ವಾರದೊಳಗೆ ಪುಷ್ಪ ಹರಾಜು ಕೇಂದ್ರದಲ್ಲಿ ಹೂವಿನ ವ್ಯಾಪಾರ

ಸಂಸದ ಜಿ.ಎಂ. ಸಿದ್ದೇಶ್ವರ ಭೇಟಿ – ಪರಿಶೀಲನೆ

ದಾವಣಗೆರೆ ಜೂ.25- ಇಲ್ಲಿನ ಭಾರತ್ ಕಾಲೋನಿ ರಸ್ತೆಯಲ್ಲಿನ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯ ಪುಷ್ಪ ಹರಾಜು ಕೇಂದ್ರಕ್ಕೆ ಹೂವಿನ ವ್ಯಾಪಾರವನ್ನು ವಾರದೊಳಗಾಗಿ ಸ್ಥಳಾಂತರಿಸಲಾಗುವುದು ಎಂದು  ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ಈ ಕೇಂದ್ರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ತಂಡದೊಂದಿಗೆ ಇಂದು ಮಧ್ಯಾಹ್ನ ಭೇಟಿ ನೀಡಿ ಪರಿಶೀಲಿಸಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹಿಂದೆ ಹೋಲ್‍ಸೇಲ್ ಪುಷ್ಪ ಮಾರುಕಟ್ಟೆ ಸ್ಥಳಾಂತರಿಸಿದಾಗ ಕೆಲವು ಮಾರಾಟಗಾರರು ಪುಷ್ಪ ಹರಾಜು ಕೇಂದ್ರಕ್ಕೆ ಬಂದು ವ್ಯಾಪಾರ ನಡೆಸಿದ್ದರು. ಮತ್ತೆ ಕೆಲವರು ಬರಲು ನಿರಾಕರಿಸಿ, ಮಾಮೂಲಿ ಸ್ಥಳದಲ್ಲಿಯೇ ಉಳಿದಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲಾ ಹೂವಿನ ವ್ಯಾಪಾರ ವನ್ನು ಒಂದು ವಾರದಲ್ಲಿಯೇ ಈ ಹರಾಜು ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು. ಹೂವಿನ ವ್ಯಾಪಾರ ಇಲ್ಲಿಯೇ ನಡೆಸುವಂತೆ ನೋಡಿಕೊಳ್ಳಲಾಗುವುದು. ಹಣ್ಣಿನ ಕೇಂದ್ರವೂ ಪಕ್ಕದಲ್ಲಿಯೇ ಇರುವುದರಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಪುಷ್ಟ ಹರಾಜು ಕೇಂದ್ರದಲ್ಲಿ ಸಾಕಷ್ಟು ವಿಶಾಲವಾದ ಜಾಗವಿದೆ. ಆದರೆ, ಇಲ್ಲಿನ ದೊಡ್ಡ ಚರಂಡಿಯಿಂದ ದುರ್ವಾಸನೆ ಬೀರುತ್ತಿರುವುದಾಗಿ ವ್ಯಾಪಾರಸ್ಥರ ದೂರುಗಳಿದ್ದು, ಅದನ್ನು ಸರಿಪಡಿಸಿ, ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ಅತ್ಯಂತ ಸುಸಜ್ಜಿತವಾದ ಪುಷ್ಪ ಹರಾಜು ಕೇಂದ್ರ ಒದಗಿಸಲಾಗಿದೆ. ಇದರಲ್ಲಿ ರೈತರಿಗೆ ವಿಶ್ರಾಂತಿ ಕೊಠಡಿ, ಕ್ಯಾಂಟೀನ್ ಹಾಗೂ ಕೋಲ್ದ್ ಸ್ಟೋರೇಜ್‍ನಿಂದ ಹಿಡಿದು ಅಗತ್ಯ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಸಾಕಷ್ಟು ವಿಸ್ತಾರವಾದ ಜಾಗವೂ ಇದ್ದು, ಶೀಘ್ರವೇ ಹೋಲ್‍ಸೇಲ್ ಪುಷ್ಪ ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು. ಈ ಹರಾಜು ಕೇಂದ್ರ ಬಿಟ್ಟು ಬೇರೆಲ್ಲೂ ಮಾರಾಟಕ್ಕೆ ಅವಕಾಶವಿರುವುದಿಲ್ಲ. ಹಣ್ಣು ಮತ್ತು ಹೂವಿನ ಮಾರುಕಟ್ಟೆ ಒಂದೆಡೆ ಇರುವುದರಿಂದ ಹೂ, ಹಣ್ಣು ಖರೀದಿಸಲು ಅನುಕೂಲವಾಗಲಿದೆ. ಈ ಭಾಗವೂ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದರು.

ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನರ್, ಎಪಿಎಂಸಿ ಕಾರ್ಯದರ್ಶಿ ಪ್ರಭು ಸೇರಿದಂತೆ ಸಂಬಂಧಪಟ್ಟ ಅಧಿಕಾರಿ ವರ್ಗದವರು ಇದ್ದರು.

error: Content is protected !!