ದಾವಣಗೆರೆ ಡಿ. 27- ಹಾವೇರಿ ಜಿಲ್ಲೆಯಲ್ಲಿ ಜರುಗಿದ 86ನೇ ಅಖಿಲ ಭಾರತ ಕನ್ನಡ ಸಮ್ಮೇಳನ ಮತ್ತು ಮಂಡ್ಯದಲ್ಲಿ ಮೊನ್ನೆ ತಾನೆ ಜರುಗಿದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಮಡ್ಯದ ಜಯಪ್ರಕಾಶ್ ಗೌಡರು ಹಗುರವಾಗಿ ಮಾತನಾಡಿರುವುದು ಅತ್ಯಂತ ದುರುದೃಷ್ಟಕರ ಹಾಗೂ ಖಂಡನೀಯವಾದದ್ದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಪತ್ರಿಕಾ ಪ್ರಕಟಣೆ ಮೂಲಕ ಖಂಡಿಸಿದ್ದಾರೆ.
ಈ ಎರಡು ಸಮ್ಮೇಳನಗಳಲ್ಲಿ ಭಾಗವಹಿಸಿದ್ದ ಲಕ್ಷಾಂತರ ಜನರು ಸಾಹಿತ್ಯ ಸಮ್ಮೇಳನವು ಅತ್ಯಂತ ಅರ್ಥಪೂರ್ಣವಾಗಿತ್ತು ಹಾಗೂ ವ್ಯವಸ್ಥಿತವಾಗಿತ್ತು ಎಂಬುದನ್ನು ತುಂಬ ಮನಸ್ಸಿನಿಂದ ಕೊಂಡಾಡಿರುವ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳ ಮೂಲಕ ಯಶಸ್ಸಿನ ಬಗ್ಗೆ ಪ್ರಸಂಶನೀಯವಾದ ವರದಿಗಳು ಬಂದಿದ್ದರೂ ಸಹ ಈ ಎರಡು ಸಮ್ಮೇಳನಗಳಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸದೇ ಇದ್ದರೂ ಮಂಡ್ಯದ ಜಯಪ್ರಕಾಶ್ ಗೌಡರವರು ಹಗುರ ಮಾತುಗಳನ್ನು ಆಡುವುದರ ಮೂಲಕ ಈ ಸಮ್ಮೇಳನಗಳಲ್ಲಿ ಭಾಗವಹಿಸಿದವರಿಗೆ ಮತ್ತು ಪ್ರಶಂಸೆ ವ್ಯಕ್ತಪಡಿಸಿದ ಪ್ರತಿಯೊಬ್ಬರಿಗೂ ಮತ್ತು ಮಾಧ್ಯಮದವರಿಗೂ ಆಗೌರವ ತೋರಿದ್ದಾರೆ ಎಂದು ಭಾವಿಸಬೇಕಾಗುತ್ತದೆ.
ಜಯಪ್ರಕಾಶ ಗೌಡರು ತಕ್ಷಣ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ಹಾವೇರಿ ಮತ್ತು ಮಂಡ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಮತ್ತು ಭಾಗವಹಿಸಿದ ಪ್ರತಿಯೊಬ್ಬರನ್ನು ಅಭಿನಂದಿಸಿದರೆ ತಮ್ಮ ಘನತೆ ಮತ್ತು ಗೌರವ ಹೆಚ್ಚಾಗುತ್ತದೆ. ಇಲ್ಲವಾದರೆ ದಾವಣಗೆರೆ ಜಿಲ್ಲಾ ಮತ್ತು ಎಲ್ಲಾ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಪರವಾಗಿ ಮತ್ತು ಸಮಸ್ತ ಜಿಲ್ಲಾ ಕನ್ನಡದ ಅಭಿಮಾನಗಳ ಪರವಾಗಿ ಅವರ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದ್ದಾರೆ.