ದಾವಣಗೆರೆ-ಹರಿಹರ ಅರ್ಬನ್ ಸಹಕಾರಿಗೆ 7.28 ಕೋಟಿ ರೂ. ಲಾಭ

ದಾವಣಗೆರೆ-ಹರಿಹರ ಅರ್ಬನ್ ಸಹಕಾರಿಗೆ 7.28 ಕೋಟಿ ರೂ. ಲಾಭ - Janathavaniಬ್ಯಾಂಕಿನ ಸದಸ್ಯರ ಆರೋಗ್ಯದ ದೃಷ್ಟಿಯಿಂದ ಸ್ಥಾಪಿಸಿರುವ ಆರಾಧ್ಯ ಆಯುಷ್ಮಾನ್ ನಿಧಿಯಿಂದ ಚಿಕಿತ್ಸಾ ವೆಚ್ಚ ನೀಡಲಾಗುತ್ತಿದ್ದು, ಸದರಿ ಸಾಲಿನಲ್ಲಿ 74 ಸದಸ್ಯ ಫಲಾನುಭವಿಗಳು ವಿವಿಧ ಆಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸಾ ವೆಚ್ಚ 11.04 ಲಕ್ಷ ರೂ.ಗಳನ್ನು ಸಂಬಂಧಿಸಿದ ಆಸ್ಪತ್ರೆಗಳಿಗೆ ನೇರವಾಗಿ ಪಾವತಿಸಲಾಗಿದೆ.

– ಎನ್.ಎ. ಮುರುಗೇಶ್, ಅಧ್ಯಕ್ಷರು

ದಾವಣಗೆರೆ,ಏ.1- ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲೊಂದಾದ ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್, 2021 ಮಾರ್ಚ್ ಅಂತ್ಯಕ್ಕೆ 7.28 ಕೋಟಿ ರೂ. ಲಾಭ ಗಳಿಸಿರುವ ಬಗ್ಗೆ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಎನ್.ಎ. ಮುರುಗೇಶ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, 2020-21ನೇ ಸಾಲಿನಲ್ಲಿ ಆದಾಯ ತೆರಿಗೆ 1.49 ಕೋಟಿ ರೂ. ಮತ್ತು ಇತರೆ ಅವಕಾಶಗಳನ್ನು ಕಲ್ಪಿಸಿದ ನಂತರ 4.32 ಕೋಟಿ ರೂ. ನಿವ್ವಳ  ಲಾಭ ಗಳಿಸಿದ್ದು, ಇದು ಕಳೆದ ಸಾಲಿಗೆ ಹೋಲಿಸಿದ್ದಲ್ಲಿ ಗಣನೀಯವಾಗಿ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಮುನ್ನಡೆದಿದೆ ಎಂದು ತಿಳಿಸಿದ್ದಾರೆ.

5.50 ಕೋಟಿ ರೂ. ಷೇರು ಬಂಡವಾಳ, 45.63 ಕೋಟಿ ರೂ. ಕಾಯ್ದಿಟ್ಟ ಮತ್ತು ಇತರೆ ನಿಧಿಗಳಾಗಿದ್ದು, 275.57 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ. 223.54 ಕೋಟಿ ರೂ. ಸಾಲ ಮತ್ತು ಮುಂಗಡಗಳನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. 

ಬ್ಯಾಂಕಿನ ಸಭಾಂಗಣದಲ್ಲಿ ಇಂದು ಸಂಜೆ ನಡೆದ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಗ್ರಾಹಕರ ಮತ್ತು ಸದಸ್ಯರ ಪ್ರೋತ್ಸಾಹ, ಕಾರ್ಯಕಾರಿ ಮಂಡಳಿ ಸದಸ್ಯರ ಸಲಹೆ – ಸಹಕಾರ, ಸಿಬ್ಬಂದಿ ವರ್ಗದವರ ಶ್ರಮದಿಂದಾಗಿ ಬ್ಯಾಂಕ್ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿ, ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಬ್ಯಾಂಕಿನ ಸಿಬ್ಬಂದಿಗಳಿಗೆ ಗ್ರೂಪ್ ಹೆಲ್ತ್ ಇನ್ಸೂರೆನ್ಸ್ ಮಾಡಿಸಲಾಗಿದೆ. ಬ್ಯಾಂಕಿನ ಸದಸ್ಯರ ಮತ್ತು ಗ್ರಾಹಕರಿಗೆ ಶೀಘ್ರ ಸೇವೆ ಒದಗಿಸುವ ನಿಟ್ಟಿನಲ್ಲಿ ಎಟಿಎಂ ಕಾರ್ಡುಗಳನ್ನು ವಿತರಿಸಲಾಗುತ್ತಿದೆ. ಬ್ಯಾಂಕಿನ ಆಡಳಿತ ಕಚೇರಿ ಮುಂಭಾಗದಲ್ಲಿ ಎಟಿಎಂ ಸ್ಥಾಪಿಸಲಾಗಿದ್ದು, ಸದ್ಯದಲ್ಲೇ ಗ್ರಾಹಕರ ಸೇವೆಗೆ ಸಮರ್ಪಿಸಲಾಗುವುದು.

ಬ್ಯಾಂಕಿಂಗ್ ವ್ಯವಹಾರವನ್ನು ಡಿಜಿಟಲೈಜ್ ಮಾಡುವ ಉದ್ದೇಶ ಹೊಂದಿದ್ದು, ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯನ್ನೂ ಸಹ ಗ್ರಾಹಕರಿಗೆ ಶೀಘ್ರ ಒದಗಿಸಲಾಗುವುದು. ಬ್ಯಾಂಕಿನ ಆಡಳಿತ ಕಚೇರಿ ಮೇಲ್ಭಾಗದಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸಲಾಗಿದೆ. ತನ್ನದೇ ಆದ ವಿದ್ಯುತ್ ಉತ್ಪಾದನಾ ಘಟಕದಿಂದಾಗಿ ಬ್ಯಾಂಕಿನ ವಿದ್ಯುತ್ಚಕ್ತಿ ವೆಚ್ಚವನ್ನು ಕಡಿತಗೊಳಿಸಿದಂತಾಗಿದೆ. ಇದೇ ರೀತಿ ಬ್ಯಾಂಕಿನ ಹರಿಹರ ಶಾಖೆಯ ಕಟ್ಟಡ ಮೇಲ್ಭಾಗದಲ್ಲೂ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮುರುಗೇಶ್ ವಿವರಿಸಿದ್ದಾರೆ.

ಬ್ಯಾಂಕಿನ ಉಪಾಧ್ಯಕ್ಷ ಕಿರುವಾಡಿ ವಿ. ಸೋಮಶೇಖರ್, ನಿರ್ದೇಶಕರುಗಳಾದ ರಮಣ್ ಲಾಲ್ ಪಿ.ಸಂಘವಿ, ಎಸ್.ಕೆ. ವೀರಣ್ಣ, ಎ.ಹೆಚ್. ಕುಬೇರಪ್ಪ, ಶ್ರೀಮತಿ ಜಯಮ್ಮ ಪರಶುರಾಮಪ್ಪ, ಶಂಕರ್ ಖಟಾವ್ ಕರ್, ಎಸ್.ಕೆ. ಪ್ರಭು ಪ್ರಸಾದ್, ಶ್ರೀಮತಿ ಶಶಿಕಲಾ ರುದ್ರಯ್ಯ, ಕೆ.ಎಂ. ಜ್ಯೋತಿ ಪ್ರಕಾಶ್, ಪಿ.ಹೆಚ್. ವೆಂಕಪ್ಪ, ಬಿ.ನಾಗೇಂದ್ರಚಾರಿ, ಕೆ.ಹೆಚ್. ಶಿವಯೋಗಪ್ಪ, ಶ್ರೀಮತಿ ಅನಿಲ ಇಂದೂಧರ್ ನಿಶಾನಿಮಠ, ಆರ್.ವಿ. ಶಿರಸಾಲಿಮಠ್, ಕಿರಣ್ ಶೆಟ್ಟಿ, ವಿಶೇಷ ಆಹ್ವಾನಿತರಾದ ಜಿ.ಕೆ. ವೀರಣ್ಣ, ಶ್ರೀಮತಿ ಉಮಾ ವಾಗೇಶ್, ವ್ಯವಸ್ಥಾಪನಾ ಮಂಡಳಿಯ ಸದಸ್ಯರುಗಳಾದ ಕೆ.ಎಂ. ಬಸವರಾಜ್, ಶ್ರೀಮತಿ ಜೆ.ಸಿ. ವಸುಂದರಾ, ಶ್ರೀಮತಿ ಕೆ.ಎಂ. ಶೈಲಾ ಅವರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

 ಪ್ರಧಾನ ವ್ಯವಸ್ಥಾಪಕ ಎಂ. ಶಿವಲಿಂಗಸ್ವಾಮಿ ಅವರು ಸಭೆಯ ಕಾರ್ಯಕಲಾಪವನ್ನು ನಿರ್ವಹಿಸಿದರು.

error: Content is protected !!