ದಾವಣಗೆರೆ ಬಿಟ್ಟು ನಾನು ಎಲ್ಲೂ ಹೋಗಲ್ಲ, ಇಲ್ಲೇ ಇರುತ್ತೇನೆ : ವಿನಯ್ ಕುಮಾರ್
ಹರಪನಹಳ್ಳಿ, ಮೇ 9 – ಲೋಕಸಭೆ ಚುನಾವಣೆ ಬಳಿಕ ನಾನು ಹೋಗಿಬಿಡುತ್ತೇನೆ ಎಂದು ಕೆಲವರು ಅಂದುಕೊಂಡಿದ್ದಾರೆ. ಆದ್ರೆ, ನಾನು ಎಲ್ಲೂ ಹೋಗಲ್ಲ. ಇಲ್ಲೇ ಇರುತ್ತೇನೆ. ಜನರೊಟ್ಟಿಗಿನ ಒಡನಾಟ ಮುಂದುವರಿಸುತ್ತೇನೆ ಎಂದು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.
ಇಲ್ಲಿಗೆ ಸಮೀಪದ ಶೃಂಗಾರ ತೋಟ ಗ್ರಾಮದಲ್ಲಿ ಹೊಸಪೇಟೆ ಅತ್ಯಾಧುನಿಕ ಕಣ್ಣಿನ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ ನೇತ್ರ ತಪಾಸಣಾ ಶಿಬಿರವನ್ನು ಸಂಚಾರಿ ವಾಹನದಲ್ಲಿ ಟೇಪ್ ಕಟ್ ಮಾಡುವ ಮೂಲಕ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಪ್ರವಾಸ ಮಾಡುತ್ತೇನೆ. ಪಾದಯಾತ್ರೆ, ಕಾಲ್ನಡಿಗೆ ವೇಳೆ ಹೋಗಲು ಸಾಧ್ಯವಾಗದ ಹಳ್ಳಿಗಳಿಗೆ ಮತ್ತೆ ಹೋಗುತ್ತೇನೆ. ಇಲ್ಲಿನ ಜನರ ಜೊತೆ ಸಂವಾದ ನಡೆಸುತ್ತೇನೆ. ಸಮಸ್ಯೆಗಳನ್ನು ಅರಿಯುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಚುನಾವಣಾ ಫಲಿತಾಂಶ ಏನೇ ಆಗಲಿ. ಸೋಲು ಗೆಲುವು ಸಹಜ. ಆದ್ರೆ, ಪ್ರತಿಯೊಂದು ಕಡೆ ಮಾತನಾಡುವ ರೀತಿಯಲ್ಲಿ ಕೆಲಸ ಮಾಡಿದ್ದೇವೆ. ಸ್ವಾಭಿಮಾನಿಯಾಗಿ ಕಣಕ್ಕಿಳಿದು ಲಕ್ಷಾಂತರ ಜನರ ಜೊತೆ ಹೋರಾಡಿದ್ದೇನೆ. ಜನರು ಮಾತನಾಡುವ ರೀತಿಯಲ್ಲಿ ಒಳ ಹೊಡೆತ ಆಗಿದ್ದೇ ಆದರೆ ನಾನು ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ರಾಜಕೀಯ ಚಟುವಟಿಕೆಗಳಿಗೆ ಚಾಲನೆ ನೀಡುತ್ತೇನೆ. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ದಾವಣಗೆರೆ ಮಹಾನಗರ ಪಾಲಿಕೆ ಸೇರಿದಂತೆ ಹಲವು ಚುನಾವಣೆಗಳು ಮುಂಬರುವ ದಿನಗಳಲ್ಲಿ ಬರಲಿದ್ದು, ಹೇಗೆ ಎದುರಿಸಬೇಕೆಂಬ ಬಗ್ಗೆ ಕಾರ್ಯತಂತ್ರ ರೂಪಿಸುತ್ತೇನೆ ಎಂದು ತಿಳಿಸಿದರು.
ಚುನಾವಣೆ ಚೆನ್ನಾಗಿಯೇ ಆಗಿದೆ. ಒಳ ಹೊಡೆತ ಇದೆ ಎಂದು ಜನರೇ ಹೇಳುತ್ತಿದ್ದರು. ಲಕ್ಷಾಂತರ ಕಾರ್ಯಕರ್ತರು ಕೈಹಿಡಿದಿದ್ದಾರೆ. ನಿಮಗೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ನಿಮ್ಮ ಜೊತೆ ಸದಾ ಇರುತ್ತೇನೆ ಎಂದು ಹೇಳಿದರು.