20ನೇ ವಾರ್ಡ್ ಮತ್ತೆ ಕೈ ವಶವಾಗಲಿ: ಎಸ್ಸೆಸ್

 ದಾವಣಗೆರೆ, ಮಾ. 13-  ಬಿಜೆಪಿ ಮುಖಂಡರ ಅಧಿಕಾರದ ಆಸೆಗೆ 20ನೇ ವಾರ್ಡ್‌ನಲ್ಲಿ ಮತ್ತೆ ಉಪ ಚುನಾವಣೆ ಎದುರಿಸುವಂತಾಗಿದೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.

ನಗರದ ಬಂಬೂಬಜಾರ್ ರಸ್ತೆಯ ಕಲ್ಲೇಶ್ವರ ಮಿಲ್˝ನಲ್ಲಿ ಮಹಾನಗರ ಪಾಲಿಕೆ 20ನೇ ವಾರ್ಡ್‍ನ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಆಕಾಂಕ್ಷಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಹಿಂದೆ ವಾರ್ಡ್‌ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದಂತೆ, ಇದೇ 29 ರಂದು ನಡೆಯುವ ಚುನಾವಣೆಯಲ್ಲೂ ಎಲ್ಲರೂ ಸಂಘಟಿತರಾಗಿ ಮತ್ತೊಮ್ಮೆ ಬೆಂಬಲಿಸುವ ಮೂಲಕ ವಾರ್ಡನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.

ದಾವಣಗೆರೆ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,  ಬಿಜೆಪಿಗರ ಅಧಿಕಾರದ ದುರಾಸೆಯಿಂದ ಮತ್ತೆ ಚುನಾವಣೆ ಬಂದಿದೆ. ಉಪಚುನಾವಣೆಯಲ್ಲೂ ಸಹ ಕಾಂಗ್ರೆಸ್ ಪಕ್ಷವನ್ನು ಒಗ್ಗಟ್ಟಿನ ಮೂಲಕ ಗೆಲ್ಲಿಸಬೇಕೆಂದರು.

ಸಭೆಯಲ್ಲಿ  ಕೆಪಿಸಿಸಿ ಸದಸ್ಯ ಡಿ.ಬಸವರಾಜ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಪಾಲಿಕೆ ಸದಸ್ಯ ಕೆ.ಚಮನ್‍ಸಾಬ್, ಎಸ್.ಮಲ್ಲಿಕಾರ್ಜುನ್, ಕೊಟ್ರಯ್ಯ, ಎನ್. ವೆಂಕಟೇಶನಾಯ್ಕ, ಹುಲ್ಮನಿ ಗಣೇಶ್, ಸೊಸೈಟಿ ವೆಂಕಟೇಶನಾಯ್ಕ, ಅಲೆಕ್ಸಾಂಡರ್ (ಜಾನ್) ಮತ್ತಿತರರು ಉಪಸ್ಥಿತರಿದ್ದರು.

error: Content is protected !!