ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಜಿಪಂ ಸಿಇಒ ಸುರೇಶ್ ಇಟ್ನಾಳ್ ಎಚ್ಚರಿಕೆ
ದಾವಣಗೆರೆ, ಜೂ. 18 – ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಉತ್ತಮ ಫಲಿತಾಂಶ ಪಡೆದವರು ಅತಿ ವಿಶ್ವಾಸ ಹೊಂದಿದರೆ ಮುಗ್ಗರಿಸುವ ಅಪಾಯ ಇದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಣಾಧಿಕಾರಿ ಸುರೇಶ್ ಇಟ್ನಾಳ್ ಎಚ್ಚರಿಸಿದ್ದಾರೆ.
ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಹೆಚ್ಚಿನ ಅಂಕ ಗಳಿಸಿದ ವೀರಶೈವ ಲಿಂಗಾಯತ ನೌಕರರ ಪತ್ತಿನ ಸಹಕಾರ ಸಂಘದ ಷೇರುದಾರರ ಮಕ್ಕಳಿಗೆ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನಗರದ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಬೆಳಿಗ್ಗೆ ಕಾರ್ಯಕ್ರಮ ನೆರವೇರಿತು.
ಶಾಲಾ – ಕಾಲೇಜು ಹಂತದಲ್ಲಿ ಹೆಚ್ಚು ಅಂಕ ಗಳಿಸುವುದು ಒಂದು ಮೆಟ್ಟಿಲು ಮಾತ್ರ. ಇನ್ನೂ ಸಾಕಷ್ಟು ಮೆಟ್ಟಿಲುಗಳನ್ನು ಕ್ರಮಿಸಬೇಕಿದೆ. ಈಗಿನಂತೆ ನಿರಂತರ ಪರಿಶ್ರಮಿಗಳಾದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂದವರು ಹೇಳಿದರು.
ಪ್ರತಿಭೆ ಅಂದರೆ ಕೇವಲ ಅಂಕಗಳಷ್ಟೇ ಅಲ್ಲ. ಕ್ರೀಡೆ, ಸಾಹಿತ್ಯ, ಸಂಗೀತ ಮುಂತಾದ ವಲಯ ಗಳಲ್ಲೂ ಪ್ರತಿಭೆಗಳಿರುತ್ತವೆ. ಎಲ್ಲ ವಲಯಗಳಲ್ಲಿ ಸಾಧನೆಗೆ ಅವಕಾಶ ಇದೆ ಎಂದವರು ಹೇಳಿದರು.
ಶಿಕ್ಷಣಾಧಿಕಾರಿ ಜಿ.ಎಸ್. ರಾಜಶೇಖರ್ ಮಾತನಾಡಿ, ಎಲ್ಲ ಪೋಷಕರು ದೂರಾಲೋಚನೆ ಯಿಂದ ಮಕ್ಕಳ ಅಭಿವೃದ್ದಿ ಬಯಸುತ್ತಾರೆ. ಪೋಷಕರ ಶ್ರಮ ಮಕ್ಕಳಿಗೆ ಸ್ಫೂರ್ತಿ ಆಗಬೇಕು. ಯಾವುದೇ ಹುದ್ದೆಗೆ ಹೋದರೂ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಬಿ. ಪಾಲಾಕ್ಷಿ, ಜಿಲ್ಲೆಯಲ್ಲಿ 6-8 ಸಾವಿರ ವೀರಶೈವ ಲಿಂಗಾಯತ ಸಮುದಾಯದ ನೌಕರರಿದ್ದಾರೆ. ಆದರೆ, ಪತ್ತಿನ ಸಂಘದಲ್ಲಿ ಕೇವಲ 651 ಸದಸ್ಯರಿದ್ದಾರೆ. ಸದಸ್ಯತ್ವ ಹೆಚ್ಚಾಗಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಲೋಕಣ್ಣ ಮಾಗೋಡ್ರ ವಹಿಸಿದ್ದರು.
ಈ ಸಂದರ್ಭದಲ್ಲಿ ಪತ್ತಿನ ಸಂಘದ ಸಂಸ್ಥಾಪಕ ಅಧ್ಯಕ್ಷ ಕೆ. ಶಿವಶಂಕರ್, ನಿಕಟಪೂರ್ವ ಅಧ್ಯಕ್ಷ ಎನ್.ಇ. ನಟರಾಜ್, ಉಪಾಧ್ಯಕ್ಷ ಬಿ.ಕೆ. ನಾಗರಾಜ್, ವಿಶೇಷ ಆಹ್ವಾನಿತ ಎ.ಆರ್. ಉಜ್ಜನಪ್ಪ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಗನೂರು ಪಬ್ಲಿಕ್ ಟ್ರಸ್ಟ್ ನಿರ್ದೇಶಕ ಎಸ್. ಆರ್. ಸಿರಗುಂಬಿ, ಕೃಷಿ ಇಲಾಖೆ ಉಪ ನಿರ್ದೇಶಕ ಆರ್. ತಿಪ್ಪೇಸ್ವಾಮಿ, ತಾಲ್ಲೂಕು ಪಂಚಾಯ್ತಿ ಸಿಇಒ ಆನಂದ್, ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬಿ.ಕೆ. ನಾಗರಾಜ್, ನಿರ್ದೇಶಕರಾದ ಎಂ. ಸಿದ್ದೇಶ್, ವಿ.ಎನ್. ವೀರಣ್ಣ, ಬಿ.ಬಿ. ವಿಶಾಲಾಕ್ಷಮ್ಮ ಮತ್ತಿತರರು ಉಪಸ್ಥಿತರಿದ್ದರು.
ಗೌರಿ ನೃತ್ಯ ಪ್ರದರ್ಶನ ನೀಡಿದರು. ಬಿ.ಟಿ.ಪ್ರಕಾಶ್ ಪ್ರಾರ್ಥಿಸಿದರು.