ಮತ್ತೆ ಕರ್ನಾಟಕಕ್ಕೆ ಅನ್ಯಾಯ ; ಮಲತಾಯಿ ಧೋರಣೆ

ಮತ್ತೆ ಕರ್ನಾಟಕಕ್ಕೆ ಅನ್ಯಾಯ ; ಮಲತಾಯಿ ಧೋರಣೆ

ದಾವಣಗೆರೆ. ಫೆ. 1- ಕೇಂದ್ರ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ಅವರು ಮಂಡಿಸಿದ 2025-26 ನೇ ಸಾಲಿನ ಕೇಂದ್ರ ಬಜೆಟ್  ನಲ್ಲಿ ಕರ್ನಾ ಟಕಕ್ಕೆ ಅನ್ಯಾಯ ಮಾಡಲಾಗಿದೆ. ಇದೊಂದು ನಿರಾಶದಾಯಕ ಬಜೆಟ್ ಎಂದು ಸಂಸದ ರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಸಂಸದರು, ಅತೀ ಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕಕ್ಕೆ ಮತ್ತೆ ಅನ್ಯಾಯ‌ ಮಾಡಲಾಗಿದೆ ಹಾಗೂ ಮಲತಾಯಿ ಧೋರಣೆ ಅನುಸರಿಸಲಾಗಿದೆ. ಆದರೆ ಬಿಹಾರ ರಾಜ್ಯಕ್ಕೆ ಮಾತ್ರ ಕೊಡುಗೆಗಳ‌ ಮಹಾಪೂರವನ್ನೇ ಹರಿಸಲಾಗಿದೆ ಎಂದಿದ್ದಾರೆ.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ  ಹಾಗೂ ಡಿಸಿಎಂ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ 28 ಅಂಶಗಳಿರುವ ಬೇಡಿಕೆ ಸಲ್ಲಿಸಲಾಗಿತ್ತು ಹಾಗೂ ಈ ಬಾರಿ ಸಾಕಷ್ಟು ನಿರೀಕ್ಷೆ ಇತ್ತು. ಆದರೆ ಕೇಂದ್ರ ಸರ್ಕಾರದ 4 ಎಂಜಿನ್ ಗಳು ಹಳಿಬಿಟ್ಟು ಹೋಗಿವೆ‌‌ ಎಂದರು. ನಬಾರ್ಡ್‌ನಲ್ಲಿ ಆಗಿರುವ ಅನುದಾನದ ಕೊರತೆ ಅಥವಾ ಆರೋಗ್ಯ ಕ್ಷೇತ್ರಕ್ಕೆ ಬರಬೇಕಾದ ಅನುದಾನದ ಬಗ್ಗೆಯೂ ರಾಜ್ಯ ಸರ್ಕಾರದಿಂದ ಮನವಿ ಮಾಡಲಾಗಿತ್ತು. ನಮ್ಮ ಯಾವ ಬೇಡಿಕೆಯೂ ಈಡೇರಿಕೆಗೆಯಾಗಿಲ್ಲ.

ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ತನ್ನ ಪಾಲಿನ ತೆರಿಗೆ ಪಾವತಿ ಮಾಡುತ್ತಾ ಬಂದಿದೆ ಆದರೆ ಕೇಂದ್ರ ಸರ್ಕಾರ ನಮಗೆ ಯಾವ ಕೊಡುಗೆಯನ್ನು ನೀಡಿಲ್ಲ. 

ಅಪ್ಪರ್ ಭದ್ರಾ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ,ಬೆಂಗಳೂರು ಅಭಿವೃದ್ಧಿ, ನೀರಾವರಿ ಯೋಜನೆಯ ಯಾವ ಬೇಡಿಕೆಯೂ ಈಡೇರಿಕೆಯಾಗಿಲ್ಲ. ರಾಷ್ಟ್ರೀಯ ವಿಪತ್ತು ನಿಧಿ ಹಾಗೂ ಡಿಆರ್ ಎಫ್ ನಿಧಿಗಳಿಂದ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದರು.

ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಡ ಹಾಗೂ ಮಧ್ಯಮ‌ ವರ್ಗದವರಿಗೆ ಡಯಾಲಿಸಿಸ್ ಸೆಂಟರ್ ನೀಡಿಲ್ಲ ದಾವಣಗೆರೆಯಲ್ಲಿ ನಮ್ಮ ಎಸ್ ಎಸ್ ಕೇರ್ ಟ್ರಸ್ಟ್‌ ಮೂಲಕ‌ ಪ್ರತಿ ತಿಂಗಳು‌ ಸುಮಾರು 500-600 ಡಯಾಲಿಸಿಸ್ ಗಳನ್ನು ನಾವು ಉಚಿತವಾಗಿ ಮಾಡುತ್ತಿದ್ದೇವೆ. ಪಿಎಂ ಪರಿಹಾರ ನಿಧಿಯ ಮೊತ್ತ ಹೆಚ್ಚಳ‌ ಮಾಡಿಲ್ಲ.

ವೈದ್ಯಕೀಯ ‌ಸೀಟ್ ಹಾಗೂ ಕಾಲೇಜು ಹೆಚ್ಚಳ ಮಾಡಿದ್ದಾರೆ. ಆದರೆ ಅದಕ್ಕೆ ತಕ್ಕಂತೆ ವೈದ್ಯರು ಹಾಗೂ ಸೌಲಭ್ಯಗಳ‌ ಕೊರತೆ ನೀಗಿಸಿಲ್ಲ.

ಅಂಗನವಾಡಿ,ಆಶಾ ಕಾರ್ಯಕರ್ತರು ಹಾಗೂ ಸಹಾಯಕಿಯರ ಅನುದಾನ ಹೆಚ್ಚಳ‌ ಮಾಡಿಲ್ಲ‌ ಇದರಿಂದ ರಾಜ್ಯದ ಮೇಲೆಯೇ ಎಲ್ಲಾ ಹೊರೆ ಏರಿಕೆಯಾಗಲಿದೆ. ಶೇ. 50 ರಷ್ಟು ಅನುದಾನ ಕೇಂದ್ರ ಸರ್ಕಾರ ನೀಡಿದರೆ ಎಲ್ಲವೂ ಅನುಕೂಲವಾಗಲಿದೆ. ಉಳಿದಂತೆ ಶಿವಮೊಗ್ಗ ಮರಿಯಮ್ಮನಹಳ್ಳಿ ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೇರಿಸಿಲ್ಲ. ಹರಿಹರ ಹೊನ್ನಾಳಿ,ಶಿವಮೊಗ್ಗ ರೈಲ್ವೆ ಯೋಜನೆ ಬಗ್ಗೆ ಪ್ರಸ್ತಾಪವಿಲ್ಲ. 

ಜಿಲ್ಲೆಗೊಂದು ವಿಮಾನ ನಿಲ್ದಾಣ ಕಲ್ಪಿಸಿದ್ದರೆ ಬೆಂಗಳೂರಿನಂತಹ ಮೆಟ್ರೋಪಾಲಿಟಿನ್ ಸಿಟಿಗಳಿಗೆ ಒತ್ತಡ ಕಡಿಮೆಯಾಗುತ್ತಿತ್ತು. ಅಲ್ಲದೇ ಉದ್ಯೋಗಾವಕಾಶಗಳು ಸಹ ಲಭ್ಯವಾಗುದ್ದವು. ಈ ಬಗ್ಗೆ ಬಜೆಟ್ ನಲ್ಲಿ ಗಮನಹರಿಸಿಲ್ಲ. ಒಟ್ಟಾರೆ ಆರ್ಥಿಕ ಭದ್ರತೆಯ ಬಗ್ಗೆ ಸ್ಪಷ್ಟತೆ ಇಲ್ಲದ ಬಜೆಟ್ ಇದಾಗಿದೆ ಎಂದಿದ್ದಾರೆ.

error: Content is protected !!