ಕಂದಾಯ ಅಧಿಕಾರಿ ಮನೆಯಲ್ಲಿ ಕಳ್ಳತನ

ದಾವಣಗೆರೆ, ಆ.22-  ಬೆಂಗಳೂರಿನಲ್ಲಿ ಕಂದಾಯ ಅಧಿಕಾರಿಯಾಗಿರುವ ಎಂ.ಎನ್. ಜೀವಣ್ಣ ಅವರ ಆಂಜನೇಯ ಬಡಾವಣೆಯ ನಿವಾಸದಲ್ಲಿ ಕಳ್ಳರು ಒಂದು ಮಾರುತಿ ಸುಜುಕಿ ಬ್ರೀಜಾ ಕಾರು, ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ್ದಾರೆ.

ಒಂದು ವರ್ಷದ ಹಿಂದೆ ಜೀವಣ್ಣ ಅವರಿಗೆ ಬೆಂಗಳೂರಿಗೆ ವರ್ಗವಾಗಿತ್ತು. ಅವರ ಪುತ್ರ ಪ್ರತೀಕ್ ಇಲ್ಲಿನ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಇದೇ ಮನೆಯಲ್ಲಿ ಉಳಿದುಕೊಂಡಿದ್ದರು. ಆ.18ರಂದು ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋಗಿದ್ದು, ಆಗಸ್ಟ್ 20ರಂದು ವಾಪಸ್ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ.

ಮನೆಯ ಹೊರಗಡೆ ನಿಂತಿದ್ದ 13 ಲಕ್ಷ ಮೌಲ್ಯದ ಮಾರುತಿ ಸುಜುಕಿ ಬ್ರೆಜಾ ಕಾರು, ಮನೆಯ ಒಳಗೆ ನುಗ್ಗಿರುವ ಕಳ್ಳರು ಬೀರುವಿನ ಬೀಗ ಮುರಿದು 1,75,000 ನಗದು ಹಾಗೂ 12 ರೇಷ್ಮೆ ಸೀರೆಗಳು ಹಾಗೂ ಬಂಗಾರ ಹಾಗೂ ಬೆಳ್ಳಿ ಆಭರಣಗಳು ಸೇರಿದಂತೆ 29 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿದ್ದು, ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!