ತ್ರೈಮಾಸಿಕ ಅಂತ್ಯದ ಬ್ಯಾಂಕರ್ ಸಭೆಯಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆ, ಮಾ. 9 – ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಬ್ಯಾಂಕ್ಗಳು ಹೆಚ್ಚಿನ ಸಾಲ, ಸೌಲಭ್ಯ ಒದಗಿಸುವ ಕೆಲಸ ಮಾಡಬೇಕೆಂದು ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೊನ್ನೆ ನಡೆದ ಬ್ಯಾಂಕರ್ ತ್ರೈಮಾಸಿಕ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ವೃತ್ತಿಪರ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಒದಗಿಸಬೇಕು. ಇದರಿಂದ ಅವರ ಮುಂದಿನ ಭವಿಷ್ಯ ಉತ್ತಮವಾಗಲಿದೆ ಮತ್ತು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಲು ಬ್ಯಾಂಕ್ಗಳಲ್ಲಿ ಅವರಿಗೆ ಸಿಗುವ ಸಾಲ, ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಅವರು ತಿಳಿಸಿದರು.
ಶೈಕ್ಷಣಿಕ ಸಾಲವಾಗಿ ಡಿಸೆಂಬರ್ನಲ್ಲಿ 5954 ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದು ಇದರಲ್ಲಿ 2665 ಮಹಿಳೆಯರು ಇದ್ದಾರೆ. ಮತ್ತು ಪಿಎಂ ವಿಶ್ವಕರ್ಮ ಯೋಜನೆಯಡಿ 11,731 ಅರ್ಜಿಗಳನ್ನು ಸ್ವೀಕರಿಸಿದ್ದು ಇದರಲ್ಲಿ 4768 ಕ್ಕೆ ಮಂಜೂರಾತಿ ನೀಡಿ, 5357 ಅರ್ಜಿಯನ್ನು ತಿರಸ್ಕರಿಸಲಾಗಿದೆ. ಇನ್ನೂ 1606 ಅಭ್ಯರ್ಥಿಗಳ ಅರ್ಜಿಗಳು ಬಾಕಿ ಇದ್ದು ಆದಷ್ಟು ಬೇಗ ಇತ್ಯರ್ಥ ಮಾಡಿ ಸೌಲಭ್ಯ ನೀಡಲು ಸೂಚನೆ ನೀಡಿ ಮಂಜೂರಾತಿಗಿಂತಲೂ ತಿರಸ್ಕರಿಸಿದ ಅರ್ಜಿಗಳು ಹೆಚ್ಚಿದ್ದು ವಿನಾಕಾರಣ ಅರ್ಜಿಗಳನ್ನು ತಿರಸ್ಕರಿಸಬಾರದು ಎಂದರು.
ಬ್ಯಾಂಕ್ಗಳಿಂದ ಶೈಕ್ಷಣಿಕ ಸಾಲ, ಮನೆ ಸಾಲ, ವೃತ್ತಿಪರ ಸಾಲ ಹೀಗೆ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ಜನರಿಗೆ ಒದಗಿಸಿ ಸಬಲೀಕರಣ ಗೊಳಿಸಬೇಕು. ಬ್ಯಾಂಕ್ಗೆ ಸಾರ್ವಜನಿಕರು ಬಂದಾಗ ಸರಿಯಾದ ರೀತಿ ಸಹಕರಿಸಿ, ಯೋಜನೆಗಳ ಬಗ್ಗೆ ಸೂಕ್ತ ಮಾಹಿತಿ ನೀಡಿ ಸದುಪಯೋಗಪಡಿಸಿಕೊಳ್ಳುವಂತೆ ಮಾಹಿತಿ ನೀಡಬೇಕು. ಸರ್ಕಾರದ ಯೋಜನೆಗಳನ್ನು ಸರಿಯಾದ ವ್ಯಕ್ತಿಗಳಿಗೆ ಸರಿಯಾದ ಸಮಯಕ್ಕೆ ತಲುಪಿಸುವ ಕಾರ್ಯ ಆಗಬೇಕಿದೆ ಎಂದರು.
ಅಷ್ಟೇ ಅಲ್ಲದೆ ಪಿಎಂ ವಿಶ್ವಕರ್ಮ ಯೋಜನೆ, ಮುದ್ರಾ ಯೋಜನೆ ಇನ್ನಿತರೆ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳಿಗೆ ಸ್ವಂತ ಉದ್ಯೋಗ ಕೈಗೊಳ್ಳಲು ಕೌಶಲ್ಯ ತರಬೇತಿಗಳನ್ನು ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿ.ಪಂ. ಸಿಇಓ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಶೈಕ್ಷಣಿಕ ಸಾಲ ಯೋಜನೆ, ಪಿಎಂಜೆಜೆವೈ, ಮುದ್ರಾ ಯೋಜನೆ, ಪ್ರಧಾನ ಮಂತ್ರಿ ಆವಾಜ್ ಯೋಜನೆಯಲ್ಲಿನ ಅರ್ಹರಿಗೆ ಸಾಲ ಸೌಲಭ್ಯ ನೀಡಬೇಕು. ಹಾಗೆಯೆ ನಗರ, ಗ್ರಾಮೀಣ ಫಲಾನುಭವಿಗಳಿಗೆ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ, ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವ ಮೂಲಕ ಮತ್ತಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದರು.
ಸಭೆಯಲ್ಲಿ ನಬಾರ್ಡ್ ಅಧಿಕಾರಿ ರಶ್ಮಿ ರೇಖಾ, ಆರ್ಬಿಐ ಎಜಿಎಂ ಅರುಣ್ ಕುಮಾರ್, ಲೀಡ್ ಬ್ಯಾಂಕ್ ಮ್ಯಾನೇಜರ್ ಸಿದ್ದಾರ್ಥ್ ಎಸ್ ಆಚಾರ್ಯ, ಕೆನರಾ ಬ್ಯಾಂಕ್ ಎಜಿಎಂ ವೈ ವಿ.ಎನ್ ಶಿವಪ್ರಸಾದ್ ಸೇರಿದಂತೆ ವಿವಿಧ ಬ್ಯಾಂಕ್ಗಳ ಮ್ಯಾನೇಜರ್ಗಳು ಉಪಸ್ಥಿತರಿದ್ದರು.