‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ವಿಜ್ಞಾನಿ ಡಾ.ಎಂ.ಜಿ. ಬಸವನಗೌಡ
ಜಗಳೂರು, ಮಾ.3- ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಕೃಷಿಯಲ್ಲಿ ವಿಜ್ಞಾನದ ಬಳಕೆ ಅನಿವಾರ್ಯವಾಗಿದೆ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಎಂ.ಜಿ. ಬಸವನಗೌಡ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬಸಪ್ಪನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ಯ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಂಪ್ರದಾಯಿಕ ಕೃಷಿಯಿಂದ ಇಂದು ತಂತ್ರಜ್ಞಾನದ ಕೃಷಿಗೆ ಬದಲಾಗಬೇಕಾದ ಅನಿವಾರ್ಯವಿದೆ. ಒಂದೆಡೆ ಉತ್ಪಾದನೆ ಹೆಚ್ಚಿಸುವ ಸವಾಲಾದರೆ ಮತ್ತೊಂದೆಡೆ ಭೂಮಿಯ ಆರೋಗ್ಯವನ್ನು ಕಾಪಾಡುವ ಅನಿವಾರ್ಯತೆ ಇದೆ. ಹಾಗಾಗಿ ಕೃಷಿಯಲ್ಲಿ ಇಂದು ಸಮಗ್ರ ಮತ್ತು ಸುಸ್ಥಿರತೆಯನ್ನು ಕಾಪಾಡಲು ವೈಜ್ಞಾನಿಕ ಅಂಶಗಳ ಅಳವಡಿಕೆ ಅಗತ್ಯ ಎಂದು ತಿಳಿಸಿದರು.
ಈ ವರ್ಷದ ಧ್ಯೇಯ ಘೋಷಣೆ `ವಿಕಸಿತ ಭಾರತದಲ್ಲಿ ಅನ್ವೇಷಣೆ ಮತ್ತು ಜಾಗತಿಕ ನಾಯಕತ್ವಕ್ಕಾಗಿ ಯುವಪೀಳಿಗೆ ಯನ್ನು ಸದೃಢಗೊಳಿಸುವುದು’ ಎಂಬುದಾಗಿದೆ. ಆದುದರಿಂದ ಇಂದು ಕೃಷಿಯಲ್ಲಿ ಯುವ ಪೀಳಿಗೆಯನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳುವುದರಿಂದ ನಾವು ತಂತ್ರಜ್ಞಾನಗಳನ್ನು ವೇಗವಾಗಿ ಅಳವಡಿಸಿ ಕೊಳ್ಳಲು ಸಾಧ್ಯವೆಂದು ತಿಳಿಸಿದರು.
ಕೇಂದ್ರದ ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ್ ಮಾತನಾಡಿ, ಇಂದು ಕೃಷಿಯಲ್ಲಿ ಡ್ರೋನ್ಗಳ ಬಳಕೆಯಿಂದ ಸಿಂಪರಣಾ ವೆಚ್ಚ ಕಡಿಮೆಯಾಗುತ್ತಿರುವುದಲ್ಲದೇ ಸಮಯದ ಉಳಿತಾಯವೂ ಸಹ ಆಗುತ್ತಿದೆ ಎಂದರು.
ಗೃಹ ವಿಜ್ಞಾನಿ ಡಾ. ಸುಪ್ರಿಯಾ ಪಿ. ಪಾಟೀಲ್ ಮಾತನಾಡಿ, ಅಪೌಷ್ಠಿಕತೆಯಿಂದ ಮಹಿಳೆ ಮತ್ತು ಮಕ್ಕಳನ್ನು ಪಾರು ಮಾಡಲು ಸತ್ವವುಳ್ಳ ಹಣ್ಣು ತರಕಾರಿಗಳ ಸೇವನೆ ಅವಶ್ಯಕವೆಂದು ತಿಳಿಸಿದರು. ಪರಿಶಿಷ್ಠ ಪಂಗಡ ಉಪಯೋಜನೆಯಲ್ಲಿ 50 ಪೌಷ್ಠಿಕ ಕೈತೋಟ ನಿರ್ಮಾಣದಿಂದ ಇಂದು ಗ್ರಾಮದ ಜನತೆಯಲ್ಲಿ ಉತ್ತಮ ಆರೋಗ್ಯವನ್ನು ಕಾಣುತ್ತಿದ್ದೇವೆ ಎಂದು ತಿಳಿಸಿದರು.
ಗ್ರಾಮದ ಮುಖಂಡರಾದ ಕೃಷ್ಣಮೂರ್ತಿ, ಶಶಿಧರ, ಸಣ್ಣಸೂರಯ್ಯ, ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಹೆಚ್ಚಿನದಾಗಿ ಭಾಗವಹಿಸಿದ್ದರು.