ಜಿಲ್ಲೆಯಲ್ಲಿ ಬೆಳೆಗಳಿಗೆ ಶೀತದ ಅಡ್ಡ ಪರಿಣಾಮ : ಪರಿಹಾರ

ಜಿಲ್ಲೆಯಲ್ಲಿ ಬೆಳೆಗಳಿಗೆ ಶೀತದ ಅಡ್ಡ ಪರಿಣಾಮ : ಪರಿಹಾರ

ದಾವಣಗೆರೆ, ಜು.25- ಜಿಲ್ಲೆಯ ಮುಂಗಾರು ಹಂಗಾಮಿನ ಮಳೆ ಆಶ್ರಿತ ಪ್ರದೇಶದಲ್ಲಿ ಈಗಾಗಲೇ ವಿವಿಧ ಬೆಳೆಗಳ ಬಿತ್ತನೆಯಾಗಿದ್ದು, ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣವಿದ್ದು, ಆಗಿಂದಾಗ್ಗೆ ಜಿಟಿ ಜಿಟಿ ಮಳೆ ಬರುತ್ತಿರುವುದರಿಂದ ಕೆಲವೊಂದು ಭಾಗದ ಜಮೀನಿನಲ್ಲಿ ನೀರು ನಿಲ್ಲುವಂತಹ ಕಡೆಗಳಲ್ಲಿ ಬೆಳೆಗಳಿಗೆ ಶೀತದ ಅಡ್ಡ ಪರಿಣಾಮಗಳು ಕಂಡು ಬರುತ್ತಿವೆ. ಕಾರಣ ರೈತ ಬಾಂಧವರು ವಿವಿಧ ಬೆಳೆಗಳಲ್ಲಿ ಈ ಕೆಳಗಿನಂತೆ ಕ್ರಮ ಕೈಗೊಳ್ಳಲು ವಿನಂತಿಸಿದೆ.

ಜಿಲ್ಲೆಯಲ್ಲಿ ಮೆಕ್ಕೆಜೋಳ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೀತದ ಪರಿಣಾಮ ಬೆಳೆ ಬಿಳಿಚಾಗುವುದು ಹಾಗೂ ಕ್ಯಾದಿಗೆ ರೋಗದ ತರಹದ ಲಕ್ಷಣಗಳು ಕಂಡು ಬಂದಲ್ಲಿ, ಜಮೀನಿನಲ್ಲಿ ನೀರು ಬಸಿದು ಹೋಗುವಂತೆ ನೀರಿನ ದಾರಿ ಕಲ್ಪಿಸುವುದು. ದಪ್ಪವಾಗಿ ಬಿತ್ತನೆಯಾದ ಕಡೆಗಳಲ್ಲಿ ಕನಿಷ್ಠ 8 ಅಂಗುಲ ಅಂತರ ಕಾಯ್ದುಕೊಳ್ಳಲು ಸಸಿಗಳನ್ನು ಕಿತ್ತು, ಎಡೆ ಹೊಡೆದು ಬೆಳೆ ಸಾಲುಗಳಿಗೆ ದಿಂಡು ಏರಿಸಬೇಕು.

ಮೆಕ್ಕೆಜೋಳ 30 ದಿವಸದ ಬೆಳೆಗೆ 10 ರಿಂದ 15 ಕೆಜಿ ಯೂರಿಯಾ ಮೇಲುಗೊಬ್ಬರ ಕೊಡಬಹುದು. ಶೀತ ಬಾಧೆಯಿಂದ ಬೇಗ ಚೇತರಿಸಿಕೊಳ್ಳಲು 3ಗ್ರಾಂ.ನೀರಿನಲ್ಲಿ ಕರಗುವ ಸಾರಜನಕ:ರಂಜಕ:ಪೊಟ್ಯಾಷ್ (19:19:19 / 18:18:18) ಮತ್ತು 3 ಮಿಲೀ. ಲಘು ಪೋಷಕಾಂಶ ದ್ರಾವಣವನ್ನು ಪ್ರತೀ ಲೀಟರ್ ನೀರಿಗೆ ಬೆರೆಸಿ ಬೆಳೆಗೆ ಸಿಂಪಡಿಸಬೇಕು. 

ಮಳೆ ಹಾಗೂ ಬಿಸಿಲು ವಾತಾವರಣ ಇದ್ದಲ್ಲಿ ಶೇಂಗಾ ಬೆಳೆಯಲ್ಲಿ ಬುಡ ಕೊಳೆ ರೋಗ ಕಂಡು ಬರುತ್ತದೆ. ಅಲ್ಲಲ್ಲಿ ಗಿಡಗಳು ಬಾಡುವುದು ಕಂಡು ಬರುತ್ತದೆ. ಹತೋಟಿಗಾಗಿ 2ಗ್ರಾಂ. ಕಾರ್ಬನ್ ಡೈಜಿಂ ಪ್ರತೀ ಲೀಟರ್ ನೀರಿಗೆ ಬೆರೆಸಿ ದ್ರಾವಣವನ್ನು ರೋಗ ಪೀಡಿತ ಬೆಳೆಗಳ ಬುಡಕ್ಕೆ ಸುರಿಯಬೇಕು. 

ಶೇಂಗಾ ಬಿತ್ತುವಾಗ ಜಿಪ್ಸಂ ಹಾಕಿಲ್ಲದಿದ್ದಲ್ಲಿ, 30 ದಿನದೊಳಗಾಗಿ 2ಕ್ವಿಂ. ಜಿಪ್ಸಂನ್ನು ಪ್ರತೀ ಎಕರೆಗೆ ಮಣ್ಣಿನಲ್ಲಿ ಬೆರೆಸಿ ಎಡೆ ಹೊಡೆದು ದಿಂಡು ಏರಿಸಬೇಕು.

ತೊಗರಿ ಬೆಳೆಯಲ್ಲಿ ನೀರು ನಿಲ್ಲದಂತೆ ಬಸಿದು ತೆಗೆಯಬೇಕು. ಇಲ್ಲದಿದ್ದಲ್ಲಿ ಸಿಡಿ ರೋಗ ಬರುವ ಸಾಧ್ಯತೆ ಇರುತ್ತದೆ. ಸಿಡಿ ರೋಗದ ಲಕ್ಷಣಗಳು (ಗಿಡ ಬಾಡಿದಂತೆ ಅಥವಾ ಒಣಗಿದಂತೆ ಕಾಣುತ್ತದೆ) ಇದ್ದಲ್ಲಿ ಸಿಡಿ ರೋಗ ಬಾಧಿತ ಒಣಗಿದ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ಮುನ್ನೆಚ್ಚರಿಕೆಯಾಗಿ ಇತರೆ ಪ್ರದೇಶಕ್ಕೆ ರೋಗ ಹರಡದಂತೆ 1ಗ್ರಾಂ. ಕಾರ್ಬಂಡೈಜಿಂ ಪ್ರತೀ ಲೀಟರ್ ನೀರಿಗೆ ಬೆರೆಸಿ ರೋಗ ಪೀಡಿತ ಪ್ರದೇಶ ನೆನೆಯುವಂತೆ ಸುರಿಯಬೇಕು.

ಹತ್ತಿ ಬೆಳೆಯಲ್ಲಿ ಸತತವಾಗಿ ಬರುವ ಜಿಟಿ ಜಿಟಿ ಮಳೆಯಿಂದ ಕರಿ ಹೇನು ಬಾಧೆ ಕಂಡು ಬಂದಲ್ಲಿ ಹತೋಟಿಗೆ ಒಂದು ಮಿಲೀ. ಅಸಿಟಮಿಪ್ರಿಡ್ 3ಲೀ. ನೀರಿಗೆ ಅಥವಾ ಒಂದು ಮಿಲೀ ಇಮಿಡಕ್ಲೋಪ್ರಿಡ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಯ ಮೇಲೆ ಚೆನ್ನಾಗಿ ಸಿಂಪಡಿಸಬೇಕು. ಜಮೀನಿನಲ್ಲಿ ನೀರು ನಿಲ್ಲದಂತೆ ಬಸಿದು ತೆಗೆಯಬೇಕು. ಶೀತ ಬಾಧೆಯಿಂದ ಎಲೆ ಕೆಂಪಾಗುವುದು ಕಂಡುಬಂದಲ್ಲಿ, ಶೇ.2ರ ಡಿಎಪಿ ರಸಗೊಬ್ಬರದ ದ್ರಾವಣವನ್ನು (100 ಲೀ.ನೀರಿನಲ್ಲಿ 2ಕೆಜಿ ಡಿಎಪಿ ಚೆನ್ನಾಗಿ ಕರಗಿಸಿ ಒಂದು ರಾತ್ರಿ ಬಿಟ್ಟು, ಮೇಲಿನ ತಿಳಿ) ಪ್ರತೀ ಎಕರೆಗೆ 200ಲೀ.ನಂತೆ ಬೆಳೆಗೆ ಸಿಂಪರಿಸಬೇಕು. ಬೆಳೆಯಲ್ಲಿ ಎಡೆ ಹೊಡೆದು ಸಾಲುಗಳಿಗೆ ದಿಂಡು ಏರಿಸಬೇಕು.

ಎಲ್ಲಾ ಬೆಳೆಗಳ ಬಿತ್ತನೆ ಕಾಲಕ್ಕೆ ಜಿಪ್ಸಂ, ಜಿಂಕ್, ಬೋರಾನ್ ನೀಡಿಲ್ಲದಿದ್ದರೆ, 30 ದಿವಸದೊಳಗಾಗಿ ಪ್ರತಿ ಎಕರೆಗೆ 1ಕ್ವಿಂ.ಜಿಪ್ಸಂ, 5ಕೆಜಿ ಜಿಂಕ್ ಮತ್ತು 2ಕೆಜಿ ಬೋರಾನ್ ಪೋಷಕಾಂಶಗಳನ್ನು ಒದಗಿಸಿ ಎಡೆ ಹೊಡೆದು ಸಾಲುಗಳಿಗೆ ದಿಂಡು ಏರಿಸಿ, ಬದುಗಳನ್ನು ಸ್ವಚ್ಚಗೊಳಿಸಿ, ಕಳೆ ಮುಕ್ತವಾಗಿರಿಸಿದಲ್ಲಿ ಕೀಟ ರೋಗ ಬಾಧೆ ಕಡಿಮೆಯಾಗುತ್ತದೆ. ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಲಘು ಪೋಷಕಾಂಶ ಮಿಶ್ರಣಗಳು ರೈತರಿಗೆ ರಿಯಾಯತಿಯಲ್ಲಿ   ಲಭ್ಯವಿರುತ್ತವೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

error: Content is protected !!