ಮೀಸಲಾತಿ ನೀಡಲು ಮೀನಾ ಮೇಷ : ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ಹರಪನಹಳ್ಳಿ, ಜ.27 – ರಾಜ್ಯದಲ್ಲಿ ರೈತಾಪಿ ವರ್ಗ, ಶ್ರಮ ಜೀವಿಗಳಾದ ಲಿಂಗಾಯಿತ ಪಂಚಮಸಾಲಿ, ವಾಲ್ಮೀಕಿ ನಾಯಕ ಸಮಾಜ, ಕುರುಬ ಸಮಾಜದವರಿಗೆ ಮೀಸಲಾತಿ ನೀಡಬೇಕು ಎಂದು ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. 

ಪಟ್ಟಣದ ಸಂಡೂರು ಕೇರಿಯಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ಚನ್ನಮ್ಮ ಅವರಿಗೆ ಇದ್ದಂತಹ ಅವಿನಾಭಾವ ಸಂಬಂಧ ಇಂದು ಪಚಮಸಾಲಿ ಹಾಗೂ ಕುರುಬ ಸಮಾಜದ ಬಂಧುಗಳಲ್ಲಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. 

ಎಲ್ಲಾ ಸಮಾಜದವರೊಂದಿಗೆ ಅನ್ಯೂನ್ಯತೆಯಿಂದ ಪಂಚಮಸಾಲಿ ಬಾಂಧವರು ಹೊಂದಿಕೊಂಡಿದ್ದಾರೆ. ಆದ್ದರಿಂದಲೇ ಇಂದು ನಮ್ಮ ಮೀಸಲಾತಿ ಹೋರಾಟಕ್ಕೆ ಅವರು ಬೆಂಬಲ ನೀಡುತ್ತಿದ್ದಾರೆ ಎಂದರು. 

ನಮ್ಮ ಹಕ್ಕುನ್ನು ಕೇಳುತ್ತಿದ್ದೇವೆ. ಶಿಕ್ಷಣ ಹಾಗೂ ಉದ್ಯೋಗಕ್ಕೆ ಮಾತ್ರ 2ಎ ಮೀಸಲಾತಿ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪರಮಾಧಿಕಾರವಿದೆ. ಅವರು ಬೆಳಗಾಂ ಅಧಿವೇಶನದಲ್ಲಿ ಭರವಸೆ ನೀಡಿದ್ದರಾದರೂ ಇಲ್ಲಿಯವರೆಗೆ ಅದನ್ನು ಈಡೇರಿಸಿಲ್ಲ. ಕೂಡಲೇ ನಮ್ಮ ಬೇಡಿಕೆಯನ್ನು ಪರಿಗಣಿಸಬೇಕು. ಪಂಚಮಸಾಲಿ ಸಮಾಜದವರು ತ್ಯಾಗಕ್ಕೆ ಹೆಸರು ವಾಸಿಗಳು. ಇನ್ನೂ ಮುಂದೆ ಅವರನ್ನು ಕೆರಳಿಸುವಂತೆ ನಡೆದು ಕೊಳ್ಳಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕುರುಬ ಸಮಾಜದ ಮುಖಂಡರಾದ ಹೆಚ್.ಬಿ.ಪರಶುರಾಮಪ್ಪ, ಸಾಬಳ್ಳಿ ಜಂಬಣ್ಣ, ಇದ್ಲಿ ರಾಮಪ್ಪ, ಎಸ್.ಆರ್.ತಿಮ್ಮಣ್ಣ, ಅಲಮರಸಿಕೇರಿ ಪರಶುರಾಮ, ಪುರಸಭೆ ಸದಸ್ಯ ಭರತೇಶ್, ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ.ಹಾಲೇಶ್, ಆಲದಹಳ್ಳಿ ಷಣ್ಮಖಪ್ಪ, ಪಂಚಮಸಾಲಿ ಸಮಾಜದ ವಿಜಯಾನಂದ ಕಾಶಪ್ಪನವರ್, ಎನ್.ಕೊಟ್ರೇಶ್, ಎಂ.ಟಿ.ಸುಭಾಶ್ಚಂದ್ರ, ಪೂಜಾರ ಶಶಿಧರ್‍,
ವೀರಣ್ಣ, ನಾಗರಾಜ್, ಚಂದ್ರಶೇಖರ್‍ ಪೂಜಾರ, ಓಂಕಾರಗೌಡ, ಹೆಚ್.ಮಲ್ಲಿಕಾರ್ಜುನ, ಪರಸಪ್ಪ ಹಾಗೂ ಇತರರು ಭಾಗವಹಿಸಿದ್ದರು.

error: Content is protected !!