ತಾಲ್ಲೂಕುವಾರು ಇಲಾಖೆಗಳಿಗೆ ಶ್ರೇಣಿ ವ್ಯವಸ್ಥೆ

ತಾಲ್ಲೂಕುವಾರು ಇಲಾಖೆಗಳಿಗೆ ಶ್ರೇಣಿ ವ್ಯವಸ್ಥೆ

ಸಾಧನೆ ಕಳಪೆಯಾದರೆ ಶಿಸ್ತು ಕ್ರಮ : ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್

ದಾವಣಗೆರೆ, ಜು. 28 – ತಾಲ್ಲೂಕು ಮಟ್ಟದಲ್ಲಿ ವಿವಿಧ ಇಲಾಖೆಗಳು ಯಾವ ರೀತಿ ಕೆಲಸ ಮಾಡುತ್ತಿವೆ ಎಂಬುದರ ಬಗ್ಗೆ ನಿಗಾ ವಹಿಸಿ ಗ್ರೇಡಿಂಗ್ (ಶ್ರೇಣಿ) ರೂಪಿಸಲಾಗುವುದು. ಸಾಧನೆ ಕಳಪೆಯಾದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಜನಪರವಾಗಿ ಹಾಗೂ ತ್ವರಿತವಾಗಿ ಕೆಲಸ ಮಾಡಬೇಕು. ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಕಾರ್ಯಕ್ಷೇತ್ರಗಳಿಗೆ ಭೇಟಿ ನೀಡಿ ಸಮಸ್ಯೆ ಅರಿತು ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಲಾಗಿದೆ. ತಾಲ್ಲೂಕುಗಳ ಕಾರ್ಯ ನಿರ್ವಹಣೆ ಕುರಿತು ತಿಳಿಯಲು ಪ್ರತಿ ತಿಂಗಳು ಕಂದಾಯ ಅಧಿಕಾರಿಗಳ ಸಭೆ ಮಾಡಲಾಗುವುದು ಎಂದು ಹೇಳಿದರು. ಅನ್ನ ಭಾಗ್ಯ ಯೋಜನೆಯಡಿ ಬಿ.ಪಿ.ಎಲ್. ಪಡಿತರದಾರರಿಗೆ ನೀಡಲಾಗುತ್ತಿರುವ ಹಣ ತೊಡಕುಗಳಿಂದಾಗಿ ಈ ತಿಂಗಳು ಸಿಗದೇ ಇದ್ದರೆ, ಮುಂದಿನ ತಿಂಗಳು ನೀಡಲು ಯೋಜನೆ ಇದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ತಿಳಿಸಿದರು.

ಆಧಾರ್ ಜೋಡಣೆ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಜಿಲ್ಲೆಯ 40 ಸಾವಿರ ಪಡಿತರದಾರರ ಖಾತೆಗಳಿಗೆ ಹಣ ಜಮಾ ಆಗಿರಲಿಲ್ಲ. ಈ ತೊಡಕುಗಳನ್ನು ಬಗೆಹರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದವರು ಹೇಳಿದರು.

ಮಳೆ ಕಾರಣದಿಂದಾಗಿ ಆಗಬಹುದಾದ ಅನಾಹುತಗಳ ತಡೆಗೆ ಮುನ್ನೆಚ್ಚರಿಕಾ ಕ್ರಮಕ್ಕೆ ಸೂಚನೆಗಳನ್ನು ನೀಡಲಾಗಿದೆ. ಮಳೆ ಕಾರಣದಿಂದ ಸಾವು ಸಂಭವಿಸಿದರೆ ಇಲ್ಲವೇ ಮನೆ ಕುಸಿದರೆ 24 ಗಂಟೆಗಳ ಒಳಗೆ ಪರಿಹಾರ ತಲುಪಿಸಲು ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

51 ಅಂಗನವಾಡಿ ಹಾಗೂ 11 ಶಾಲೆಗಳು ಮಳೆಯಿಂದ ಸೋರುತ್ತಿರುವುದು ಕಂಡು ಬಂದಿದೆ. ಈ ರೀತಿಯ ಸಮಸ್ಯೆ ಇರುವ ಶಾಲಾ ಕಟ್ಟಡಗಳನ್ನು ಗುರುತಿಸಿ ಪರ್ಯಾಯ ಯೋಜನೆ ರೂಪಿಸುವಂತೆ ಸೂಚನೆ ನೀಡಲಾಗಿದೆ ಎಂದವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಉಪಸ್ಥಿತರಿದ್ದರು.

error: Content is protected !!