ಹೊನ್ನಾಳಿ,ಏ.3- ಯುಗಾದಿ ಹಬ್ಬದಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಾಲ್ಲೂಕಿನ ಕೋಟೆಮಲ್ಲೂರು ಗ್ರಾಮದಲ್ಲಿ ರೈತರ ಜಮೀನಿನಲ್ಲಿ ಉಳುಮೆ ಮಾಡುವ ಮೂಲಕ ಗಮನ ಸೆಳೆದರು.
ಕೋಟೆಮಲ್ಲೂರು ಗ್ರಾಮದ ಹಾಲೇಶಪ್ಪ ಗೌಡ್ರು ನೂತನ ಟ್ರ್ಯಾಕ್ಟರ್ ಖರೀದಿ ಮಾಡಿದ್ದು, ಅವರ ಜಮೀನಿನಲ್ಲಿ ಉಳುಮೆ ಮಾಡುವ ಮೂಲಕ ರೈತ ಬಾಂಧವರಿಗೆ ಹೊಸ ವರ್ಷದ ಶುಭಾಶಯ ಕೋರಿದರು.
ಯುಗಾದಿ ಹಬ್ಬ ಬಂದರೆ ಸಾಕು ರೈತರ ಕೃಷಿ ಚಟುವಟಿಕೆಗೆ ಜೀವ ಕಳೆ ಬಂದಂಗೆ ಎಂದ ರೇಣುಕಾಚಾರ್ಯ, ಯುಗಾದಿ ಹಬ್ಬ ರೈತರ ಬಾಳಲ್ಲಿ ಬಂಗಾರ ತರಲಿ ಎಂದು ಆಶಿಸಿದರು.
ಲಗೋರಿ ಆಡಿದ ರೇಣುಕಾಚಾರ್ಯ: ಯುಗಾದಿ ಹಬ್ಬದಂದು ಕೋಟೆ ಮಲ್ಲೂರು ಗ್ರಾಮಕ್ಕೆ ಭೇಟಿ ನೀಡಿದ್ದ ರೇಣುಕಾಚಾರ್ಯ ಗ್ರಾಮೀಣ ಕ್ರೀಡೆಯಾದ ಲಗೋರಿ, ಚೂಚೆಂಡು ಆಟವಾಡಿದರು.
ಯುಗಾದಿ ಹಬ್ಬದಂದು ಗ್ರಾಮೀಣ ಕ್ರೀಡೆಗಳನ್ನು ಆಡುವುದು ವಾಡಿಕೆ, ಆಧುನೀಕತೆ ಬೆಳೆದಂತೆ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿದ್ದು, ಯುವಕರು ಗ್ರಾಮೀಣ ಕ್ರೀಡೆಗಳ ಕಡೆ ಹೆಚ್ಚಿನ ಗಮನ ಕೊಡುವಂತೆ ರೇಣುಕಾಚಾರ್ಯ ಯುವಕರಲ್ಲಿ ಮನವಿ ಮಾಡಿದರು.