ಟಿವಿ, ಚಿತ್ರರಂಗದ ಹಾವಳಿಯಲ್ಲಿಯೂ ರಂಗಭೂಮಿ ಇನ್ನೂ ಜೀವಂತ

ದಾವಣಗೆರೆ, ಫೆ.23- ರಂಗಭೂಮಿಯಿಂದ ಚಿತ್ರರಂಗಕ್ಕೆ ಹೋಗಿರುವ ಅನೇಕ ನಟ-ನಟಿಯರು ರಂಗಭೂಮಿಯನ್ನೇ ಮರೆತಿದ್ದಾರೆ ಎಂದು ಯುವ ಮುಖಂಡ ಬಾಡದ ಆನಂದರಾಜ್ ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಲೇಬರ್ ಕಾಲೋನಿಯ ಶ್ರೀ ನಾಟ್ಯಾಚಾರ್ಯ ಕುಲಕರ್ಣಿ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರ ಸಹಯೋಗದಲ್ಲಿ ಶ್ರೀ ಓಂಕಾರೇಶ್ವರ ನಾಟಕ ಸಂಘದಿಂದ ನಿನ್ನೆ ಏರ್ಪಾಡಾಗಿದ್ದ `ಧರ್ಮ ದೇವತೆ’ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಚಿತ್ರರಂಗಕ್ಕೆ ಹೋಗಲು ಕಾರಣವಾದ ರಂಗಭೂಮಿಯನ್ನು ನಿರ್ಲಕ್ಷಿಸುತ್ತಿರುವುದು ಸರಿಯಲ್ಲ. ಇಂದು ರಂಗಭೂಮಿ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಸರ್ಕಾರ, ಸಮಾಜ ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕಾಗಿದೆ. ಕೊರೊನಾ ಸಮಯದಲ್ಲಿ ಅನೇಕ ಸಂಘ – ಸಂಸ್ಥೆಗಳು ರಂಗಭೂಮಿ ಕಲಾವಿದರೂ ಸೇರಿದಂತೆ ಬಡವರಿಗೆ ಆಹಾರ ಕಿಟ್‌ಗಳನ್ನು ವಿತರಿಸಿ, ನೆರವಾದರು. ರಂಗಭೂಮಿ ಕಲಾವಿದರಿಗೆ ಜನರು ಹೆಚ್ಚಿನ ಸಹಕಾರ ನೀಡಬೇಕೆಂದು ಆಶಿಸಿದರು.

ಕನ್ನಡ ಚಳುವಳಿ ನಾಯಕರಾದ ನಾಗೇಂದ್ರ ಬಂಡೀಕರ್, ಬಸವರಾಜ್ ಐರಣಿ, ನೇರ್ಲಿಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಅಕ್ಕಮಹಾದೇವಿ, ಕರುನಾಡ ಸಮರ ಸೇನೆ ರಾಜ್ಯಾಧ್ಯಕ್ಷ ಅವಿನಾಶ್ ಇವರು ಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿ, ರಂಗಭೂಮಿ ಕಲಾವಿ ದರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸಲು ಮುಂದಾಗಬೇಕೆಂದು ಮನವಿ ಮಾಡಿದರು.

ಇಂದಿನ ದೂರದರ್ಶನ, ಚಿತ್ರರಂಗದ ಹಾವಳಿಯಲ್ಲಿಯೂ ರಂಗಭೂಮಿ ಇನ್ನೂ ಜೀವಂತವಾಗಿದೆ. ರಂಗಭೂಮಿಯನ್ನು ಉಳಿಸಿ ಬೆಳೆಸಲು ಪ್ರೇಕ್ಷಕರು ಇನ್ನೂ ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಬಕ್ಕೇಶ್ ನಾಗನೂರು ಅವರು ವಹಿಸಿದ್ದರು.

ಸಮಾಜ ಸೇವಕರಾದ ಟಿ.ಸಿದ್ದರಾಮಪ್ಪ ಬುಳಸಾಗರ, ಗುಡ್ಡಪ್ಪ, ಚಂದ್ರಮ್ಮ, ಕರುನಾಡ ಸಮರಸೇನೆ ಮಹಿಳಾ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಾಲಾ ನಾಗರಾಜ್, ಯುವ ಮುಖಂಡ ಬಿ.ವಿ.ರಾಜಶೇಖರ್, ಹಿರಿಯ ಪತ್ರಕರ್ತ ಪಿ.ಸೀತಾರಾಮ್, ಜಾನಪದ ಕಲಾವಿದ ಉಮೇಶ್, ಕಲಾವಿದರಾದ ಪ್ರೇಮಾ, ಕೊಟ್ರೇಶ್, ಮಂಜುಳಾ, ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬಸ್ ಕಂಡಕ್ಟರ್ ನಾಟಕವನ್ನೂ ನಾಟಕ ಸಂಘದವರು ಅಭಿನಯಿಸಿದರು. ಗಂಗಾಧರ್‌ ಕಾರ್ಯಕ್ರಮವನ್ನು ನಿರೂಪಿಸಿದರು.

error: Content is protected !!