ಜೆಸಿಐ ಸಂಸ್ಥೆಯ ಸಾಮಾಜಿಕ ಸೇವೆ ಮಾದರಿ

ಕೊಟ್ಟೂರಿನ ಕಾರ್ಯಕ್ರಮದಲ್ಲಿ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ

ಕೊಟ್ಟೂರು ಫೆ.20 – ಜನ ಮತ್ತು ಸಾರ್ವಜನಿಕ ಸೇವೆಯನ್ನೇ ಪ್ರಧಾನ ಮಾಡಿಕೊಂಡು ಅತ್ಯುತ್ತಮ ಸೇವೆಯ ಮೂಲಕ ಎಲ್ಲಾ ವರ್ಗದ ಜನರಿಗೆ ನೆರವಾಗುತ್ತಿರುವ ಜೆಸಿಐ ಸಂಸ್ಥೆ ಮತ್ತು ಅದರ ಪದಾಧಿಕಾರಿಗಳ ಕಾರ್ಯ ನಿಜಕ್ಕೂ ಶ್ರೇಷ್ಠತನದ್ದು ಎಂದು ಚಾನುಕೋಟಿ ಅಧ್ಯಕ್ಷ ಡಾ.ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು. 

ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪ್ರಸಕ್ತ ವರ್ಷದ ಜೆ.ಸಿ.ಐ ಕೊಟ್ಟೂರು ಕಾಟನ್‍ನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ  ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಹಿಂದಿನ ಸಾಲಿನ ಜೆಸಿಐ ಕೊಟ್ಟೂರು ಕಾಟನ್ ಪದಾಧಿಕಾರಿಗಳು ಅತ್ಯುತ್ತಮ ಸೇವೆ ಸಲ್ಲಿಸುವ ಮೂಲಕ ಜೆಸಿಐ ವಲಯ ಮಟ್ಟದಲ್ಲಿ ತಮ್ಮ ಶ್ರೇಷ್ಠತೆಯನ್ನು ತೋರಿಸಿದ್ದಾರೆ. ಅದರಂತೆ  ನೂತನ ಪದಾಧಿಕಾರಿಗಳು ಸೇವೆ ಸಲ್ಲಿಸಲು ತೊಡಗಿಸಿಕೊಳ್ಳಿ ಎಂದು ಕರೆ ನೀಡಿದರು. 

ನೂತನ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ವೃದ್ಧಾಶ್ರಮ ಮತ್ತಿತರೆ ದೀನ ದಲಿತರು ಸೇರಿದಂತೆ ಇತರೆ ಅಬಲರಿಗೆ ಸಹಾಯ ನೀಡುವ ಯೋಜನೆ ಸೇರಿದಂತೆ ಇತರೆ ಸಾರ್ವಜನಿಕ ಸೇವೆಗಳನ್ನು ಮುಂದುವರೆಸುವುದಾಗಿ ಹೇಳಿದರು. 

ನೂತನ ಅಧ್ಯಕ್ಷರಾಗಿ ಎಂ.ರಾಘವೇಂದ್ರ, ಸದಸ್ಯರುಗಳಾಗಿ ಬಸವರಾಜ್ ಬಣಕಾರ್, ಸಂತೋಷ್ ಎ, ದೇವರಾಜ್ ಎ,  ಆನಂದ, ವೃಷಭೇಂದ್ರಗೌಡ, ಕೊಟ್ರೇಶ , ರಾಘವೇಂದ್ರ ಮತ್ತಿತರರು ಅಧಿಕಾರ ಸ್ವೀಕಾರದ ಪ್ರಮಾಣ ವಚನ ಸ್ವೀಕರಿಸಿದರು. 

ನಿಕಟ ಪೂರ್ವಾಧ್ಯಕ್ಷ ಬಿ.ಆರ್.ವಿಕ್ರಮ್, ವಲಯ ಅಧ್ಯಕ್ಷ ಪ್ರಶಾಂತ್ ದೊಡ್ಡಮನಿ, ವಲಯ ಉಪಾಧ್ಯಕ್ಷ ಇಂದ್ರಜಿತ್ ಸಿಂಗ್, ಸಮಾಜ ಸೇವಕ ಜೆ.ಟಿ.ಕೇಶವ ಪ್ರಸಾದ್, ಜೆ.ಸಿ ಚಂದ್ರಪ್ಪ, ಕಾರ್ಯದರ್ಶಿ ಶ್ರೀಧರ, ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಎ.ಪಂಪಾಪತಿ ಸ್ವಾಗತಿಸಿದರು.

error: Content is protected !!