ದಾವಣಗೆರೆ, ಜ.16- ಸ್ಮಾರ್ಟ್ ಸಿಟಿಯಡಿ ಚರಂಡಿ ಕಾಮಗಾರಿಗೆಂದು ಗುಂಡಿ ಅಗೆದ ಹಿನ್ನೆಲೆಯಲ್ಲಿ ಬೃಹತ್ ಮರವೊಂದು ಮನೆಯ ಮೇಲೆ ಉರುಳಿ ಬಿದ್ದಿರುವ ಘಟನೆ ನಗರದ ಬಂಬೂಬಜಾರ್ನಲ್ಲಿ ಇಂದು ಸಂಜೆ ನಡೆದಿದೆ.
ಚರಂಡಿ ಕಾಮಗಾರಿಗಾಗಿ ಮರಗಳಿದ್ದ ಬಳಿಯೇ ಗುಂಡಿ ಅಗೆದಿದ್ದು, ಈ ವೇಳೆ ಬೃಹತ್ ಮರವೊಂದು ನೆಲದಲ್ಲಿ ಹಿಡಿತ ಸಿಗದೇ ಬೇರು ಸಹಿತ ಬಿಲ್ಡಿಂಗ್ ಮೇಲೆಯೇ ಬಾಗಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಹೇಳಲಾಗಿದೆ.
ಕಾಮಗಾರಿ ಕೈಗೊಳ್ಳುವ ಮುನ್ನ ಮರ ಉರುಳಿ ಬೀಳುವ ಸಾಧ್ಯತೆ ಇರುವುದನ್ನು ಗಮನಿಸದೇ ಹೀಗೆ ಅವೈಜಾನಿಕ ಕಾಮಗಾರಿ ಕೈಗೊಳ್ಳುವ ಬದಲು ಮುಂಜಾಗ್ರತಾ ದೃಷ್ಟಿಯಿಂದ ಮೊದಲಿಗೆ ಮರಗಳನ್ನು ಕಡಿದು ನಂತರ ಕಾಮಗಾರಿ ಮಾಡಬೇಕಾಗಿತ್ತು. ಅನಾಹುತ ಸಂಭವಿಸದಂತೆ, ಪೂರ್ವ ನಿಯೋಜಿತವಾಗಿ ಕಾಮಗಾರಿ ಕೈಗೊಳ್ಳದೇ ಚರಂಡಿ ನಿರ್ಮಾಣಕ್ಕೆ ಗುಂಡಿ ಅಗೆದು ಮರಗಳು ಉರುಳಿ ಬೀಳುವಂತೆ ಮಾಡುವುದು ಎಷ್ಟು ಸಮಂಜಸ ಎಂಬ ಆಕ್ಷೇಪ ಕೆಲ ಸ್ಥಳೀಯರದ್ದಾಗಿದೆ.