ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತನ್ನಿ

ದೇವದಾಸಿ ಮಹಿಳೆಯರಿಗೆ ನ್ಯಾ. ಕೆಂಗಬಾಲಯ್ಯ ಕರೆ

ದಾವಣಗೆರೆ, ಫೆ.14- ಸಮಾಜದಲ್ಲಿರುವ ಅನಿಷ್ಟ ಪದ್ದತಿ ಅಳಿಸಿ ಹಾಕುವ ಮೂಲಕ ಮಾನವ ಘನತೆ ಉಳಿಸಬೇಕಾಗಿದೆ. ದೇವದಾಸಿ ಪದ್ದತಿ ಮುಕ್ತ ಸಮಾಜಕ್ಕೆ ನಾವೆಲ್ಲರೂ ಪಣ ತೊಡಬೇಕಾಗಿದೆ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆಂಗಬಾಲಯ್ಯ ಕರೆ ನೀಡಿದರು. 

ನಗರದ ರೋಟರಿ ಬಾಲಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮಹಿಳಾ ಅಭಿವೃದ್ದಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನೆ ಆಶ್ರಯದಲ್ಲಿ ದೇವದಾಸಿ ಮಹಿಳೆಯರಿಗೆ ನಿನ್ನೆ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ದೇವದಾಸಿ ಪದ್ದತಿಗೆ ಒಳಗಾದ ಮಹಿಳೆಯರು ನರಕ ಅನುಭವಿಸುತ್ತಿದ್ದು, ಸಮಾಜ ಅವರನ್ನು  ಪ್ರಾಣಿಗಳಂತೆ ಶೋಷಣೆ ಮಾಡುತ್ತಿರುವುದು ವಿಷಾದಕರ ಸಂಗತಿ. ದೇವದಾಸಿ ಪದ್ಧತಿ ನಿರ್ಮೂಲನೆ ಕಾಯ್ದೆ ಜಾರಿಯಲ್ಲಿದ್ದರೂ ಹಲವೆಡೆ ಮುತ್ತು ಕಟ್ಟುವ ಮೂಲಕ ದೇವದಾಸಿ ಪದ್ದತಿಗೆ ಮಹಿಳೆಯರನ್ನು ನೂಕುತ್ತಿರುವುದು ಕಂಡು ಬರುತ್ತಿದೆ ಎಂದು ವಿಷಾದಿಸಿದರಲ್ಲದೇ, ದೇವದಾಸಿ ಪದ್ದತಿಗೆ ಒಳಗಾಗಿರುವವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ ಎಂದು ಸಲಹೆ ನೀಡಿದರು. 

ಅನಿಷ್ಟ ಪದ್ದತಿಯಿಂದ ಶೋಷಣೆಗೆ ಒಳಗಾಗಿರುವ ತಾಯಿಂದಿರು ಎಲ್ಲಿಯೇ ಆಗಲಿ ದೇವದಾಸಿ ಪದ್ದತಿಗೆ ನೂಕುವುದು ಕಂಡು ಬಂದರೆ ಅದನ್ನು ಸೂಕ್ತ ಇಲಾಖೆಗಳಿಗೆ ತಿಳಿಸಿ ತಡೆಯುವ ಕೆಲಸ ಮಾಡಬೇಕು. ದೇವದಾಸಿಯರ ಮರು ಸಮೀಕ್ಷೆ ನಡೆಸಿ ಅವರಿಗೆ ಪುನರ್ವಸತಿ, ಸೌಲಭ್ಯಗಳನ್ನು ನೀಡುವ ಜವಾಬ್ದಾರಿ ಸಮಾಜದ ಎಲ್ಲರ ಮೇಲಿದೆ ಎಂದು ತಿಳಿಸಿದರು. 

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ದೇಶದಲ್ಲಿ ಇಂದಿಗೂ ಸಹ ದೇವದಾಸಿ ಪದ್ದತಿ, ಬಾಲ್ಯ ವಿವಾಹ, ಮಲಹೊರುವ ಅನಿಷ್ಟ ಪದ್ದತಿಗಳು ಜೀವಂತವಾಗಿರುವುದು ನಾಗರಿಕ ಸಮಾಜಕ್ಕೆ ಶೋಭೆಯಲ್ಲ. ದೇವದಾಸಿ ಮಹಿಳೆಯರಿಗೆ ವಸತಿ ಕಲ್ಪಿಸುವುದು, ಅವರಲ್ಲಿರುವ ಕೌಶಲ್ಯ ಅಭಿವೃದ್ದಿಗೆ ನೆರವು ನೀಡುವುದು ಮಾಸಾಶನ ಹೆಚ್ಚಿಸಲು ಎಲ್ಲರ ಒತ್ತಾಯವಾಗಬೇಕು ಎಂದು ಹೇಳಿದರು. 

ವಕೀಲರಾದ ಉಷಾ ಕೈಲಾಸದ್ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆ ಪುರುಷರಿಗೆ ಸಮಾನವಾಗಿ ತನ್ನ ಪ್ರತಿಭೆಯಿಂದ ಕಾರ್ಯಗಳನ್ನು ನಿರ್ವಹಿಸುತ್ತಿದ್ದರೂ ಶೋಷಣೆ ತಪ್ಪಿಲ್ಲ. ವಿದ್ಯಾವಂತ ಮಹಿಳೆಯರು ಶೋಷಣೆಗೆ ಒಳಗಾಗುತ್ತಿರುವುದು ದುರಂತದ ಸಂಗತಿ. ಮಹಿಳೆಯರು ಸಂಘಟಿತರಾಗುವ ಮೂಲಕ ತಮ್ಮ ಸಮಸ್ಯೆಗಳ ನಿವಾರಣೆಗೆ ಹಕ್ಕು ಪ್ರತಿಪಾದಿಸಬೇಕೆಂದರು. 

ಜಿಲ್ಲಾ ದೇವದಾಸಿ ಪುನರ್ವಸತಿ ಯೋ ಜನಾ ಅನುಷ್ಠಾನಾಧಿಕಾರಿ ಪ್ರಜ್ಞಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯ ಕ್ರಮದಲ್ಲಿ ಮೋಕ್ಷಪತಿ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಎನ್.ಎಂ. ಆಂಜನೇಯ ಗೂರುಜಿ, ಸ್ಲಂ ಜನಾಂದೋಲನದ ರೇಣುಕಾ ಎಲ್ಲಮ್ಮ, ಯೋಜನಾ ಅನುಷ್ಠಾನಾಧಿಕಾರಿ ಉಮಾ ಓಂಕಾರ ಸೇರಿದಂತೆ ಇತರರಿದ್ದರು.

error: Content is protected !!