ಮಡಿದವರಿಗೆ ಮಿಡಿದ ರೋಟರಿ ಕ್ಲಬ್ ಸದಸ್ಯರು

ದಾವಣಗೆರೆ, ಜ.24- ಕಳೆದ ವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಡಿದ ಮಹಿಳೆಯರಲ್ಲಿ ನಾಲ್ವರು ರೋಟರಿ ಇನ್ನರ್ ವ್ಹೀಲ್ ಸಂಸ್ಥೆಯ ಸಕ್ರಿಯ ಸದಸ್ಯರಾಗಿದ್ದರು. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ, ಅವರೆಲ್ಲ ಈಗ ನೆನಪು ಮಾತ್ರ. ಇತ್ತೀಚಿಗೆ ಭೀಕರ ರಸ್ತೆ ಅಪಘಾತದಲ್ಲಿ ಮಡಿದ ಇನ್ನರ್ ವ್ಹೀಲ್ ಸಂಸ್ಥೆಯ ಸದಸ್ಯರಾದ ಡಾ. ವೀಣಾ ಪ್ರಕಾಶ್, ಪ್ರೀತಿ ರವಿಕುಮಾರ್, ರಾಜೇಶ್ವರಿ ಶಿವಕುಮಾರ್ ಹಾಗೂ ಶಕುಂತಲಾ ಅವರನ್ನು ಮೊನ್ನೆ ಜಂಟಿಯಾಗಿ ಸಭೆ ಸೇರಿದ ರೋಟರಿ ಮತ್ತು ಇನ್ನರ್ ವ್ಹೀಲ್ ಅತ್ಯಂತ ಸಂತಾಪದಿಂದ ಸ್ಮರಿಸಿತು. ಅವರಿಗೆ ಮತ್ತು ಅವರೊಂದಿಗೆ ಅಪಘಾತದಲ್ಲಿ ಅಸುನೀಗಿದವರೆಲ್ಲರಿಗೂ ರೋಟರಿ ಮತ್ತು ಇನ್ನರ್ ವ್ಹೀಲ್ ಸದಸ್ಯರು ಮೊಂಬತ್ತಿ ಬೆಳಗುವುದರ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. 

ರೋಟರಿ ಅಧ್ಯಕ್ಷ ಆರ್.ಟಿ. ಮೃತ್ಯುಂಜಯ ಮತ್ತು ಇನ್ನರ್ ವ್ಹೀಲ್ ಅಧ್ಯಕ್ಷರಾದ ಡಾ. ಶೋಭಾ ಧನಂಜಯ್ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಹಿರಿಯ ಸದಸ್ಯರುಗಳಾದ ಎಸ್.ಕೆ. ವೀರಣ್ಣ, ಜಯಪ್ರಕಾಶ್ ಚಿಗಟೇರಿ ಅವರೊಂದಿಗೆ ಹಲವಾರು ಸದಸ್ಯರು ಪಾಲ್ಗೊಂಡಿದ್ದರು. 

ಈ ಸಂದರ್ಭದಲ್ಲಿ ಮಡಿದ ಮಹಿಳಾ ಸದಸ್ಯೆಯರ ನೆನಪಿನಾರ್ಥ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಸ್ಥೆಯ ವತಿಯಿಂದ ಮಾಡೋಣ ಎಂದು ಇನ್ನರ್ ವ್ಹೀಲ್ ಸದಸ್ಯೆ ಡಾ. ರಶ್ಮಿ ಶೆಟ್ಟಿ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಂಪೂರ್ಣ ಸಭೆ ಸಹಮತ ವ್ಯಕ್ತ ಪಡಿಸಿತು.

error: Content is protected !!