ಉಕ್ಕಡಗಾತ್ರಿ ಅಜ್ಜಯ್ಯನ ಮಹಾರಥೋತ್ಸವಕ್ಕೆ ಜನಸಾಗರ

ಉಕ್ಕಡಗಾತ್ರಿ ಅಜ್ಜಯ್ಯನ ಮಹಾರಥೋತ್ಸವಕ್ಕೆ ಜನಸಾಗರ

ಮಲೇಬೆನ್ನೂರು, ಮಾ.1- ದಕ್ಷಿಣ ಭಾರತದ ಕಾಶಿ ಕ್ಷೇತ್ರವೆನಿಸಿರುವ ಮತ್ತು ಪವಾಡಗಳ ಪುಣ್ಯಭೂಮಿಯಾಗಿರುವ ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಮಹಾರಥೋತ್ಸವವು  ಇಂದು ಬೆಳಿಗ್ಗೆ ಜನಸಾಗರದ ನಡುವೆ ವಿಜೃಂಭಣೆಯಿಂದ ನಡೆಯಿತು.

ರಥದಲ್ಲಿ ಅಜ್ಜಯ್ಯನ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಿದ ನಂತರ ನಂದಿಗುಡಿ ಬೃಹನ್ಮಠದ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು.

ಈ ವೇಳೆ ನೆರೆದಿದ್ದ ಸಾವಿರಾರು ಭಕ್ತರು ಅಜ್ಜಯ್ಯ… ಅಜ್ಜಯ್ಯ… ಎಂಬ ಜಯಘೋಷಗಳೊಂದಿಗೆ ರಥವನ್ನು ಎಳೆದು ಸಂಭ್ರಮಿಸಿದರು.

ರಥೋತ್ಸವದ ಸಂದರ್ಭದಲ್ಲಿ ಭಕ್ತರು ರಥದ ಮೇಲೆ ಮಂಡಕ್ಕಿ – ಮೆಣಸಿನಕಾಳು, ಜೋಳ ಮತ್ತು ಬಾಳೆಹಣ್ಣುಗಳನ್ನು ಎಸೆದು ಭಕ್ತಿ ಸಮರ್ಪಿಸಿದರು.

ಕರ್ನಾಟಕದ ಹಲವಾರು ಜಿಲ್ಲೆಗಳು ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಂದಲೂ ಬಂದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥೋತ್ಸವದ ವೇಳೆ ಅಪಾರ ಜನ ಭಾಗವಹಿಸಿದ್ದರಿಂದ ಕೆಲ ಕಾಲ ನೂಕು – ನುಗ್ಗಲು ಉಂಟಾಯಿತು. ಜನರನ್ನು ನಿಯಂತ್ರಿಸಲು ಪೊಲೀಸರು ಮತ್ತು ದೇವಸ್ಥಾನದ ಟ್ರಸ್ಟ್ ಸಮಿತಿ ಹಾಗೂ ಸ್ವಯಂ ಸೇವಕರು ಹರಸಾಹಸ ಪಟ್ಟರು.

ಪುಣ್ಯ ಸ್ನಾನ : ಒಂದು ವಾರ ಕಾಲ ನಡೆಯುವ ಅಜ್ಜಯ್ಯನ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುತ್ತಿರುವ ಭಕ್ತರು, ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಅಜ್ಜಯ್ಯನ ಗದ್ದಿಗೆ ದರ್ಶನ ಪಡೆದರು.

ಅನೇಕರು ನದಿ ದಡದಲ್ಲೇ ಅಡುಗೆ ಮಾಡಿ, ಗಂಗೆ ಪೂಜೆ ಸಲ್ಲಿಸಿ, ಅಜ್ಜಯ್ಯನಿಗೆ ಎಡೆ ಮಾಡುತ್ತಿರುವುದು ಗಮನ ಸೆಳೆಯಿತು.

ನದಿಯಲ್ಲಿ ನೀರಿನ ಹರಿವು ಬಹಳ ಕಡಿಮೆ ಇದ್ದ ಕಾರಣ ಜನರು ನದಿಯ ನಡುಗಡ್ಡೆಯಲ್ಲಿ ಬಿಡಾರ ಹಾಕಿ ಅಲ್ಲಿಯೇ ತಂಗಿದ್ದರು. ದೇವಸ್ಥಾನದ ಕಲ್ಯಾಣ ಮಂಟಪಗಳು ಮತ್ತು ಎಲ್ಲಾ ವಸತಿ ಗೃಹಗಳು ಭರ್ತಿಯಾಗಿದ್ದರಿಂದ ಭಕ್ತರು ಗ್ರಾಮದ ಹೊರ ವಲಯದಲ್ಲಿರುವ ತೋಟಗಳಲ್ಲಿ ಬಿಡಾರ ಹಾಕಿದ್ದರು.

ದೇವಸ್ಥಾನ ನಿಗದಿ ಮಾಡಿದ್ದ ಪಾರ್ಕಿಂಗ್ ಸ್ಥಳಗಳು ಫುಲ್ ಆಗಿದ್ದರಿಂದ ಪತ್ತೇಪುರ ರಸ್ತೆ, ಮಾಳನಾಯಕನಹಳ್ಳಿ ರಸ್ತೆ, ಕೋಟೆಹಾಳ್ ರಸ್ತೆಯಲ್ಲೂ ಜನ ತಮ್ಮ ವಾಹನಗಳನ್ನು ನಿಲ್ಲಿಸಿದ್ದರು.

ಇದೇ ದಿನಾಂಕ 7 ರವರೆಗೂ ಅಜ್ಜಯ್ಯನ ಜಾತ್ರೆ ನಡೆಯಲಿದ್ದು, ಹರಿಹರ, ದಾವಣಗೆರೆ, ಹೊನ್ನಾಳಿ, ರಾಣೇಬೆನ್ನೂರು, ಹಿರೇಕೆರೂರು, ರಟ್ಟಿಹಳ್ಳಿ, ತುಮ್ಮಿನಕಟ್ಟೆಯಿಂದ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ.

ದೇವಸ್ಥಾನದ ದಾಸೋಹ ಭವನದಲ್ಲಿ ಅನ್ನ ದಾಸೋಹ ನಿರಂತರವಾಗಿ ನಡೆಯುತ್ತಿದ್ದು, ಭಕ್ತರು ಸ್ವಚ್ಛತೆಗೆ ಒತ್ತು ನೀಡಿ, ಸಹಕರಿಸುವಂತೆ ಗದ್ದಿಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಎಸ್.ಸುರೇಶ್ ಮನವಿ ಮಾಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಸವರಾಜ್, ಸಿಪಿಐ ಸುರೇಶ್ ಸಗರಿ, ಪಿಎಸ್ಐ ಪ್ರಭು ಕೆಳಗಿನಮನಿ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ದೇವಸ್ಥಾನದ ಗದ್ದಿಗೆ ಟ್ರಸ್ಟ್ ಕಮಿಟಿಯ ಟ್ರಸ್ಟಿಗಳಾದ ಜಿಗಳಿ ಇಂದೂಧರ್, ಪ್ರಕಾಶ್ ಕೋಟೇರ, ಗದಿಗೆಪ್ಪ ಹೊಸಳ್ಳಿ, ಗದಿಗೆಯ್ಯ ಪಾಟೀಲ್, ನಾಗರಾಜ್ ದಿಲ್ಲಿವಾಲ, ವಿವೇಕಾನಂದ ಪಾಟೀಲ್, ಬಸವನಗೌಡ ಪಾಳೇದ್, ವೀರನಗೌಡ ಹಲಗಪ್ಪನವರ ಹಾಜರಿದ್ದು, ರಥೋತ್ಸವದ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸಿದರು.

error: Content is protected !!