ಸೂರಗೊಂಡನಕೊಪ್ಪದಲ್ಲಿ 13 ರಿಂದ ಸಂತ ಸೇವಾಲಾಲ್ ಜಯಂತಿ

ಪೂರ್ವಭಾವಿ ಸಭೆ ನಡೆಸಿದ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಕುಡಚಿ ಕ್ಷೇತ್ರದ ಶಾಸಕ ಪಿ. ರಾಜೀವ್ 

ದಾವಣಗೆರೆ, ಫೆ.7-  ಸಂತ ಸೇವಾಲಾಲ್ ಅವರ  282 ನೇ ಜಯಂತಿ ಉತ್ಸವವನ್ನು ಕೋವಿಡ್ ಹಿನ್ನೆಲೆಯಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ಇದೇ ದಿನಾಂಕ 13 ರಿಂದ 15 ರವರೆಗೆ ಮೂರು ದಿನಗಳ ಕಾಲ ನ್ಯಾಮತಿ ತಾಲ್ಲೂಕು ಸೂರಗೊಂಡ ನಕೊಪ್ಪದಲ್ಲಿ ಆಚರಿಸಲಾಗುತ್ತಿದ್ದು, ಆಯಾ ಇಲಾಖೆ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಸಮನ್ವಯದೊಂದಿಗೆ ಅಚ್ಚುಕಟ್ಟಾಗಿ ನಿರ್ವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಕುಡಚಿ ಕ್ಷೇತ್ರದ ಶಾಸಕ ಪಿ. ರಾಜೀವ್ ಸೂಚನೆ ನೀಡಿದರು.

ಸೂರಗೊಂಡನಕೊಪ್ಪದ ಸಂತ ಸೇವಾ ಲಾಲ್ ಕ್ಷೇತ್ರದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸಂತ ಸೇವಾಲಾಲ್ ಜಯಂತಿ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಂತ ಸೇವಾಲಾಲ್ ಅವರ ಜಯಂತಿ ಉತ್ಸವವನ್ನು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಸಂತ ಸೇವಾಲಾಲ್ ಕ್ಷೇತ್ರಾಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಯಂತ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಉತ್ಸವದಲ್ಲಿ ಮುಖ್ಯಮಂತ್ರಿಗಳು ಆಗಮಿಸಲಿದ್ದು,  ಇದಕ್ಕಾಗಿ ಅಗತ್ಯ ಹೆಲಿಪ್ಯಾಡ್ ನಿರ್ಮಾಣ ಆಗಬೇಕು.  ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿ ಕಾರ್ಯ ಆಗಬೇಕು.  ನಾಡಿನ ಹಲವು ಭಾಗಗಳಿಂದ ಕ್ಷೇತ್ರಕ್ಕೆ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ. ಉತ್ಸವ ದಿನಗಳಂದು ಹೊನ್ನಾಳಿ, ಹರಿಹರ, ಶಿವಮೊಗ್ಗ, ಶಿಕಾರಿಪುರ, ದಾವಣಗೆರೆ, ಸವಳಂಗ ಮುಂತಾದ ಕಡೆಗಳಿಂದ ಕೆಎಸ್‍ಆರ್‍ಟಿಸಿಯವರು ವಿಶೇಷ ಬಸ್ ವ್ಯವಸ್ಥೆ ಮಾಡಬೇಕು ಎಂದರು.

ಜಾತ್ರೆಯ ಅವಧಿಯಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಬೆಸ್ಕಾಂ ಕ್ರಮ ವಹಿಸಬೇಕು.  ಹೆಚ್ಚು ಜನ ಸೇರುವುದರಿಂದ ಪರಿಸರ ಸ್ವಚ್ಛತೆ ಕಾಯ್ದುಕೊಳ್ಳಲು ನಿರ್ಮಿತಿ ಕೇಂದ್ರದಿಂದ ತಾತ್ಕಾಲಿಕ ಶೌಚಾಲಯ, ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಬೇಕು.  ಕ್ಷೇತ್ರದಲ್ಲಿ ಸ್ವಚ್ಛತೆಗಾಗಿಯೇ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಬೇಕು.  ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಸ್ಥಳ ಗುರುತಿಸಿ ಸಿದ್ಧಪಡಿಸಬೇಕು. ಸಮರ್ಪಕ ಕುಡಿಯುವ ನೀರು ಪೂರೈಕೆಗಾಗಿ ಟ್ಯಾಂಕರ್‍ಗಳನ್ನು ಒದಗಿಸಬೇಕು ಎಂದು ರಾಜೀವ್ ತಿಳಿಸಿದರು.

ಮಾಲಾಧಾರಿಗಳಿಗೆ ದಾವಣಗೆರೆ, ಶಿಕಾರಿಪುರ, ಸವಳಂಗ ಸೇರಿದಂತೆ ಅಗತ್ಯ ಇರುವೆಡೆ ವಿಶ್ರಾಂತಿ ತಾಣ ನಿರ್ಮಿಸಿ, ಅಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕು.  ಮಾಲಾಧಾರಿಗಳಿಗೆ ವಿತರಿಸುವ ಸಲುವಾಗಿ ಕೆಎಂಎಫ್‌ನಿಂದ 15 ಸಾವಿರ ಮಜ್ಜಿಗೆ ಪಾಕೆಟ್ ಖರೀದಿಸಲು ನಿರ್ಧರಿಸಲಾಗಿದೆ.  ಫೆ. 13 ರಿಂದ 15 ರವರೆಗೂ ಕ್ಷೇತ್ರದಲ್ಲಿ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದ್ದು, ಆಹಾರದ ಗುಣಮಟ್ಟ ಪರಿಶೀಲನೆ ಕಾರ್ಯಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ನಿಯೋಜಿಸುವಂತೆ ರಾಜೀವ್ ಸೂಚಿಸಿದರು.

ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಡಿವೈಎಸ್‍ಪಿ ಪ್ರಶಾಂತ್, ಸಂತ ಸೇವಾಲಾಲ್ ಮಹಾಮಠ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯಕ್ ಮಾತನಾಡಿದರು. 

ಸಭೆಯಲ್ಲಿ ಜಿ.ಪಂ. ಸದಸ್ಯ ಸುರೇಂದ್ರನಾಯ್ಕ, ತಾ.ಪಂ. ಸದಸ್ಯ ಪೀರ್ಯಾನಾಯ್ಕ, ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕಿ ಸುನಿತಾ ಬಾಯಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ನ್ಯಾಮತಿ ತಹಶೀಲ್ದಾರ್ ತನುಜಾ, ಹೊನ್ನಾಳಿ ತಹಶೀಲ್ದಾರ್ ಬಸನಗೌಡರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್  ಮತ್ತಿತರರು ಉಪಸ್ಥಿತರಿದ್ದರು.

error: Content is protected !!