ಹರಪನಹಳ್ಳಿ, ಜ.15- ಮೀಸಲಾತಿ ಭಿಕ್ಷೆಯಲ್ಲ ಅದು ನಮ್ಮ ಸಂವಿಧಾನ ನೀಡಿದ ಹಕ್ಕಾಗಿದ್ದು, ಜಾತಿ, ಜನಸಂಖ್ಯೆ ಆಧಾರದ ಮೇಲೆ ರಾಜ್ಯ ಸರ್ಕಾರ ಶೇ. 7.5ರಷ್ಟು ಮೀಸಲಾತಿಯನ್ನು ಹೆಚ್ಚಿಸಬೇಕು ಎಂದು ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೋರಿಶೆಟ್ಟಿ ಉಚ್ಚೆಂಗೆಪ್ಪ ಹೇಳಿದರು.
ತಾಲ್ಲೂಕಿನ ಕೋಣನಕಟ್ಟೆ. ಕಬ್ಬಳ್ಳಿ, ಉಚ್ಚಂಗಿದುರ್ಗ ಸೇರಿದಂತೆ ಅನೇಕ ಗ್ರಾಮಗಳಲ್ಲಿ 3ನೇ ವರ್ಷದ ವಾಲ್ಮೀಕಿ ಜಾತ್ರೆಯ ಬ್ಯಾನರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆ 50 ಲಕ್ಷಕ್ಕೂ ಅಧಿಕವಿದೆ. ಆದರೆ ವಾಲ್ಮೀಕಿ ನಾಯಕ ಸಮಾಜಕ್ಕೆ ಪ್ರಸ್ತುತ ಶೇ.3 ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಈಗಾಗಲೇ ಕೇಂದ್ರದಲ್ಲಿ ವಾಲ್ಮೀಕಿ ನಾಯಕ ಸಮಾಜಕ್ಕೆ ಶೇ. 7.5 ರಷ್ಟು ಮೀಸಲಾತಿ ನೀಡಲಾಗುತ್ತಿದ್ದು, ಸರ್ವೋಚ್ಛ ನ್ಯಾಯಲಯದ ಆದೇಶವಿದ್ದರೂ ಕೂಡ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ್ದು , ರಾಜ್ಯ ಸರ್ಕಾರ ಕೂಡಲೇ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದರು.
ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರು 28 ಜಿಲ್ಲೆಗಳು ಹಾಗೂ 175 ತಾಲ್ಲೂಕುಗಳ ಪ್ರವಾಸ ಮಾಡಿ ಜಾತ್ರೆಗೆ ಆಹ್ವಾನ ನೀಡುವ ಮೂಲಕ ರಾಜ್ಯದ 4 ನೇ ಅತಿ ದೊಡ್ಡ ಸಮಾಜವನ್ನು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ಎರಡು ಜಾತ್ರೆಗಳು ಯಶಸ್ವಿಯಾಗಿದ್ದು, ಈ ಬಾರಿಯೂ ಕೂಡ ಜಾತ್ರೆ ಯಶಸ್ವಿಯಾಗಲು ನಿಮ್ಮಗಳ ಸಹಕಾರ ಅಗತ್ಯವಾಗಿದೆ ಎಂದರು.
ವಾಲ್ಮೀಕಿ ಜಾತ್ರಾ ಸಮಿತಿ ತಾಲ್ಲೂಕು ಅಧ್ಯಕ್ಷ ಹೆಚ್.ಕೆ. ಹಾಲೇಶ್ ಮಾತನಾಡಿ ಮೀಸಲಾತಿ ಪಡೆದುಕೊಳ್ಳುವುದು ನಮ್ಮ ಸಾಂವಿಧಾನಿಕ ಹಕ್ಕಾಗಿದ್ದು ಮೀಸಲಾತಿ ವಿಚಾರದಲ್ಲಿ ನಾವೆಲ್ಲರೂ ಪಕ್ಷಾತೀತವಾಗಿ ಸ್ವಾಭಿಮಾನಿ ಸಿಂಹದ ಮರಿಗಳಾಗಿ ಘರ್ಜನೆ ಮಾಡಬೇಕಿದೆ. ರಾಜ್ಯದಲ್ಲಿ ಯಾವುದೇ ಸರ್ಕಾರವಿರಲಿ, ಯಾರೇ ಮುಖ್ಯ ಮಂತ್ರಿಗಳಿರಲಿ ನಮಗೆ ನ್ಯಾಯಬದ್ಧವಾದ ಮೀಸಲಾತಿ ಹೆಚ್ಚಿಸ ಬೇಕು. ಕಳೆದ ಎರಡು ಜಾತ್ರೆಗಳು ಯಶಸ್ವಿಯಾಗಿದ್ದು ಈ ಬಾರಿ ಕೂಡ ಜಾತ್ರೆ ಯಶಸ್ವಿಯಾಗಲು ನಿಮ್ಮಗಳ ಸಹಕಾರ ಅಗತ್ಯವಾಗಿದೆ. ವಾಲ್ಮೀಕಿ ನಾಯಕ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮಿ ಮಾತನಾಡಿದರು.
ನಿವೃತ್ತ ಮುಖ್ಯ ಶಿಕ್ಷಕ ಆನಂದಪ್ಪ, ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಉಪಾಧ್ಯಕ್ಷ ಶಿವಾನಂದ , ಪ್ರಧಾನ ಕಾರ್ಯದರ್ಶಿ ಗಿರಜ್ಜಿ ನಾಗರಾಜ, ಸಂಘಟನಾ ಕಾರ್ಯದರ್ಶಿಗಳಾದ ಫಣಿಯಾಪುರ ಲಿಂಗರಾಜ್, ನೀಲಗುಂದ ತಿಮ್ಮೇಶ, ದ್ಯಾಪನಾಯಕನಳ್ಳಿ ಜಿ.ಕೆ. ಬಸವರಾಜ, ಬಾನಳ್ಳಿ ಕೆಂಚನಗೌಡ, ವಾಲ್ಮೀಕಿ ಸೇವಾ ಸಮಿತಿ ಚಿಗಟೇರಿ ಜಂಬಣ್ಣ, ಹಳ್ಳಿಕೇರಿ ಎಚ್. ರಾಜಪ್ಪ, ಕೆ. ಯೋಗೇಶ್, ಎಂ. ಪ್ರಾಣೇಶ್, ನೀಲಗುಂದ ಬಿ. ವಾಗೀಶ್, ಏಕಲವ್ಯ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ರಾಯದುರ್ಗದ ಪ್ರಕಾಶ್ , ದುಗ್ಗಾವತಿ ಮಂಜುನಾಥ, ಕಂಭಟ್ರಹಳ್ಳಿ ರಾಜಪ್ಪ, ಮಹಿಳಾ ಘಟಕದ ಗೌರವಾಧ್ಯಕ್ಷೆ ಟಿ. ಪದ್ಮಾವತಿ. ಮಂಜುಳಾ, ಪವಿತ್ರ, ಶ್ಯಾಲಿನಿ, ಪಿ. ಪರಶುರಾಮ್ ಸಾಸ್ವೆಹಳ್ಳಿ ನಾಗರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.