ತಾಲ್ಲೂಕು ಕಸಾಪ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಸಂತಸ
ಚನ್ನಗಿರಿ, ಫೆ.20- ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಬಹುವರ್ಷಗಳ ಬೇಡಿಕೆಯಾದ ಕನ್ನಡ ಸಾಹಿತ್ಯ ಭವನದ ನಿರ್ಮಾಣಕ್ಕೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಶಿಫಾರಸ್ಸಿನ ಪರಿಣಾಮವಾಗಿ ನಿವೇಶನ ಮಂಜೂರಾಗಿದ್ದು, ಪರಿಷತ್ತಿನ ಸದಸ್ಯರು, ಕನ್ನಡಾಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಚನ್ನಗಿರಿ ಸಮೀಪದ ಅಜ್ಜಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕೂಲಿಕೆರೆ ಗ್ರಾಮದಲ್ಲಿ 80×60 ಅಳತೆಯ ವಿಶಾಲವಾದ ನಿವೇಶನವು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಮಂಜೂರಾಗಿದೆ.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವಾಪಟ್ಟಣದ ಎಲ್.ಜಿ.ಮಧುಕುಮಾರ್ ನೇತೃತ್ವದಲ್ಲಿ ಪರಿಷತ್ತಿನ ಪದಾಧಿಕಾರಿಗಳು ಶಾಸಕ ಹಾಗೂ ಕೆಎಸ್ಡಿಎಲ್ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪನವರಿಗೆ ಅಭಿನಂದನೆ ಸಲ್ಲಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಚನ್ನಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಘಟಕವು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕವಾಗಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿ ಸುತ್ತಿದ್ದು, ಇದನ್ನು ಮನಗಂಡು ತಾಲ್ಲೂಕಿನಲ್ಲಿ ಸಾಹಿತ್ಯದ ಚಟುವಟಿಕೆಗಳು ನಿರಂತರವಾಗಿ ಸಾಗುತ್ತಿರಲಿ ಎಂಬ ಸದುದ್ಧೇಶದಿಂದ ನಿವೇಶನವನ್ನು ಮಂಜೂರು ಮಾಡಿಸ ಲಾಗಿದೆ. ಶೀಘ್ರದಲ್ಲೇ ಅವಶ್ಯವಿರುವ ಅನುದಾನವನ್ನು ಬಿಡುಗಡೆ ಮಾಡಿಸಿ, ಕನ್ನಡ ಸಾಹಿತ್ಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಕನ್ನಡ ಭವನದ ನಿರ್ಮಾಣಕ್ಕೆ ಅಂದಾಜು 50 ಲಕ್ಷ ರೂ.ಗಳ ಅವಶ್ಯಕತೆಯಿದ್ದು ಅನುದಾನವನ್ನು ನೀಡಿ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸಬೇಕಾಗಿದೆ ಎಂದು ಕಸಾಪ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಮನವಿ ಮಾಡಿದ್ದಾರೆ.
ಕಸಾಪ ಪದಾಧಿಕಾರಿಗಳಾದ ಮಾಜಿ ಅಧ್ಯಕ್ಷ ಎಂ.ಯು.ಚನ್ನಬಸಪ್ಪ, ಅಜ್ಜಿಹಳ್ಳಿ ಗ್ರಾಪಂ ಉಪಾಧ್ಯಕ್ಷ ಜಿ.ಎಸ್.ಸಂಗಮ್, ಕಸಾಪ ಕಾರ್ಯದರ್ಶಿ ಮಂಟರಘಟ್ಟ ಬಸವನಗೌಡ, ಹೊದಿಗೆರೆ ಪ್ರಭಾಕರ್, ಕೋಶಾಧ್ಯಕ್ಷ ಬಿ.ಇ.ಸಿದ್ದಪ್ಪ, ಜಿಲ್ಲಾ ಸಹ ಕಾರ್ಯದರ್ಶಿ ಕೆ.ಎಸ್.ವೀರೇಶ ಪ್ರಸಾದ್, ಮಾದೇನಹಳ್ಳಿ ಓಂಕಾರಮೂರ್ತಿ ಮತ್ತಿತರರು ಇದ್ದರು.