ಜಗಳೂರಿನ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯಿಂದ ಸಮರ್ಪಣೆ
ಜಗಳೂರು, ಮಾ.25- ತಾಲ್ಲೂಕಿನ ಸಿದ್ಧಯ್ಯನಕೋಟೆ ಗ್ರಾಮದಲ್ಲಿ ನಾಯಕ ಪಂಗಡದ ಮ್ಯಾಸ ನಾಯಕ ಬುಡಕಟ್ಟು ಜನಾಂಗದ ದೇವರ ಎತ್ತುಗಳಿಗೆ ಮೇವು ಸಂಗ್ರಹ ಅಭಿಯಾನದ ಅಂಗವಾಗಿ, ಮೇವು ಸಂಗ್ರಹಣೆ ಮಾಡಿ ಮೊಳಕಾಲ್ಮೂರು ತಾಲ್ಲೂಕು ಕಂಪಳದೇವರಹಟ್ಟಿಯ ಶ್ರೀ ಕಂಪಳದೇವರು ಮತ್ತು ಶ್ರೀ ಪಾಪನಾಯಕ ದೇವರ ಎತ್ತುಗಳಿಗೆ ಕಳುಹಿಸಿಕೊಡಲಾಯಿತು.
ಮ್ಯಾಸಬೇಡ (ಮ್ಯಾಸನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ವತಿಯಿಂದ ದೇವರ ಎತ್ತುಗಳಿಗೆ ಮೇವು ಸಂಗ್ರಹ ಅಭಿಯಾನ ವನ್ನು ಹಮ್ಮಿಕೊಳ್ಳಲಾಗಿತ್ತು. ಈ ಅಭಿ ಯಾನದ ಭಾಗವಾಗಿ ಜಗಳೂರು ತಾಲ್ಲೂಕು ಸಿದ್ಧಯ್ಯನಕೋಟೆ ಗ್ರಾಮದ ಎನುಮಲರು ಬೆಡಗಿನ ಶ್ರೀಮತಿ ಗೌಡ್ರು ಅಂಜಿನಮ್ಮ ಕೋಂ ಹನುಮಂತಪ್ಪ ಮತ್ತು ಎನುಮಲರು ಬೆಡಗಿನ ಶ್ರೀಮತಿ ಮುಲ್ಡಜ್ಜರ ಕರಿಯಮ್ಮ ಕೋಂ ಮುಲ್ಡಜ್ಜರ ಭೀಮಪ್ಪ ಎತ್ತುಗಳಿಗೆ ತಲಾ ಒಂದು ಲೋಡ್ ಮೇವು ನೀಡಿ ಭಕ್ತಿಯನ್ನು ಸಮರ್ಪಿಸಿದರು.
ಸಿದ್ದಯ್ಯನಕೋಟೆ ಗ್ರಾಮದ ಮುಖಂಡ ರಾದ ದೇವರಾಜ ಪಾಳೇಗಾರ ಮಾತನಾಡಿ, ನಮ್ಮ ಮ್ಯಾಸ ನಾಯಕ ಬುಡಕಟ್ಟಿನ ಕೆಲವು ಗುಡಿಕಟ್ಟೆಗಳ ದೇವರ ಎತ್ತುಗಳಿಗೆ ಮೇವಿನ ಕೊರತೆಯಾಗಿರುವುದು ಕಂಡುಬಂದಿದೆ. ಹಾಗಾಗಿ ಇಂದು ಎರಡು ಲೋಡ್ ಮೇವು ಸಂಗ್ರಹಿಸಲಾಯಿತು. ದೇವರ ಎತ್ತುಗಳಿಗೆ ಮೇವು ನೀಡುವುದು ಒಳ್ಳೆಯ ಕಾರ್ಯ. ಎಲ್ಲರೂ ಕೈ ಜೋಡಿಸಬೇಕೆಂದು ಹೇಳಿದರು.
ಮ್ಯಾಸ ನಾಯಕ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ದೊಡ್ಡಮನಿ ಪ್ರಸಾದ್, ಹೆಚ್.ಜಿ ಲೋಕೇಶ್, ಟಿ.ಪಿ ಮಂಜುನಾಥ್ ಹಾಗೂ ಸಿದ್ಧಯ್ಯನಕೋಟೆ ಗ್ರಾಮದ ಹೊಳಿಕೇರ್ ಬಸವರಾಜಪ್ಪ, ಕುಣಿಮಾದಿಹಳ್ಳಿ ಹನುಮಂತಪ್ಪ, ಮುಲ್ಡಜ್ಜರ ಭೀಮಪ್ಪ, ಓಬಪ್ಪ, ಮಾಟಪ್ಳ ರವಿ, ಜೈಹೀರಪ್ಪ, ಎನ್. ಅಂಜಿನಪ್ಪ , ಮಾರುತಿಗೌಡ, ಕೆ. ಮಧು, ಕೆ. ಗೋಣೆಪ್ಪ ಹಾಗೂ ಇತರರು ಉಪಸ್ಥಿತರಿದ್ದರು.