ಶಿಥಿಲ ಜಿಲ್ಲಾ ಚಿಗಟೇರಿ ಆಸ್ಪತ್ರೆಯನ್ನು ಪುನರ್ ನಿರ್ಮಿಸಿ

ಶಿಥಿಲ ಜಿಲ್ಲಾ ಚಿಗಟೇರಿ ಆಸ್ಪತ್ರೆಯನ್ನು ಪುನರ್ ನಿರ್ಮಿಸಿ

ವಿಧಾನಸಭೆಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಆಗ್ರಹ 

ಬೆಂಗಳೂರು,ಮಾ.21-    ಬಡ ರೋಗಿಗಳ ಜೀವನಾಡಿ ಆಗಿರುವ   ಚಿಗಟೇರಿ ಜಿಲ್ಲಾಸ್ಪತ್ರೆ   ಶಿಥಿಲ ಗೊಂಡಿ ದ್ದು, ಅದರ ಪುನರ್ ನಿರ್ಮಾಣ ಮಾಡಿ, ಅಗತ್ಯ ಸೌಲಭ್ಯಗಳನ್ನು ಒದಗಿ ಸುವಂತೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ  ವಿಧಾನಸಭೆಯಲ್ಲಿ ಇಂದು ಆಗ್ರಹಿಸಿದರು.

ಅಧಿವೇಶನದ  ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಶಾಸಕರು, ನನ್ನ ಕ್ಷೇತ್ರವಲ್ಲದೇ, ಸುತ್ತಮುತ್ತಲ ಜಿಲ್ಲೆಗಳ ಬಡವರು, ಕೂಲಿ ಕಾರ್ಮಿಕರು, ರೈತರು ಜಿಲ್ಲಾ ಆಸ್ಪತ್ರೆಯನ್ನೇ ಆಶ್ರಯಿಸಿದ್ದಾರೆ. ಕೋವಿಡ್ ವೇಳೆ ಹಿಂದಿನ ಜಿಲ್ಲಾಧಿಕಾರಿಗಳು 10 ವೆಂಟಿಲೇಟರ್ ತರಿಸಿದ್ದರು.ಆದರೆ ಬರೀ ಚಿಕಿತ್ಸೆ ಕೊಟ್ಟು, 10 ವೆಂಟಿಲೇಟರ್ ಮೂಲೆಗೆ ಸರಿಸಿದರು. ಆಸ್ಪತ್ರೆಯಲ್ಲಿ ಕೇವಲ 5 ಔಷಧಿ ವೆಂಟಿಲೇಟರ್ ಮಾತ್ರ ಇವೆ. ಇದರಲ್ಲಿ ಒಂದು ಒಬಿಜಿಗೆ ಇಟ್ಟಿದ್ದಾರೆ, ಇವು ಸಾಕಾಗಲ್ಲ. ಏಕೆಂದರೆ ಪ್ರತಿನಿತ್ಯ ಎರಡು ಸಾವಿರ ಹೊರ ರೋಗಿಗಳು ಬರುತ್ತಾರೆ. ಆದರೆ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಆರೋಗ್ಯ ಸಚಿವರೂ ಕೂಡ ಭೇಟಿ ನೀಡಿದಾಗ ಜಿಲ್ಲಾಸ್ಪತ್ರೆಯಲ್ಲಿನ ಸಮಸ್ಯೆ ಗಳ ಬಗ್ಗೆ ಅವರಿಗೆ ಮನವರಿಕೆಯಾಗಿದೆ.

ಇಲ್ಲಿಂದ ರೆಫರಲ್ ಮೇಲೆ ಖಾಸಗಿ ಆಸ್ಪತ್ರೆಗೆ ಹೋಗುವ ಒಬ್ಬ ರೋಗಿಗೆ ವೆಂಟಿಲೇಟರ್ ಹಾಕಲು ದಿನಕ್ಕೆ 25 ಸಾವಿರದಂತೆ ನಾಲ್ಕು ದಿನಕ್ಕೆ 1 ಲಕ್ಷ ರೂ. ಭರಿಸಬೇಕಿದೆ. ಬಡವರು ಇಷ್ಟೊಂದು ಹಣ ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದ ಶಾಸಕರು, ವೆಂಟಿಲೇಟರ್ 20 ಇವೆ ಎಂದು ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಕೂಡಲೇ ಆರೋಗ್ಯ ಸಚಿವರು 20ಕ್ಕೂ ಹೆಚ್ಚು ವೆಂಟಿಲೇಟರ್ ಎಂಆರ್‌ಐ ಸ್ಕ್ಯಾನಿಂಗ್ ಸೌಲಭ್ಯ ಕಲ್ಪಿಸಿ ಬಡವರ ಜೀವ ಕಾಪಾಡಬೇಕೆಂದು ಒತ್ತಾಯಿಸಿದರು.

ಶಾಸಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶಾಸಕರು ಐದು ಇವೆ ಎಂದು ಹೇಳುತ್ತಿದ್ದಾರೆ. ನಮ್ಮ ಮಾಹಿತಿ ಪ್ರಕಾರ, ಜಿಲ್ಲಾಸ್ಪತ್ರೆಯಲ್ಲಿ 46 ವೆಂಟಿಲೇಟರ್ ಇವೆ. ಅದರಲ್ಲಿ 21 ವೆಂಟಿಲೇಟರ್ ಕೆಲಸ ಮಾಡುತ್ತಿವೆ. ಇನ್ನುಳಿದ 25 ವೆಂಟಿಲೇಟರ್ ದುರಸ್ತಿಯಲ್ಲಿವೆ. ಇವು ಪಿಎಂ ಕೇರ್‍ನಡಿ ಬಂದವು. ನಿರ್ವಹಣೆ ಇಲ್ಲದೆ ದುರಸ್ತಿ ಯಲ್ಲಿವೆ. 21 ವೆಂಟಿಲೇಟರ್ ಕೆಲಸ ಮಾಡುತ್ತಿವೆ ಎಂಬ ಸ್ಪಷ್ಟ ಮಾಹಿತಿ ಇದೆ. ಒಂದು ವೇಳೆ ಇಲ್ಲದಿದ್ದರೆ ಮತ್ತೊಮ್ಮೆ ಪರಿಶೀಲಿಸಿ ಸರಿಪಡಿಸುತ್ತೇವೆ. ಇನ್ನು ಎಂಆರ್‌ಐ ಸ್ಕ್ಯಾನಿಂಗ್ ಕೇಳಿದ್ದಾರೆ. 14 ಜಿಲ್ಲೆಗಳಿಗೆ ಪಿಪಿಪಿ ಮಾದರಿಯಲ್ಲಿ ಎಂಆರ್‍ಐ ಸ್ಕ್ಯಾನಿಂಗ್ ಕೊಡಲು ಈಗಾಗಲೇ ತೀರ್ಮಾನಿಸಿದ್ದೇವೆ. ಅಲ್ಲದೇ ಮೈಸೂರು ಮತ್ತು ದಾವಣಗೆರೆಗೆ ಸರ್ಕಾರದಿಂದಲೇ ಖರೀದಿಸಿ ಕೊಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆ ಶಿಥಿಲಗೊಂಡು ಬಹಳ ಕೆಟ್ಟ ಪರಿಸ್ಥಿತಿಯಲ್ಲಿದೆ. ಹೀಗಾಗಿ ಈ ಬಾರಿ ಬಜೆಟ್‍ನಲ್ಲಿ 200 ಕೋಟಿಗಿಂತ ಹೆಚ್ಚು ಅನುದಾನದಿಂದ ಸಂಪೂರ್ಣ ಪುನರ್ ನಿರ್ಮಾಣ ಮಾಡುವುದಕ್ಕೆ ಕ್ರಮ ತೆಗೆದು ಕೊಂಡಿದ್ದೇವೆ ಎಂದು ಆರೋಗ್ಯ ಸಚಿವರು   ಉತ್ತರಿಸಿದರು.  

 ಸಚಿವರ ಮೆಚ್ಚುಗೆ: ಸದನದಲ್ಲಿ ಸತತವಾಗಿ 20 ನಿಮಿಷಗಳ ಕಾಲ ಬಡವರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ, ಶಾಸಕ ಬಸವಂತಪ್ಪನವರಿಗೆ ಬಡವರ ಬಗ್ಗೆ ಕಾಳಜಿ ಇದೆ. ಹೀಗಾಗಿಯೇ ಜನರಿಗೆ ಏನು ಬೇಕು, ಆ ವಿಷಯದ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ ಜನಪರ ಕಾಳಜಿ ತೋರಿಸಿದ್ದಾರೆ. ಅಲ್ಲದೇ ಶಾಸಕರಾಗುವುದಕ್ಕೂ ಮೊದಲ ಜಿಲ್ಲಾಸ್ಪತ್ರೆ ಯೊಂದಿಗೆ ನಿರಂತರವಾಗಿ ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ. ಈ ಬಗ್ಗೆ ನನಗೆ ಅರಿವಿದೆ ಎಂದು ಆರೋಗ್ಯ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

error: Content is protected !!