ಕಾಮಗಾರಿ ವಿಳಂಬವಾದರೆ ಗುತ್ತಿಗೆದಾರರು ಬ್ಲಾಕ್ಲಿಸ್ಟ್ಗೆ : ಶಾಸಕ ರೇಣುಕಾಚಾರ್ಯ ಎಚ್ಚರಿಕೆ
ಹೊನ್ನಾಳಿ, ಜ.18- ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ 49 ವಿದ್ಯುತ್ ಟವರ್ ಗಳನ್ನು ಅಳವಡಿಸುವ ಕಾಮಗಾರಿಗೆ ರೈತರು ಸಹಕಾರ ನೀಡಬೇಕು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದರು.
ಬಿದರಗಡ್ಡೆ ಗ್ರಾಮದಿಂದ ಸಾಸ್ವೆಹಳ್ಳಿ ವರೆಗೆ ರೈತರ ಜಮೀನುಗಳಲ್ಲಿ ಹಾದು ಹೋಗುವ 10.9 ಕಿ.ಮೀ. ಟವರ್ಗಳನ್ನು ಅಳವಡಿಸುವ ಕಾಮಗಾರಿ ನಡೆಸಲು ರೈತರ ಮನವೊಲಿಸಲು ಸಂಸದರು, ಹೊನ್ನಾಳಿ ಮತ್ತು ಚನ್ನಗಿರಿ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತಿತರೆ ಅಧಿಕಾರಿಗಳ ವಿಶೇಷ ಸಭೆ ನಡೆಯಿತು.
ಅಲ್ಲದೇ, ಹೊನ್ನಾಳಿ, ಭದ್ರಾವತಿ, ಚನ್ನಗಿರಿ, ದಾವಣಗೆರೆ, ಹೊಳಲ್ಕೆರೆ, ಚಿತ್ರದುರ್ಗದವರೆಗೆ 121 ಕೆರೆ ತುಂಬಿಸುವ ಸರ್ಕಾರದ ಮಹತ್ವಾಕಾಂಕ್ಷಿ ಏತ ನೀರಾವರಿ ಯೋಜನೆಗೆ ಯಾವ ರೈತರು ಅಡ್ಡಿಪಡಿಸದೆ ಸಹಕಾರ ನೀಡಬೇಕು, ರೈತರಿಗೆ ಅನ್ಯಾಯ ವಾಗದಂತೆ ಸೂಕ್ತ ಪರಿಹಾರ ನೀಡಲಾಗು ವುದು ಎಂದ ಅವರು, ಗುತ್ತಿಗೆದಾರರು ಕಾಮಗಾರಿಯನ್ನು ಅನುಷ್ಠಾನಗೊಳಿಸಬೇಕು. ವಿಳಂಬ ಮಾಡಿದರೆ ಅಂತಹ ಗುತ್ತಿಗೆದಾ ರರನ್ನು ಬ್ಲಾಕ್ಲಿಸ್ಟ್ಗೆ ಸೇರಿಸಲಾಗುವುದು ರೇಣುಕಾಚಾರ್ಯ ಎಚ್ಚರಿಸಿದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ರೈತರ ಜೀವನಾಡಿ ಕೆರೆ ತುಂಬಿಸುವ ಯೋಜನೆ ಕಾಮಗಾರಿಗೆ ಯಾವ ರೈತರು ಅಡ್ಡಿಪಡಿಸಬಾರದು, ನಾನೊಬ್ಬ ಅಡಿಕೆ ಬೆಳೆದವನಾಗಿ ರೈತರ ಕಷ್ಟ ನನಗೆ ಗೊತ್ತಾಗುತ್ತದೆ. ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.ಸರ್ಕಾರದ ದೊಡ್ಡ ಪ್ರಮಾಣದ ಯೋಜನೆಗೆ ರೈತರು ಸಹಕರಿಸಬೇಕು ಎಂದರು.
ಚನ್ನಗಿರಿ ಶಾಸಕ ಮಾಡಾಳ ವಿರೂಪಾಕ್ಷಪ್ಪ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿದರು.
ಎಸ್ಪಿ ರಿಷ್ಯಂತ್, ಉಪವಿಭಾಗಾಧಿಕಾರಿ ಶ್ರೀಮತಿ ಮಮತ ಹೊಸಗೌಡರ್, ತಹಶೀಲ್ದಾರ್ ಬಸವನಗೌಡ ಕೋಟೂರ, ತಾ.ಪಂ. ಇಓ ರಾಮಭೋವಿ ಮತ್ತು ಇತ ರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.