ದಾವಣಗೆರೆ ಯುವಕರ ಸಾಹಸ ಪ್ರೋತ್ಸಾಹಿಸೋಣ

ದಾವಣಗೆರೆ ಯುವಕರ ಸಾಹಸ ಪ್ರೋತ್ಸಾಹಿಸೋಣ

`ಡೈಮಂಡ್ ಕ್ರಾಸ್ ಚಲನಚಿತ್ರ’ದ ದಾವಣಗೆರೆ ವಿವಿ ಕುಲಪತಿ ಬಿ.ಡಿ. ಕುಂಬಾರ್ ಮೆಚ್ಚುಗೆ

ದಾವಣಗೆರೆ, ಆ. 2 – ಡೈಮಂಡ್ ಕ್ರಾಸ್ ಚಲನಚಿತ್ರ ದಲ್ಲಿ ದಾವಣಗೆರೆ ಯುವಕರ ಸಾಹಸ ದೃಶ್ಯಗಳನ್ನು ನೋಡಿದ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಬಿ.ಡಿ. ಕುಂಬಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶ್ವವಿದ್ಯಾನಿಲಯದ ಆವರಣದಲ್ಲಿ ಡಾ. ಜೆ.ಕೆ. ರಾಜು ಮತ್ತು ವಿದ್ಯಾರ್ಥಿಗಳೊಂದಿಗೆ ಡೈಮಂಡ್ ಕ್ರಾಸ್ ಚಿತ್ರದ ಟೀಸರ್‌ಅನ್ನು ವೀಕ್ಷಿಸಿದರು. 

ಯಾವ ಗುರುವಿನ ಸಹಾಯವೂ ಇಲ್ಲದೆ ಮಾರ್ಷಲ್ ಆರ್ಟ್ಸ್ ಕಲಿತು ಹಾಲಿವುಡ್ ಚಿತ್ರಗಳನ್ನು ನೆನಪಿಸುವಂತೆ ಸಾಹಸ ದೃಶ್ಯಗಳನ್ನು ಸಂಯೋಜಿಸಿ, ಅಭಿನಯಿಸಿರುವ ದಾವಣಗೆರೆಯ ರಜತ್ ಅಣ್ಣಪ್ಪ, ರಾಜು ಮಂಜಪ್ಪ ಮತ್ತು ಗೆಳೆಯರನ್ನು ಅಭಿನಂದಿಸಿದರು.

ನಂತರ ವಿದ್ಯಾರ್ಥಿಗಳೊಂದಿಗೆ ಮಾತ ನಾಡಿದ ಅವರು, ದಾವಣಗೆರೆ ಈ ಯುವಕರನ್ನು ಸಿನಿಮಾ ನೋಡುವುದರ ಮೂಲಕ ನಾವೆಲ್ಲರೂ ಪ್ರೋತ್ಸಾಹಿಸೋಣ ಎಂದು ಕರೆ ನೀಡಿದರು. 

ಎಂ.ಬಿ.ಎ ವಿಭಾಗದ ಪ್ರಾಧ್ಯಾಪಕ ಡಾ. ಜೆ. ಕೆ. ರಾಜು ಮಾತನಾಡಿ, ರಜತ್ ಅಣ್ಣಪ್ಪ ಎಂ.ಬಿ.ಎ ವ್ಯಾಸಂಗ ಮಾಡುವಾಗ ತಮ್ಮ ಬಳಿ ಸಲಹೆ ತೆಗೆದುಕೊಂಡದ್ದನ್ನು ಸ್ಮರಿಸಿದರು. ದಿನಗೂಲಿ ಕಾರ್ಮಿಕರ ಮಕ್ಕಳಾದ ಇವರು ಕಷ್ಟಪಟ್ಟು ವ್ಯಾಸಂಗ ಮಾಡುತ್ತಾ ಈ ಸಾಹಸ ಕಲೆಯನ್ನು ಕರಗತ ಮಾಡಿಕೊಂಡು ಇಂದು ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವುದು ನಾವೆಲ್ಲರೂ ಹೆಮ್ಮೆ ಪಡುವಂತಹ ವಿಷಯ ಎಂದರು. 

ಎಲ್ಲಾ ಯುವಕರು, ವಿದ್ಯಾರ್ಥಿಗಳು ಬಿಡುವಿದ್ದಾಗ ಈ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಬೇಕೆಂದು ಕರೆ ನೀಡಿದರು. 

ವೇದಿಕೆ ಮೇಲೆ ಚಿತ್ರದ ನಾಯಕ ರಜತ್ ಅಣ್ಣಪ್ಪ, ಖಳ ನಾಯಕ ರಾಜ ಮಂಜಪ್ಪ ಮತ್ತು ಅವರ ಗೆಳೆಯರಾದ ರೋಜಿ ಶರತ್, ಹರೀಶ್ ಜಾನಿ, ಸ್ಮಾರ್ಟ್ ನಾಗು ಇತರರು ಉಪಸ್ಥಿತರಿದ್ದರು.

error: Content is protected !!