂದಿಯವರಾದ ಎಂ. ಅಂಜಿನಪ್ಪ, ಕೆ.ಸಿ. ಮಜೀದ್, ಆಂಜನೇಯ, ರಾಘವೇಂದ್ರ, ಮಾರುತಿ, ರಮೇಶ್ ನಾಯಕ್, ಬಸವರಾಜ, ನಟರಾಜ್, ಸುರೇಶ್, ಮಲ್ಲಿಕಾರ್ಜುನ, ಬಾಲರಾಜು, ರಾಘವೇಂದ್ರ, ಶಾಂತರಾಜು, ಉಮೇಶ್ ಬಿಸನಾಳ್, ನಿಂಗರಾಜು, ಪ್ರಶಾಂತ ಕುಮಾರ್ ಭಾಗವಹಿಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಎಎಸ್‌ಪಿ ರಾಜೀವ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!