‘ಕೋವಿಡ್ ಕರ್ಫ್ಯೂ’ ಜಾರಿ

ರಾಜ್ಯಾದ್ಯಂತ ಇಂದು ರಾತ್ರಿಯಿಂದಲೇ ಕಠಿಣ ನಿರ್ಬಂಧ

ಬೆಂಗಳೂರು, ಏ. 26 – ಕೊರೊನಾ ಸೋಂಕಿನ ಹರಡುವಿಕೆ ತಡೆಯಲು ರಾಜ್ಯದಲ್ಲಿ 14 ದಿನ ಕೋವಿಡ್ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 

ಪ್ರಧಾನಮಂತ್ರಿ ಲಾಕ್‍ಡೌನ್ ಅನುಷ್ಠಾನ ಬೇಡ ಎಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜನತಾ ಲಾಕ್‍ಡೌನನ್ನು §ಕೊರೊನಾ ಕರ್ಫ್ಯೂ¬ ಎಂಬ ಹೆಸರಿನ ಮೂಲಕ ಹೇರಿಕೆ ಮಾಡಿದೆ. 

ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಕರ್ಫ್ಯೂ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ, ನಾಳೆ ಮಂಗಳವಾರ ರಾತ್ರಿ 9 ಗಂಟೆಯಿಂದ ಮೇ 10 ಬೆಳಿಗ್ಗೆ 6 ಗಂಟೆಯವರೆಗೂ ಕರ್ಫ್ಯೂ ಜಾರಿಯಲ್ಲಿರುತ್ತದೆ. 

ಈ ಅವಧಿಯಲ್ಲಿ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ದಿನಸಿ, ಹಾಲು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಮತ್ತು ವ್ಯಾಪಾರ ವಹಿವಾಟುಗಳಿಗೆ ಅವಕಾಶ ಕಲ್ಪಿಸಿದ್ದೇವೆ ಎಂದರು.

ಬೆಳಿಗ್ಗೆ 10 ರ ನಂತರ ಎಲ್ಲಾ ವ್ಯಾಪಾರ ಸ್ಥಗಿತ ಗೊಳಿಸಬೇಕು. ಪೊಲೀಸರು ಬಲಪ್ರಯೋಗಿಸಲು ಅವಕಾಶ ನೀಡಬೇಡಿ. ಈ ಸಮಯ ಮೀರಿದ ನಂತರ ಸಾರ್ವಜನಿಕರು ಬೀದಿಗಿಳಿಯಬಾರದು ಎಂದರು. 

ಕೃಷಿ, ವೈದ್ಯಕೀಯ ಸೇವೆ ಕೈಗಾರಿಕಾ ವಲಯಗಳಿಗೆ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ. ಆದರೆ ಕೈಗಾರಿಕಾ ವಲಯದ ಭಾಗವಾಗಿರುವ ಗಾರ್ಮೆಂಟ್ ವಲಯಕ್ಕೆ ಇದರಿಂದ ವಿನಾಯಿತಿ ಇಲ್ಲ. ರೈತರು ಬೆಳೆದ ಬೆಳೆ ಮತ್ತು ತರಕಾರಿಗಳನ್ನು ಬೆಳಗಿನ ನಾಲ್ಕು ಗಂಟೆಗಳ ಅವಧಿಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.  ಅಂತರ ಜಿಲ್ಲೆ ಮತ್ತು ಅಂತರ ರಾಜ್ಯ ಸರಕು ಸಾಗಾಣಿಕೆಗೆ ನಿರ್ಬಂಧ ಹೇರುವುದಿಲ್ಲ. ಆದರೆ, ರಾಜ್ಯ ರಸ್ತೆ ಸಾರಿಗೆ ಹಾಗೂ ಖಾಸಗಿ ಬಸ್‍ಗಳು ರಸ್ತೆಗಿಳಿಯುವಂತಿಲ್ಲ. ರೈಲು ಮತ್ತು ವಿಮಾನದ ಸಂಚಾರ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದರು. 

ಮಹಾರಾಷ್ಟ್ರಕ್ಕೂ  ಮೀರಿ ಕರ್ನಾಟಕದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕ್ರಮ ಅನಿವಾರ್ಯವಾಗಿದೆ ಎಂದವರು ಸಮರ್ಥಿಸಿಕೊಂಡರು. 

ಮೇ 10 ರ ವೇಳೆಗೆ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ, ಇದೇ ಕಠಿಣ ಕ್ರಮ ಮುಂದುವರೆಯಲಿದೆ. ಇದಕ್ಕೆ ಸಾರ್ವಜನಿಕರು ಅವಕಾಶ ನೀಡಬಾರದು. 

ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಅನ್ವಯ ಎಲ್ಲಾ ಕೆಲಸ ಕಾರ್ಯಗಳು ನಡೆಯಲಿವೆ. ಕೇಂದ್ರ, ರಾಜ್ಯ ಸರ್ಕಾರದ ಕಚೇರಿಗಳು, ಬ್ಯಾಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. 

ಸರ್ಕಾರಿ ಕಚೇರಿಗಳು ಶೇ. 50 ರಷ್ಟು ಸಿಬ್ಬಂದಿಗೆ ಮಾತ್ರ ಅವಕಾಶ ನೀಡಲಾಗುವುದು. ಬ್ಯಾಂಕುಗಳ ವಹಿವಾಟು ಸಮಯ ಬದಲಾವಣೆಯಾಗಲಿದೆ ಎಂದರು. 

ಇದು ಲಾಕ್‍ಡೌನ್ ಅಲ್ಲ, ಸೋಂಕು ನಿವಾರಣೆಗೆ ಕಠಿಣ ತೀರ್ಮಾನ ಕೈಗೊಂಡಿದ್ದೇವೆ. ಜನತೆ ಸಹಕಾರ ನೀಡಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಶುಚಿತ್ವ ಕಾಪಾಡುವ ಮೂಲಕ ಸೋಂಕು ನಿವಾರಿಸಲು ಸರ್ಕಾರದ ಜೊತೆ ಕೈಜೋಡಿಸಿ ಎಂದು ಮುಖ್ಯಮಂತ್ರಿಯವರು ಮನವಿ ಮಾಡಿಕೊಂಡರು. 

ಇನ್ನು ಮುಂದೆ ಸೋಂಕು ಪೀಡಿತ ರೋಗಿಗಳಿಗೆ ಆಕ್ಸಿಜನ್ ಕೊರತೆ ಇರುವುದಿಲ್ಲ. ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಆಕ್ಸಿಜನ್ ಒದಗಿಸಲು ಸಮ್ಮತಿಸಿದೆ. ಅಷ್ಟೇ ಅಲ್ಲ ಸೋಂಕಿನ ಚಿಕಿತ್ಸೆಗೆ ಅತ್ಯವಶ್ಯವಾದ ರೆಮಿಡಿಸಿವಿರ್ ಚುಚ್ಚುಮದ್ದನ್ನು 50 ಸಾವಿರದಿಂದ 1.22 ಲಕ್ಷಕ್ಕೆ ಹೆಚ್ಚಿಸಿದೆ. 

ಭಯ ಪಡುವುದು ಬೇಡ, ಆದರೆ ಎಚ್ಚರಿಕೆಯಿಂದ ಇರಿ, ಸರ್ಕಾರ ಸೋಂಕು ನಿವಾರಣೆಗಾಗಿ ಎಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದಕ್ಕೆ ನಿಮ್ಮ ಸಹಕಾರ ಅಗತ್ಯವಿದೆ ಎಂದರು. 

error: Content is protected !!