ಮಹಾನಗರ ಪಾಲಿಕೆ ಸ್ಥಾಯಿ ಸಮಿತಿಗಳು ಕೈ ವಶ
ದಾವಣಗೆರೆ, ಆ. 11 – ನಾಲ್ಕೂ ಸ್ಥಾಯಿ ಸಮಿತಿಗಳು ಕಾಂಗ್ರೆಸ್ ಪಕ್ಷದ ವಶವಾಗುವುದರೊಂದಿಗೆ, ಪಾಲಿಕೆಯಲ್ಲಿ ಕೈ ಪಾಳೆಯ ಇನ್ನಷ್ಟು ಬಲ ಪಡೆದಿದೆ. ಪ್ರತಿ ಸ್ಥಾಯಿ ಸಮಿತಿಯ ಏಳು ಸದಸ್ಯರ ಪೈಕಿ ತಲಾ ನಾಲ್ಕನ್ನು ಕಾಂಗ್ರೆಸ್ ಹಾಗೂ ಬೆಂಬಲಿತರು ಪಡೆದಿದ್ದಾರೆ. ಬಿಜೆಪಿ ಮೂರು ಸ್ಥಾನಗಳನ್ನು ಪಡೆದಿದೆ.
ಶುಕ್ರವಾರ ಪಾಲಿಕೆಯಲ್ಲಿ ಯೋಜನೆ, ಲೆಕ್ಕ ಪತ್ರ, ತೆರಿಗೆ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಗಳಿಗಾಗಿ ತಲಾ 7 ಸದಸ್ಯರು ಆಯ್ಕೆಯಾಗಬೇಕಿತ್ತು. ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದ ಜಯಮ್ಮ ಗೋಪಿನಾಯ್ಕ ಹಾಗೂ ಸೌಮ್ಯ ನರೇಂದ್ರ ಕುಮಾರ್ ಅವರು ಕಾಂಗ್ರೆಸ್ ಪಾಳೆಯಕ್ಕೆ ಜಿಗಿದಿ ದ್ದರು. ಜೆಡಿಎಸ್ನ ಬಿ. ನೂರ್ ಜಹಾನ್ ಅವರು ಕಾಂಗ್ರೆಸ್ಗೆ ಬೆಂಬಲ ನೀಡಿದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ, ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಹಾಗೂ ಹರೀಶ್ ಕುಮಾರ್ ಅವರು ಉಪಸ್ಥಿತರಿದ್ದರು. ಇದರಿಂದಾಗಿ ಪಾಲಿಕೆಯಲ್ಲಿ ಕಾಂಗ್ರೆಸ್ 27 ಸದಸ್ಯರ ಬೆಂಬಲ ಪಡೆಯಿತು.
ಮತ್ತೊಂದೆಡೆ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಐವರು ಪರಿಷತ್ ಸದಸ್ಯರು ಗೈರಾಗಿದ್ದರು. ಇದರಿಂದಾಗಿ ಬಿಜೆಪಿ ಸಂಖ್ಯಾಬಲ 22ಕ್ಕೆ ಸೀಮಿತವಾಯಿತು.
ಸೊಸೆಗೊಂದು ಕಾಲ, ಮಾಡಿದ್ದುಣ್ಣೋ ಮಹಾರಾಯ
ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆಗೆ ಎಸ್ಸೆಸ್, ಎಸ್ಸೆಸ್ಸೆಂ ಪ್ರತಿಕ್ರಿಯೆ
ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುವ ಫಲಿತಾಂಶ ಬಂದ ನಂತರ ಪ್ರತಿಕ್ರಿಯಿಸಿರುವ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ‘ಮಾಡಿದ್ದುಣ್ಣೋ ಮಹಾರಾಯ’ ಎಂದಿದ್ದಾರೆ. ‘ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಮಾಡಿದ್ದುಣ್ಣೋ ಮಹಾ ರಾಯ ಎಂಬ ರೀತಿಯಲ್ಲಿ ಅವರು ಮಾಡಿದ ಪಾಪ ಪುಣ್ಯಗಳನ್ನು ಅನುಭವಿಸಿ, ಕಣ್ಣಾರೆ ನೋಡಿಯೇ ಸಾಯಬೇಕು ಎಂದಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಹೆಚ್ಚಿನ ಸದಸ್ಯರೊಂದಿಗೆ ಬಹುಮತ ಹೊಂದಿತ್ತು. ಆದರೆ, ಬಿಜೆಪಿಯವರು ಬೇರೆ ಕ್ಷೇತ್ರಗಳ ಪರಿಷತ್ ಸದಸ್ಯರ ಹೆಸರನ್ನು ದಾವಣಗೆರೆಯಲ್ಲಿ ತೋರಿಸಿ ಪಾಲಿಕೆ ಮತದಾರರಾಗಿ ಮಾಡಿದ್ದರು. ನಮ್ಮ ಪಕ್ಷದ ಪರಿಷತ್ ಸದಸ್ಯರ ಹೆಸರುಗಳನ್ನು ತೆಗೆದು ಹಾಕಿದ್ದರು. ಈ ರೀತಿ ಗೆದ್ದ ಕೀರ್ತಿ ಮಹಾನ್ ಬಿಜೆಪಿ ನಾಯಕರಿಗೆ ಸಲ್ಲುತ್ತದೆ ಎಂದು ವ್ಯಂಗ್ಯವಾಡಿದರು.
ಈಗ ನಾಲ್ಕು ಸ್ಥಾಯಿ ಸಮಿತಿಗಳಲ್ಲಿ ಕಾಂಗ್ರೆಸ್ಗೆ ಬಹುಮತ ಬಂದಿದೆ. ಹೆಚ್ಚಿನ ಅನುದಾನ ತಂದು ದಾವಣಗೆರೆ ನಗರವನ್ನು ಹೆಚ್ಚು ಸ್ವಚ್ಛಗೊಳಿಸುವ ಮತ್ತು ಹೆಚ್ಚು ಕೆಲಸ ಕಾರ್ಯಗಳನ್ನು ಮಾಡುತ್ತೇವೆ ಎಂದವರು ಹೇಳಿದರು.
ಬಿಜೆಪಿಯಲ್ಲಿದ್ದ ಜಯಮ್ಮ ಗೋಪಿನಾಯ್ಕ ಹಾಗೂ ಸೌಮ್ಯ ನರೇಂದ್ರಕುಮಾರ್ ಅವರು ಕಾಂಗ್ರೆಸ್ ಪಾಳೆಯಕ್ಕೆ ಬಂದಿರುವುದು ಆಪರೇಷನ್ ಹಸ್ತ ಅಲ್ಲ ಎಂದವರು ಸ್ಪಷ್ಟಪಡಿಸಿದರು.
ಇಬ್ಬರೂ ಪಕ್ಷೇತರ ಸದಸ್ಯರಾಗಿದ್ದಾರೆ. ತಮ್ಮ ವಾರ್ಡುಗಳ ಅಭಿವೃದ್ಧಿಗೆ ಅನುದಾನ ಕೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬಂದು ಸೇರಿಕೊಂಡಿದ್ದಾರೆ ಎಂದು ಸಚಿವರು ಹೇಳಿದರು.
ಬಾರದ ಬಿಜೆಪಿ ಸಂಸದರು, ಪರಿಷತ್ ಸದಸ್ಯರು
ಈ ಹಿಂದೆ ಮೇಯರ್ ಚುನಾವಣೆ ನಡೆಯುವ ಸಂದರ್ಭದಲ್ಲಿ ಬಿಜೆಪಿ ಸಂಸದರು ಹಾಗೂ ಪರಿಷತ್ ಸದಸ್ಯರು ಹಾಜರಿದ್ದ ಕಾರಣ ಪಕ್ಷಕ್ಕೆ ಗೆಲುವಾಗುತ್ತಿತ್ತು. ಈ ಬಾರಿ ಲೋಕಸಭಾ ಸದಸ್ಯರು ದೆಹಲಿ ಅಧಿವೇಶನಕ್ಕೆ ತೆರಳಿದ್ದರು. ಬಿಜೆಪಿ ಐವರು ಪರಿಷತ್ ಸದಸ್ಯರು ಗೈರಾಗಿದ್ದರು. ಇದರ ಜೊತೆಗೆ ಇಬ್ಬರು ಪಕ್ಷೇತರ ಸದಸ್ಯರು ಕಾಂಗ್ರೆಸ್ ಪಾಳೆಯಕ್ಕೆ ಜಿಗಿದಿದ್ದು ಬಿಜೆಪಿಗೆ ಹಿನ್ನಡೆ ತಂದಿದೆ.
ಬಿಜೆಪಿಯವರು ಹತಾಶರಾಗಿದ್ದಾರೆ
ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತಿರುವ ಕಾರಣದಿಂದ ಬಿಜೆಪಿಯವರು ಹತಾಶರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಮೀಷನ್ ಆರೋಪ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಗಾಗಿ ಅವರು ಹೆದರಿಕೊಂಡಿದ್ದಾರೆ. ಹೀಗಾಗಿ ಏನಾದರೊಂದು ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡಲು ಬಂದಿದ್ದೇವೆ ಎಂದರು.
ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಕಾರ್ಯಕರ್ತರು ಯಾವ ರೀತಿ ಹೇಳುತ್ತಾರೋ, ಅದೇ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಇನ್ನೂ ಸಮಯ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೆಳಿಗ್ಗೆ 11 ಗಂಟೆಗೆ ಸ್ಥಾಯಿ ಸಮಿತಿ ಚುನಾವಣೆಗೆ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಚುನಾವಣಾ ಪ್ರಕ್ರಿಯೆ ಆರಂಭಿಸಿದರು. ತೆರಿಗೆ, ಆರೋಗ್ಯ ಹಾಗೂ ಯೋಜನಾ ಸಮಿತಿಗಳಿಗೆ ತಲಾ 8 ಸದಸ್ಯರು ಹಾಗೂ ಲೆಕ್ಕ ಪತ್ರ ಸಮಿತಿಗೆ 10 ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ನಂತರ ಹೆಚ್ಚುವರಿಯಾಗಿ ಅರ್ಜಿ ಸಲ್ಲಿಸಿದ್ದ ಸದಸ್ಯರು ನಾಮ ಪತ್ರ ವಾಪಸ್ ಪಡೆದರು. ಅಂತಿಮವಾಗಿ ಎಲ್ಲಾ ನಾಲ್ಕು ಸ್ಥಾಯಿ ಸಮಿತಿಗಳಿಗೆ ತಲಾ ಏಳು ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.
ತೆರಿಗೆ ಹಾಗೂ ಹಣಕಾಸು ಸ್ಥಾಯಿ ಸಮಿತಿಗೆ ಹೆಚ್. ಉದಯಕುಮಾರ್, ಸೌಮ್ಯ ಎಸ್. ನರೇಂದ್ರ ಕುಮಾರ್, ಕಾರಿಗನೂರು ಜಾಕೀರ್ ಅಲಿ, ಸುಧಾ ಮಂಜುನಾಥ ಇಟ್ಟಿಗುಡಿ, ಆರ್. ಶಿವಾನಂದ, ರೇಖಾ ಸುರೇಶ್ ಗಂಡಗಾಳೆ ಹಾಗೂ ರೇಣುಕಾ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.
ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿಗೆ ನಾಗರಾಜು, ಸೈಯದ್ ಚಾರ್ಲಿ, ಮೀನಾಕ್ಷಿ ಎಂ. ಜಗದೀಶ್, ನಾಗರತ್ನಮ್ಮ, ಆರ್.ಎಲ್. ಶಿವಪ್ರಕಾಶ್, ಎಲ್.ಡಿ. ಗೋಣೆಪ್ಪ, ಹೆಚ್.ಆರ್. ಶಿಲ್ಪಾ ಆಯ್ಕೆಯಾಗಿದ್ದಾರೆ.
ಯೋಜನೆ ಹಾಗೂ ಸುಧಾರಣಾ ಸ್ಥಾಯಿ ಸಮಿತಿಗೆ ಅಬ್ದುಲ್ ಲತೀಫ್, ಎಂ.ಕೆ. ಶಿವಲೀಲಾ ಕೊಟ್ರಯ್ಯ, ಜೆ.ಡಿ. ಪ್ರಕಾಶ್, ಡಿ.ಎಸ್. ಆಶಾ, ಉಮಾ ಪ್ರಕಾಶ್, ಎಸ್.ಟಿ. ವೀರೇಶ್ ಹಾಗೂ ಎಸ್. ಶ್ವೇತಾ ಆಯ್ಕೆಯಾಗಿದ್ದಾರೆ.
ಲೆಕ್ಕಪತ್ರಗಳ ಸ್ಥಾಯಿ ಸಮಿತಿಗೆ ಅಹ್ಮದ್ ಕಬೀರ್ ಖಾನ್, ಕಲ್ಲಳ್ಳಿ ನಾಗರಾಜ್, ಬಿ. ನೂರ್ ಜಹಾನ್, ಆರ್. ಜಯಮ್ಮ, ಗೌರಮ್ಮ, ಗಾಯತ್ರಿ ಬಾಯಿ ಹಾಗೂ ಕೆ.ಎಂ. ವೀರೇಶ್ ಆಯ್ಕೆಯಾಗಿದ್ದಾರೆ.